ಶಿವಮೊಗ್ಗ: ಶಿವಮೊಗ್ಗ ಯೂಥ್ ಹಾಸ್ಟೆಲ್ ಆಫ್ ಇಂಡಿಯಾ, ಸಂಸ್ಕೃತ ಭಾರತಿ ಹಾಗೂ ವಾಸವಿ ಸ್ಕೂಲ್ ಹಿಮಾಲಯದ ಚಂದ್ರಕಣಿ ಪರ್ವತಾರೋಹಣ ಚಾರಣವನ್ನು ಆಯೋಜಿಸಿದ್ದು, ಶಿವಮೊಗ್ಗದಿಂದ 15 ವರ್ಷದ ಒಳಗಿನ ವಯಸ್ಸಿನ ಸುಮಾರು 21 ಮಕ್ಕಳು ತೆರಳಲಿದ್ದಾರೆ.
ಸಮುದ್ರ ಮಟ್ಟದಿಂದ ಸುಮಾರು 12 ಸಾವಿರ ಅಡಿ ಎತ್ತರದ ಹಿಮಾಲಯದ ಚಂದ್ರಕಣಿ ಪಾಸ್ ಹತ್ತುವ ಯೋಜನೆ ಇದಾಗಿದೆ. ಒಟ್ಟು13 ದಿನಗಳ ಕಾಲದ ಟ್ರಕ್ಕಿಂಗ್ನಲ್ಲಿ ಶಿವಮೊಗ್ಗದ ವಿವಿಧ ಶಾಲೆಯ ಸುಮಾರು 21 ಮಕ್ಕಳು ಭಾಗಿಯಾಗಲಿದ್ದಾರೆ. ಇವರ ಜೊತೆಗೆ 9 ಮಾರ್ಗದರ್ಶಕರು ಭಾಗವಹಿಸಲಿದ್ದಾರೆ.
ಹಿಮಾಲಯ ಏರಲಿದ್ದಾರೆ ಶಿವಮೊಗ್ಗದ ವಿದ್ಯಾರ್ಥಿಗಳು ಇನ್ನು ಟ್ರೆಕ್ಕಿಂಗ್ಗೆ ಹೋಗುವ ವಿದ್ಯಾರ್ಥಿಗಳಿಗೆ ಕಳೆದ ಮಾರ್ಚ್ನಿಂದಲೇ ಪೂರ್ವ ತರಬೇತಿ ನೀಡಲಾಗಿದೆ. ಚಂದ್ರಕಣಿ ಪರ್ವತಾರೋಹಣದ ಮುಖ್ಯ ಉದ್ದೇಶ ಈ ಬೆಟ್ಟದಲ್ಲಿ ಸಂಸ್ಕೃತ ಬಾವುಟವನ್ನು ಧ್ವಜರೋಹಣ ಮಾಡುವುದಾಗಿದೆ. ಚಂದ್ರಕಣಿ ಪರ್ವತದಲ್ಲಿ ಸಂಸ್ಕೃತ ಧ್ವಜರೋಹಣ ಪ್ರಥಮ ಬಾರಿ ಮಾಡಿದ ಕೀರ್ತಿ ಶಿವಮೊಗ್ಗ ವಿದ್ಯಾರ್ಥಿಗಳಾದಾಗುತ್ತದೆ. ವಿದ್ಯಾರ್ಥಿಗಳಿಗೆ ಸಂಸ್ಕೃತವನ್ನು ಕಲಿಸಿ ಅವರಿಂದ ಧ್ವಜರೋಹಣ ಮಾಡಲಾಗುತ್ತಿದೆ.
ವಿದ್ಯಾರ್ಥಿಗಳು ಶಿವಮೊಗ್ಗದಿಂದ ದಾವಣಗೆರೆಯ ಮೂಲಕ ಸಂಪರ್ಕ ಕ್ರಾಂತಿ ರೈಲಿನ ಮೂಲಕ ಹಿಮಾಲಯ ತಲುಪಲಿದ್ದಾರೆ. ಹಿಮಾಲಯವನ್ನು ಹತ್ತಿ ಇಳಿಯಲು ಐದು ದಿನಗಳ ಕಾಲಾವಕಾಶ ಬೇಕಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಸುರಕ್ಷತಾ ಕ್ರಮವನ್ನು ತೆಗೆದುಕೊಂಡು ಹಿಮಾಲಯವನ್ನು ಏರಲಾಗುತ್ತದೆ ಎಂದು ವಾಸವಿ ಶಾಲೆಯ ಕಾರ್ಯದರ್ಶಿ ಎಸ್.ಕೆ.ಶೇಷಾಚಲ ತಿಳಿಸಿದ್ದಾರೆ.