ಶಿವಮೊಗ್ಗ: ಚಿತ್ರರಂಗದಲ್ಲಿ ಬಯೋಪಿಕ್ ಸಿನಿಮಾಗಳ ಹಾವಳಿ ಹೆಚ್ಚಾಗಿದೆ. ಕ್ರಿಕೆಟ್, ಸಿನಿಮಾ, ಉದ್ಯಮ ಹೀಗೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ತೆರೆಯ ಮೇಲೆ ತೋರಿಸಲಾಗುತ್ತದೆ. ಇದೀಗ ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಯೋಪಿಕ್ ತೆರೆಗೆ ತರಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 'ನನ್ನ ಕುರಿತು ಸಿನಿಮಾ ಮಾಡಲು ಕನಕಗಿರಿಯಿಂದ ಬಂದಿದ್ದರು. ಮುಂದೆ ಏನಾಯಿತು ಎಂದು ನನಗೆ ತಿಳಿದಿಲ್ಲ. ನಾನಂತೂ ಚಲನಚಿತ್ರದಲ್ಲಿ ನಟಿಸುವುದಿಲ್ಲ' ಎಂದು ಸ್ಪಷ್ಟಪಡಿಸಿದರು.
'ಸಿ.ಟಿ.ರವಿ ಒಬ್ಬ ಕೋಮುವಾದಿ':ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಒಬ್ಬ ಕೋಮುವಾದಿ ಮನುಷ್ಯ. ಆತನ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ಅವರಿಗೆ ಜಾತ್ಯತೀತ ತತ್ವ ಅರ್ಥವಾಗಲ್ಲ. ಅವರಿಗೆ ಸಂವಿಧಾನದ ತತ್ವ ಅರ್ಥವಾಗಲ್ಲ ಎಂದರು.
ಜನಾಕ್ರೋಶ ಸಮಾವೇಶ ಯಶಸ್ವಿ: ನಿನ್ನೆ ನಡೆದ ಮಲೆನಾಡ ಜನಾಕ್ರೋಶ ಸಮಾವೇಶ ಯಶಸ್ವಿಯಾಗಿದೆ. ನಾನು ಸಿಎಂ ಆಗಿದ್ದಾಗ ಶರಾವತಿ ಸಂತ್ರಸ್ತರಿಗಾಗಿ 56 ಡಿನೋಟಿಫಿಕೇಶನ್ ಮಾಡಿದ್ದೆ. ಮದನ್ ಗೋಪಾಲ್ ಸಮಿತಿ ನೀಡಿದ ಶಿಫಾರಸ್ಸಿನ ಮೇರೆಗೆ ಡಿನೋಟಿಫಿಕೇಶನ್ ಮಾಡಲಾಗಿತ್ತು. ಆದರೆ ಗಿರೀಶ್ ಆಚಾರ್ ಎಂಬಾತ ಹೈಕೋರ್ಟ್ಗೆ ಹೋಗಿದ್ದ ಕಾರಣ ಡಿನೋಟಿಫಿಕೇಶನ್ ರದ್ದಾಗಿದೆ.