ಶಿವಮೊಗ್ಗ:ಮಲೆನಾಡಿಗರನ್ನು ಮಂಗನಕಾಯಿಲೆ ಬಿಟ್ಟೂ ಬಿಡದೆ ಕಾಡುತ್ತಿದೆ. 1957 ರಲ್ಲಿ ಕ್ಯಾಸನೂರಿನಲ್ಲಿ ಈ ಕಾಯಿಲೆ ಮೊದಲು ಕಂಡು ಬಂದಿತ್ತು. ಕ್ಯಾಸನೂರು ಫಾರೆಸ್ಟ್ ಡಿಸೀಸ್ ಎಂದು ಕರೆಯಲ್ಪಡುವ ಈ ರೋಗ ಹುಟ್ಟಿದ್ದೆ, ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಗ್ರಾಮದಲ್ಲಿ ಎಂಬುದು ಅಚ್ಚರಿಯ ವಿಚಾರವಾಗಿದೆ. ಕೆಎಫ್ಡಿ ರೋಗಕ್ಕೆ ಇದುವರೆಗೂ ನೂರಾರು ಜನ ಬಲಿಯಾಗಿದ್ದಾರೆ. ಮೇ 3 ರಂದು ಸಾಗರ ತಾಲೂಕು ಅರಳಗೋಡು ಗ್ರಾಮ ಪಂಚಾಯತ್ ಸದಸ್ಯ ರಾಮಸ್ವಾಮಿ ಕರಮನೆ (55) ಅವರು ಕೆಎಫ್ಡಿಯಿಂದ ಮೃತಪಟ್ಟಿದ್ದಾರೆ. ಕಳೆದ ತಿಂಗಳು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲೂ ಸಹ 85 ವರ್ಷದ ವೃದ್ಧೆ ಇದಕ್ಕೆ ಬಲಿಯಾಗಿದ್ದಾರೆ.
ಕ್ಯಾಸನೂರು ಫಾರೆಸ್ಟ್ ಡಿಸೀಸ್: ಈ ಕಾಯಿಲೆ ಕ್ಯಾಸನೂರು ಗ್ರಾಮದ ಅರಣ್ಯದಲ್ಲಿ ಕಂಡು ಬಂದಿದ್ದರಿಂದ ಈಗಲೂ ಕ್ಯಾಸನೂರು ಫಾರೆಸ್ಟ್ ಡಿಸೀಸ್(ಕೆಎಫ್ಡಿ) ಎಂದು ಕರೆಯಲಾಗುತ್ತದೆ. ಅಲ್ಲದೇ ಇದು ಮಂಗನಿಂದ ಹರಡುತ್ತದೆ ಎಂಬ ಕಾರಣದಿಂದ ಇದನ್ನು ಮಂಗನ ಕಾಯಿಲೆ ಎಂದು ಸಹ ಕರೆಯುತ್ತಾರೆ. ಇದು ಸಣ್ಣ ಉಣುಗು ಅಥವಾ ಕೀಟ ಕಚ್ಚುವುದರಿಂದ ರೋಗ ಬರುತ್ತದೆ. ಈ ಉಣುಗು ಕಾಡಿನಲ್ಲಿ ಮಂಗ ಸೇರಿದಂತೆ ಮೊಲ, ನವಿಲು ಹಾಗೂ ಕೆಲ ಪಕ್ಷಿಗಳ ದೇಹದ ಮೇಲೆ ಇರುತ್ತದೆ. ಇದು ಪರಾವಲಂಬಿ ಜೀವಿಯಾಗಿದೆ. ಹೆಚ್ಚಾಗಿ ಮಂಗನಲ್ಲಿಯೇ ವಾಸವಾಗಿರುತ್ತದೆ.
ಇದನ್ನೂ ಓದಿ: ಕೊರೊನಾ ಮಹಾಮಾರಿ ನಡುವೆ ಮಲೆನಾಡಿನಲ್ಲಿ ಕೆಎಫ್ಡಿಗೆ 4ನೇ ಬಲಿ
ಮಂಗಗಳು ಸತ್ತ ನಂತರ ಅಲ್ಲಿ ಉಣುಗುಗಳಿಗೆ ರಕ್ತ ಸಿಗದ ಕಾರಣ, ಅವು ಮೃತ ಮಂಗನ ದೇಹದಿಂದ ಹೊರ ಬರುತ್ತವೆ. ಹೀಗೆ ಹೊರ ಬಂದ ಉಣುಗುಗಳು ಬೇರೆ ಜೀವಿಗಳ ಬಳಿ ಹೋಗಿ ಬದುಕುತ್ತವೆ. ಕಾಡಿಗೆ ಹೋದ ಜಾನುವಾರು ಹಾಗೂ ಮನುಷ್ಯರಲ್ಲಿ ಸೇರಿಕೊಳ್ಳುತ್ತವೆ. ಹೀಗೆ ಬಂದ ಉಣುಗು ಮನುಷ್ಯನಿಗೆ ಕಚ್ಚುತ್ತದೆ. ಇದು ಕಚ್ಚಿದ ಮೇಲೆ ಜ್ವರ, ಶೀತ ಕಾಣಿಸಿಕೊಳ್ಳುತ್ತದೆ. ಇದನ್ನು ನಿರ್ಲಕ್ಷ್ಯ ಮಾಡಿದರೆ, ಸಾವು ಕಟ್ಟಿಟ್ಟ ಬುತ್ತಿ.
ಶಿವಮೊಗ್ಗ ಜಿಲ್ಲೆಯ ಬಹು ಭಾಗ ಅರಣ್ಯ ಪ್ರದೇಶದಿಂದ ಕೂಡಿದ್ದು, ಮಂಗನ ಕಾಯಿಲೆ ಕಾಣಿಸಿಕೊಂಡಿರುವುದು ಜಿಲ್ಲೆಯ ಜನತೆಯ ಜೊತೆಗೆ ಆರೋಗ್ಯ ಇಲಾಖೆಯಲ್ಲೂ ಸಹ ಗಾಬರಿಯನ್ನುಂಟು ಮಾಡಿದೆ. ಮಂಗನ ಕಾಯಿಲೆ ಡಿಸೆಂಬರ್ ಅಥವಾ ಜನವರಿಯಲ್ಲಿ ಕಾಣಿಸಿಕೊಳ್ಳುತ್ತಿತ್ತು. ಈ ಬಾರಿ ಈಗಲೇ ಕಾಣಿಸಿಕೊಂಡ ಕಾರಣ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ.
ಮಂಗನ ಕಾಯಿಲೆ ಲಕ್ಷಣಗಳು: ಉಣುಗು ಕಚ್ಚಿದ ಒಂದೆರಡು ದಿನಗಳಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ತೀವ್ರ ಜ್ವರ, ಸುಸ್ತು, ಊಟ ಸೇರದೇ ಇರುವುದು ಆಗುತ್ತದೆ. ಇದು ಮೊದಲ ವಾರದ ಲಕ್ಷಣ, ಎರಡನೇ ವಾರಕ್ಕೆ ಕಣ್ಣು ಕೆಂಪಗಾಗುವುದು, ಜ್ವರ ತೀವ್ರಗೊಳ್ಳುವುದು, ಕಣ್ಣಿನಿಂದ ರಕ್ತ ಬರುವುದು ಸೇರಿದಂತೆ ಪ್ರಜ್ಞೆ ತಪ್ಪುವುದು ಉಂಟಾಗುತ್ತದೆ. ನಂತರ ದೇಹದ ಇತರ ಅಂಗಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಹೋದ್ರೆ ರೋಗಿಯ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ.
ಜ್ವರ ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ:ಮಲೆನಾಡಿನ ಅದರಲ್ಲೂ ಕೆಎಫ್ಡಿ ಹಾಟ್ ಸ್ಪಾಟ್ ಪ್ರದೇಶಗಳಾದ ಸಾಗರ, ಹೊಸನಗರ, ತೀರ್ಥಹಳ್ಳಿ ಭಾಗದವರು ಯಾವುದೇ ಜ್ವರ ಕಾಣಿಸಿಕೊಂಡರೂ ಸಹ ತಕ್ಷಣ ಸಮೀಪದ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಬೇಕು. ಅಲ್ಲಿ ವೈದ್ಯರು ರೋಗಿಯ ಲಕ್ಷಣಗಳನ್ನು ಗಮನಿಸಿ, ರಕ್ತ ಪರೀಕ್ಷೆಗೆ ಸೂಚಿಸಿದರೆ ತಕ್ಷಣ ಪರೀಕ್ಷೆ ಮಾಡಿಸಬೇಕು.
ಕೆಎಫ್ಡಿ ಪಾಸಿಟಿವ್ ಕಂಡು ಬಂದರೆ, ವೈದ್ಯರು ಸೂಚಿಸುವ ಔಷಧಗಳನ್ನು ತೆಗೆದುಕೊಂಡರೆ ಯಾವುದೇ ಅಪಾಯವಾಗುವುದಿಲ್ಲ. ಅದನ್ನು ಬಿಟ್ಟು ಕೇವಲ ಜ್ವರ ಎಂದು ತಾವೇ ಮೆಡಿಸನ್ ತೆಗೆದುಕೊಂಡ್ರೆ ಸಾವಿನ ಮನೆಯ ಬಾಗಿಲು ತಟ್ಟಿದಂತೆಯೇ. ಸಾಗರ, ತೀರ್ಥಹಳ್ಳಿ ಹಾಗೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಈ ಕಾಯಿಲೆಯಿಂದ ಬಳಲುವವರಿಗೆ ಪ್ರತ್ಯೇಕ ವಾರ್ಡ್ಗಳನ್ನು ನಿರ್ಮಿಸಿ ಚಿಕಿತ್ಸೆ ನೀಡಲಾಗುತ್ತದೆ. ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಬೇಕಾದರೆ, ಅವರು ಮಣಿಪಾಲದ ಆಸ್ಪತ್ರೆಗೆ ಹೋಗಿ ದಾಖಲಾಗಬಹುದು.
ಲಸಿಕೆ ಇಲ್ಲ, ಬೂಸ್ಟರ್ ಡೋಸ್ ಹಾಗೂ ಮುನ್ನೆಚ್ಚರಿಕೆಯೇ ಮದ್ದು:1957 ರಿಂದಲೂ ಕೆಎಫ್ಡಿಗೆ ಚುಚ್ಚುಮದ್ದು ಕಂಡು ಹಿಡಿದಿಲ್ಲ. ಈ ರೋಗ ಸೀಸನ್ನಲ್ಲಿ ಕಂಡು ಬರುತ್ತದೆ. ಅದನ್ನು ಬಿಟ್ಟರೆ ಮತ್ತೆ ಕಾಣಿಸಿಕೊಳ್ಳುವುದಿಲ್ಲ. ಇದು ಜನವರಿಯಿಂದ ಜೂನ್ ತನಕ ಸುಮಾರು 5 ತಿಂಗಳು ಮಾತ್ರ ಕಾಣಿಸಿಕೊಳ್ಳುತ್ತದೆ. ಬೇಸಿಗೆಯಲ್ಲಿ ಉಣುಗುಗಳು ಹೆಚ್ಚಾಗಿ ಓಡಾಡುತ್ತವೆ. ಮಳೆಗಾಲದಲ್ಲಿ ಜನ ಹಾಗೂ ಜಾನುವಾರು ಕಾಡಿಗೆ ಹೋಗುವುದು ಕಡಿಮೆ. ಇದರಿಂದ ಇದರ ತೀವ್ರತೆ ಇರುವುದಿಲ್ಲ.