ಕರ್ನಾಟಕ

karnataka

ಪ್ರವಾಹ ತಡೆಯಲು ತಡೆಗೋಡೆ ನಿರ್ಮಿಸದಿದ್ದರೆ ಅನಿರ್ಧಿಷ್ಟಾವದಿ ಧರಣಿ: ಸ್ವಾಮೀಜಿ ಎಚ್ಚರಿಕೆ

By

Published : Jul 27, 2021, 11:41 AM IST

ವರದಾ ನದಿಯ ಪ್ರವಾಹ ತಡೆಯಲು ಲಕ್ಕವಳ್ಳಿ ಜೈನ ಮಠದ ಬಳಿ ತಡೆಗೋಡೆ ನಿರ್ಮಿಸುವಂತೆ ಮಠದ ಪೀಠಾಧಿಪತಿ ಆಗ್ರಹಿಸಿದ್ದಾರೆ. ಬೇಡಿಕೆ ಈಡೇರಿಸದಿದ್ದರೆ ಅನಿರ್ಧಿಷ್ಟಾವದಿ ಧರಣಿ ನಡೆಸುವುದಾಗಿ ಎಚ್ಚರಿಕೆ ರವಾನಿಸಿದ್ದಾರೆ.

Lakkavalli Jain Math
ತಡೆಗೋಡೆ ನಿರ್ಮಿಸುವಂತೆ ಆಗ್ರಹ

ಶಿವಮೊಗ್ಗ : ಜೈನರ ಪವಿತ್ರ ಕ್ಷೇತ್ರ ಸೊರಬದ ಮೋಕ್ಷ ಮಂದಿರ ಜೈನ ಮಠಕ್ಕೆ ವರದಾ ನದಿಯ ಪ್ರವಾಹ ತಡೆಯಲು ತಡೆಗೋಡೆ ನಿರ್ಮಾಣ ಮಾಡಿದಿದ್ದರೆ ಅನಿರ್ಧಿಷ್ಟಾವದಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮಠದ ಪೀಠಾಧಿಪತಿ ಶ್ರೀ ವೃಷಭಸೇನ ಭಟ್ಟಾರಕ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ವರದಾ ನದಿಯ ಪ್ರವಾಹದಿಂದ ಸೊರಬದ ಲಕ್ಕವಳ್ಳಿಯ ಜೈನರ ಪವಿತ್ರ ಕ್ಷೇತ್ರ ಮೋಕ್ಷ ಮಂದಿರ ಜೈನ ಮಠ ಜಲದಿಗ್ಬಂಧನಕ್ಕೆ ಒಳಗಾಗಿದೆ. ಮಠದ ಪೀಠಾಧಿಪತಿ ಶ್ರೀ ವೃಷಭಸೇನ ಭಟ್ಟಾರಕ ಸ್ವಾಮೀಜಿ ಅವರನ್ನು ಸ್ಥಳೀಯರ ಸಹಕಾರದೊಂದಿಗೆ ಮಠದಿಂದ ಹೊರ ಕರೆತರಲಾಗಿದೆ.

ತಡೆಗೋಡೆ ನಿರ್ಮಿಸುವಂತೆ ಆಗ್ರಹ

ಮೋಕ್ಷ ಮಂದಿರ ಸಂಸ್ಥಾನ ಜೈನ ಮಠವು ವರದಾ-ದಂಡಾವತಿ ಸಂಗಮ ಕ್ಷೇತ್ರದ ನದಿಯ ದಂಡೆಯ ಮೇಲಿದ್ದು, ಪ್ರತಿ ಬಾರಿ ನೆರೆ ಬಂದು ಮಠ ಮುಳುಗಡೆಯಾಗುತ್ತದೆ. ಕಳೆದ ನಾಲ್ಕೈದು ದಿನಗಳಿಂದ ಸುರಿದ ಭಾರಿ ಮಳೆಗೆ ಮಠವು ಜಲಾವೃತವಾಗಿದ್ದು, ಅಪಾರ ನಷ್ಟ ಉಂಟಾಗಿದೆ.

ಓದಿ : ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ: ರಾಯರ ಬೃಂದಾವನ ಜಲಾವೃತ

ಈ ಬಗ್ಗೆ ಮಾತನಾಡಿರುವ ವೃಷಭಸೇನ ಭಟ್ಟಾರಕ ಸ್ವಾಮೀಜಿ, ಮಠದ ಆವರಣದ ನಿರ್ಮಾಣ ಹಂತದಲ್ಲಿರುವ ಕಲ್ಯಾಣ ಮಂಟಪ ಸೇರಿದಂತೆ ಇತರ ಕಟ್ಟಡಗಳಿಗೂ ಹಾನಿಯಾಗುವ ಸಾಧ್ಯತೆಯಿದೆ. ಸಂಬಂಧಪಟ್ಟ ಇಲಾಖೆಯವರು ಯಾವುದೇ ಪರಿಹಾರ ನೀಡಲು ಮುಂದಾಗಿಲ್ಲ. ರಾಜ್ಯ, ಕೇಂದ್ರ ಸರ್ಕಾರ ಅಲ್ಪ ಸಂಖ್ಯಾತ ಸಮುದಾಯದ ಮಠ, ಮಂದಿರಗಳ ಅಭಿವೃದ್ಧಿಗೆ ನೂರಾರು ಕೋಟಿ ರೂ. ವರೆಗೆ ಅನುದಾನ ನೀಡುತ್ತಿವೆ. ಆದರೆ, ಈವರೆಗೂ ನಮ್ಮ ಮಠಕ್ಕೆ ಅನುದಾನ ದೊರೆತಿಲ್ಲ. ಜೈನ ಮಠಗಳನ್ನು ತಾತ್ಸಾರ ಮನೋಭಾವದಿಂದ ನೋಡಲಾಗುತ್ತಿದೆ ಎಂದು ಹೇಳಿದ್ದಾರೆ.

ಮಠದಲ್ಲಿದ್ದ ಪೂಜಾ ಸಾಮಗ್ರಿಗಳು ಹಾಗೂ ಬೆಲೆ ಬಾಳುವ ವಸ್ತುಗಳು ನೀರು ಪಾಲಾಗಿವೆ. ಹಳೆಯ ಮಠದಲ್ಲಿದ್ದ ಅನೇಕ ದಾಖಲೆಗಳು ಕೂಡ ಕೊಚ್ಚಿ ಹೋಗಿವೆ. ಗೋಂದಿ ಹಾಗೂ ಮೂಗೂರು ಬಳಿ ಚೆಕ್ ಡ್ಯಾಂಗಳ ನಿರ್ಮಾಣದಿಂದ ನೀರಿನ ಪ್ರಮಾಣ ಹೆಚ್ಚುತ್ತಿದೆ. ಸರ್ಕಾರ ಜನ, ಜಾನುವಾರುಗಳು ಇಲ್ಲದ ಏಳೆಂಟು ಕಡೆಗಳಲ್ಲಿ ತಡೆಗೋಡೆ ನಿರ್ಮಿಸಿದೆ. ಆದರೆ, ಕಳೆದ ಒಂದು ದಶಕದಿಂದ ಮನವಿ ನೀಡುತ್ತಾ ಬಂದಿದ್ದರೂ, ಮಠದ ರಕ್ಷಣೆಗೆ ತಡೆಗೋಡೆ ನಿರ್ಮಾಣ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೆರೆ ಹಾವಳಿ ಕುರಿತು ಮುಖ್ಯಮಂತ್ರಿ, ಸಂಸದ, ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ಒಂದು ತಿಂಗಳ ಒಳಗಾಗಿ ಸಂಬಂಧಿಸಿದ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಗಮನ ಹರಿಸಿ ಶಾಶ್ವತ ಪರಿಹಾರಕ್ಕೆ ಮುಂದಾಗದಿದ್ದರೆ, ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಭಟ್ಟಾರಕ ಸ್ವಾಮೀಜಿ ಎಚ್ಚರಿಕೆ ರವಾನಿಸಿದ್ದಾರೆ.

ABOUT THE AUTHOR

...view details