ಶಿವಮೊಗ್ಗ:ವಿಚಾರಣೆಗೆಂದು ಕರೆ ತಂದಿದ್ದ ಟ್ರ್ಯಾಕ್ಟರ್ ಕಳ್ಳತನದ ಆರೋಪಿ ಠಾಣೆಯಿಂದ ತಪ್ಪಿಸಿಕೊಂಡು ಪರಾರಿಯಾದ ಘಟನೆ ಹೊಸನಗರ ತಾಲೂಕು ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಪ್ರತಾಪ ಸಿಂಗ್ ಎಂಬಾತನೆ ಪೊಲೀಸ್ ಠಾಣೆಯಿಂದ ಎಸ್ಕೇಪ್ ಆದ ಆರೋಪಿಯಾಗಿದ್ದಾನೆ.
ಈತನನ್ನು ಟ್ರ್ಯಾಕ್ಟರ್ ಕದ್ದ ಆರೋಪದಡಿ ರಿಪ್ಪನ್ಪೇಟೆ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಶೌಚಾಲಯಕ್ಕೆ ಹೋಗಬೇಕೆಂದು ಹೇಳಿ ಹೋಗಿದ್ದಾನೆ. ಶೌಚಾಲಯವು ಪೊಲೀಸ್ ಠಾಣೆಯ ಮೇಲ್ಭಾಗದಲ್ಲಿದ್ದು, ಅಲ್ಲಿಗೆ ಹೋದಾಗ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ.
ಆರೋಪಿಯನ್ನು ನೋಡಿಕೊಳ್ಳುತ್ತಿದ್ದ ಕಾನ್ಸ್ಟೇಬಲ್ ರಮೇಶ್ ಮೊಬೈಲ್ನಲ್ಲಿ ಮಾತನಾಡುತ್ತಿರುವಾಗ ಮೆಟ್ಟಿಲು ಇಳಿದು ಪೊಲೀಸ್ ಠಾಣೆಯ ಮುಖ್ಯ ಗೇಟ್ನಿಂದಲೇ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಪ್ರತಾಪ ಅಕ್ರಮ ಮರಳು ಸಾಗಣೆ ಸೇರಿದಂತೆ ಹಲವು ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದನು.
ನಂತರ ಪೊಲೀಸರು ಹುಡುಕಾಟ ನಡೆಸಿದರೂ ಇದುವರೆಗೆ ಆರೋಪಿ ಪತ್ತೆಯಾಗಿರಲಿಲ್ಲ. ವಿಚಾರಣೆಗೆ ಕರೆತಂದಾಗ ಕಾಣೆಯಾಗಿದ್ದಕ್ಕೆ ಎಸ್ಪಿ ರಿಪ್ಪನ್ಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿ ಮೇಲೆ ಗರಂ ಆಗಿದ್ದಾರೆ ಎನ್ನಲಾಗ್ತಿದೆ. ಆರೋಪಿ ಪತ್ತೆಯಾಗದಿದ್ದರೆ ಠಾಣೆಯ ಸಿಬ್ಬಂದಿ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ:ಲಾರಿ ಚಕ್ರಕ್ಕೆ ಸಿಲುಕಿ ವಿದ್ಯಾರ್ಥಿ ಸಾವು: ಚಾಲಕನ ವಿರುದ್ಧ ನಿರ್ಲಕ್ಷ್ಯ ಆರೋಪ