ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಪ್ರೀತಿಸಿ ಮದುವೆಯಾದ ಜೋಡಿಗೆ ಬೆದರಿಕೆ.. ರಕ್ಷಣೆ ನೀಡುವಂತೆ ಎಸ್ಪಿಗೆ ಮೊರೆ - ಜಿಲ್ಲಾ ವರಿಷ್ಠಾಧಿಕಾರಿ ಕಚೇರಿ

ಪ್ರೀತಿಸಿ ಮದುವೆಯಾದ ಜೋಡಿಗೆ ಕುಟುಂಬಸ್ಥರ ಬೆದರಿಕೆ ಹಿನ್ನೆಲೆ ರಕ್ಷಣೆ ನೀಡುವಂತೆ ಶಿವಮೊಗ್ಗ ಎಸ್ಪಿ ಕಚೇರಿಯಲ್ಲಿ ಮನವಿ ಸಲ್ಲಿಸಿದ್ದಾರೆ.

shivamogga-lovers-requested-to-provide-protection-to-sp
ಶಿವಮೊಗ್ಗ : ಪ್ರೀತಿಸಿ ಮದುವೆಯಾದ ಜೋಡಿಗೆ ಬೆದರಿಕೆ..ರಕ್ಷಣೆ ನೀಡುವಂತೆ ಎಸ್ಪಿಗೆ ಮನವಿ

By ETV Bharat Karnataka Team

Published : Oct 14, 2023, 8:18 AM IST

ಶಿವಮೊಗ್ಗ : ಪ್ರೀತಿಸಿ ಮದುವೆಯಾದ ಜೋಡಿ ರಕ್ಷಣೆ ನೀಡುವಂತೆ ನಗರದ ಜಿಲ್ಲಾ ವರಿಷ್ಠಾಧಿಕಾರಿ ಕಚೇರಿಗೆ ಬಂದು ಮನವಿ ಸಲ್ಲಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಜಿಲ್ಲೆಯ ಕಾಶಿಪುರದ ತಮಿಳರ ಕ್ಯಾಂಪ್​ನ ನಿವಾಸಿಗಳಾದ ಅಮೃತ ಹಾಗೂ ಗೋಪಿನಾಥ್ ಮನವಿ ಸಲ್ಲಿಸಿದ್ದಾರೆ.

ಅಮೃತ ಹಾಗೂ ಗೋಪಿನಾಥ್ ಅವರು ಕಳೆದ ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅಮೃತ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎಸ್ಸಿ ಪದವಿ ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಗೋಪಿನಾಥ್ ಎಗ್ ರೈಸ್ ಅಂಗಡಿ ಕೆಲಸ ಮಾಡಿಕೊಂಡಿದ್ದಾರೆ. ಇವರ ಪ್ರೀತಿಗೆ ಅಮೃತ ಮನೆಯವರಿಂದ ವಿರೋಧ ವ್ಯಕ್ತವಾಗಿತ್ತು. ಈ ಸಂಬಂಧ ಅಮೃತ ಅವರ ಸಂಬಂಧಿಗಳಾದ ಗೌತಮ್ ಹಾಗೂ ಇತರರು ಗೋಪಿನಾಥ್​ಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಕಳೆದ ಆಗಸ್ಟ್​​ನಲ್ಲಿ ಅಮೃತ ಹಾಗೂ ಗೋಪಿನಾಥ್​ ಅವರು ಮದುವೆಯಾಗಲು ತಮಿಳುನಾಡಿಗೆ ಹೋಗಿದ್ದಾರೆ. ಅಲ್ಲಿ ಗೋಪಿನಾಥ ಅವರ ಅಕ್ಕನ ಮನೆ ಉಳಿದು, ಆಗಸ್ಟ್ 15 ರಂದು ಮದುವೆಯಾಗುತ್ತಾರೆ. ಬಳಿಕ ತಮ್ಮ ಪೋಷಕರಿಂದ ರಕ್ಷಣೆ ನೀಡಬೇಕು ಎಂದು ಸಮೀಪದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಸದ್ಯ ಪ್ರೇಮಿಗಳು ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ಅಮೃತ ಬಳಿ ಆಧಾರ್ ಸೇರಿದಂತೆ ಯಾವುದೇ ದಾಖಲಾತಿಗಳು ಇರದ ಕಾರಣ ರಿಜಿಸ್ಟ್ರಾರ್​ ಮದುವೆ ಆಗಲು ಸಾಧ್ಯವಾಗಿಲ್ಲ. ಇದರಿಂದಾಗಿ ನಮಗೆ ರಕ್ಷಣೆ ನೀಡಬೇಕು ಎಂದು ಶಿವಮೊಗ್ಗದ ರಕ್ಷಣಾಧಿಕಾರಿಗಳ ಕಚೇರಿಗೆ ಬಂದು ಮನವಿ ಸಲ್ಲಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿದ ಅಮೃತ ವರ್ಷಿಣಿ ಅವರು, ನಾನು ಹಾಗೂ ಗೋಪಿನಾಥ್ ಕಳೆದ 7 ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. ನಮ್ಮಿಬ್ಬರ ಪ್ರೀತಿಗೆ ಮನೆಯವರ ವಿರೋಧ ವ್ಯಕ್ತವಾಗಿತ್ತು. ನಮ್ಮ ಪೋಷಕರಿಗಿಂತ ಕುಟುಂಬ ಸ್ನೇಹಿತರು ನಮಗೆ ತುಂಬ ತೊಂದರೆ ಕೊಟ್ಟಿದ್ದಾರೆ. ಈ ಹಿನ್ನೆಲೆ ನಾವಿಬ್ಬರು ತಮಿಳುನಾಡಿಗೆ ಹೋಗಿ ಆಗಸ್ಟ್ 15 ರಂದು ಅಲ್ಲಿನ ದೇವಸ್ಥಾನದಲ್ಲಿ ಮದುವೆ ಆಗಿದ್ದೇವೆ.

ಈಗ ನಾವು ನಮ್ಮ ಊರಿನಲ್ಲಿಯೇ ಬದುಕಬೇಕೆಂದು ಶಿವಮೊಗ್ಗಕ್ಕೆ ವಾಪಸ್ ಬಂದಿದ್ದೇವೆ. ನಮಗೆ ರಕ್ಷಣೆ ಬೇಕು. ನಾವಿಬ್ಬರು ಒಟ್ಟಿಗೆ ಬದುಕಲು ಅವಕಾಶ ನೀಡಬೇಕು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕಚೇರಿಗೆ ಬಂದಿದ್ದೇವೆ. ನನ್ನ‌ ದಾಖಲೆಗಳು ಮನೆಯಲ್ಲಿಯೇ ಇದೆ. ನನಗೆ ಕಾಲೇಜಿನಲ್ಲಿನ ದಾಖಲೆಗಳನ್ನು ಸಿಗದಂತೆ‌ ಮಾಡಿದ್ದಾರೆ. ದಾಖಲೆಗಳಿಲ್ಲದ‌ ಕಾರಣ ನಾವು ರಿಜಿಸ್ಟರ್ ಮದುವೆ ಆಗಲು ಆಗುತ್ತಿಲ್ಲ‌ ಎಂದು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಗೋಪಿನಾಥ್, ಮೊದಲಿನಿಂದಲೂ ನಮಗೆ ಅವರ ಪರಿಚಯ ಇತ್ತು. ಅವರು ಲಿಂಗಾಯತ ಧರ್ಮದವರು ನಾವು ಮೊದಲಿಯಾರ್. ಅವರ ತಂದೆ ತಾಯಿಗಿಂತ ಅವರ ಸಂಬಂಧಿಕರು ನಮಗೆ ಸಾಕಷ್ಟು ತೊಂದರೆ ನೀಡುತ್ತಿದ್ದಾರೆ. ನಮ್ಮ‌ ಮನೆಯಲ್ಲಿ ವಯಸ್ಸಾದ ತಾಯಿ, ಅಣ್ಣ ಇದ್ದಾರೆ. ಅಕ್ಕನ‌ನ್ನು ತಮಿಳುನಾಡಿಗೆ ಮದುವೆ ಮಾಡಿಕೊಟ್ಟಿದ್ದೇವೆ.

ನಾವಿಬ್ಬರು ತಮಿಳುನಾಡಿಗೆ ಹೋಗಿ ಅಲ್ಲಿನ ದೇವಾಲಯದಲ್ಲಿ ಮದುವೆಯಾಗಿದ್ದೇವೆ. ನಾವು ಪೊಲೀಸರನ್ನು ನಂಬಿದ್ದೇವೆ. ನನ್ನ ಊರಿನಲ್ಲಿ ಬದುಕಲು‌ ಬಿಡಬೇಕು. ಏಳು ವರ್ಷದಿಂದ ಹಿಂದೆಯೇ ನಮ್ಮ ಪ್ರೀತಿ ಬಗ್ಗೆ ಹೇಳಿದಾಗ ವಿದ್ಯಾಭ್ಯಾಸ ಮಾಡಲಿ ಎಂದು ಹೇಳಿದ್ದರು. ಈಗ ನಾವಿಬ್ಬರು ಮದುವೆಯಾಗಿದ್ದೇವೆ. ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಿ ಎಂದು ವಿನಂತಿಕೊಂಡಿದ್ದಾರೆ.‌

ಇದನ್ನೂ ಓದಿ :ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಕೆಎಸ್​​ಆರ್​ಟಿಸಿಯಿಂದ ಪ್ಯಾಕೇಜ್ ಟೂರ್

ABOUT THE AUTHOR

...view details