ಕರ್ನಾಟಕ

karnataka

By

Published : Oct 9, 2020, 3:26 PM IST

Updated : Oct 9, 2020, 3:44 PM IST

ETV Bharat / state

'ವಾಲ್ಮೀಕಿ ಸಮಾಜ ಯಾರಪ್ಪನ‌ ಆಸ್ತಿ‌ ಕೇಳುತ್ತಿಲ್ಲ, ನಮ್ಮ ಮೀಸಲಾತಿ ಕೇಳುತ್ತಿದ್ದೇವೆ'

ಒಂದು ವೇಳೆ ಮೀಸಲಾತಿ ಘೋಷಣೆ ಆಗದೆ ಹೋದರೆ, ಮುಂದೆ ರಾಜ್ಯಮಟ್ಟದ ವಾಲ್ಮೀಕಿ ಸಮಾಜದ ಸಭೆ ಕರೆದು ಕಳೆದ ಬಾರಿ ಪಾದಯಾತ್ರೆ ನಡೆಸಿದ ಹೋರಾಟಕ್ಕಿಂತ ದೊಡ್ಡ ಮಟ್ಟದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಸ್ವಾಮೀಜಿ ಎಚ್ಚರಿಕೆ ಕೊಟ್ಟರು.

Valmiki Gurupith Prasannanandapuri Swamiji Slams to State Government
ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಸಿಎಂಗೆ ಎಚ್ಚರಿಕೆ

ಶಿವಮೊಗ್ಗ: "ಅಕ್ಟೋಬರ್ 31 ರಂದು ವಾಲ್ಮೀಕಿ ಜಯಂತಿ ಆಚರಿಸಲಾಗುತ್ತಿದೆ. ನಮ್ಮ ಸಮಾಜಕ್ಕೆ ಸಂವಿಧಾನ ಬದ್ಧವಾಗಿ ಘೋಷಣೆ ಮಾಡಿದಂತೆ‌ ಶೇ 7.5ರಷ್ಟು ಮೀಸಲಾತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡದೆ ಹೋದರೆ ರಾಜ್ಯದ ವಾಲ್ಮೀಕಿ ಸಮಾಜ ಉಗ್ರ ಹೋರಾಟ ನಡೆಸಬೇಕಾಗುತ್ತದೆ" ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ವಾಲ್ಮೀಕಿ ಸಮಾಜದ ಸಭೆ ನಡೆಸಿದ ನಂತರ ಮಾತನಾಡಿದ ಅವರು, "ನಮ್ಮ ಸಮಾಜಕ್ಕೆ ಸಂವಿಧಾನ ಬದ್ಧವಾಗಿ‌ ಶೇ 7.5 ರಷ್ಟು ಮೀಸಲಾತಿಯನ್ನು ನೀಡುವುದಾಗಿ ಸಿಎಂ ಯಡಿಯೂರಪ್ಪ ಅಧಿಕಾರಕ್ಕೆ ಬರುವ ಮುನ್ನ ತಿಳಿಸಿದ್ದರು. ಆದರೆ, ಅಧಿಕಾರಕ್ಕೆ ಬಂದು ಇಷ್ಟು ದಿನವಾದರೂ ಸಹ ನಮ್ಮ ಬೇಡಿಕೆ ಈಡೇರಿಲ್ಲ. ಹೀಗಾಗಿ, ಅಕ್ಟೋಬರ್ ‌ 31 ರಂದು ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯುವ ವಾಲ್ಮೀಕಿ ಜಯಂತಿಯಂದು ರಾಜ್ಯದ ವಾಲ್ಮೀಕಿ ಸಮಾಜ‌ ನಿಮ್ಮ ಬಳಿ ಬರಲಿದೆ" ಎಂದು ಸಿಎಂಗೆ ಅವರು ತಿಳಿಸಿದರು.

ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಎಚ್ಚರಿಕೆ

"ಒಂದು ವೇಳೆ ಮೀಸಲಾತಿ ಘೋಷಣೆ ಆಗದೆ ಹೋದರೆ, ಮುಂದೆ ರಾಜ್ಯ ಮಟ್ಟದ ವಾಲ್ಮೀಕಿ ಸಮಾಜದ ಸಭೆ ಕರೆದು ಕಳೆದ ಬಾರಿ ಪಾದಯಾತ್ರೆ ಹೋರಾಟಕ್ಕಿಂತ ದೊಡ್ಡ ಮಟ್ಟದ ಹೋರಾಟ ರೂಪಿಸಬೇಕಾಗುತ್ತದೆ. ಅದು ಯಾವ ರೀತಿಯ ಹೋರಾಟವಾಗಿರುತ್ತದೆ ಎಂಬುದನ್ನು ಈಗ ಹೇಳೂದಿಲ್ಲ, ಮಾಡಿ ತೋರಿಸುತ್ತೇವೆ" ಎಂದರು.

ಸಚಿವ ಈಶ್ವರಪ್ಪ ಹೇಳಿಕೆಗೆ ಖಂಡನೆ:

"ಸಚಿವ ಈಶ್ವರಪ್ಪನವರು ತಮ್ಮ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸುವ ಕುರಿತು ಹೋರಾಟ ಕೈಗೊಂಡಿದ್ದಾರೆ. ವಾಲ್ಮೀಕಿ ಸಮಾಜಕ್ಕೆ ಸಿಗಬೇಕಾದ ಮೀಸಲಾತಿಯ ಬಗ್ಗೆ ಪ್ರಸ್ತಾಪ ಮಾಡಿದ್ದು‌ ಸ್ವಾಗತ. ಆದರೆ, ನಾವು ಮತ್ತು ಎರಡು-ಮೂರು ಸಮಾಜದವರು ಎಸ್ಟಿಗೆ ಸೇರಿದ ಮೇಲೆ ವಾಲ್ಮೀಕಿ ಸಮಾಜ ಎಸ್ಟಿಗೆ ಸೇರಲಿ ಎಂದು ಹೇಳಿಕೆ ನೀಡಿದ್ದಾರೆ. ಇದು ಖಂಡನೀಯ. ನಿಮ್ಮ ಬೇಡಿಕೆ ಇರುವಂತಹದ್ದು ಕೇಂದ್ರ ಸರ್ಕಾರಕ್ಕೆ, ನಮ್ಮದು ಕೇಂದ್ರದಿಂದ ಬಂದಿದ್ದು, ರಾಜ್ಯ ಸರ್ಕಾರ ಅನುಷ್ಠಾನ ಮಾಡಬೇಕಿದೆ" ಎಂದರು.

"ನಮಗೂ ನಿಮಗೂ ಸಂಬಂಧವಿಲ್ಲ. ನೀವು ನಾವು ಊಟ ಮಾಡುವ ಊಟದ ತಟ್ಟೆಗೆ ಕಲ್ಲು ಹಾಕಬೇಡಿ. ಇದನ್ನ ರಾಜ್ಯ ವಾಲ್ಮೀಕಿ ಸಮಾಜ‌ ಖಂಡಿಸುತ್ತದೆ. ನಿಮ್ಮ ಮಾತನ್ನು ವಾಪಸ್ ಪಡೆಯಬೇಕು" ಎಂದು ಸಚಿವ ಈಶ್ವರಪ್ಪನವರಿಗೆ ಆಗ್ರಹಿಸಿದರು.

Last Updated : Oct 9, 2020, 3:44 PM IST

ABOUT THE AUTHOR

...view details