ಶಿವಮೊಗ್ಗ: ಜಿಲ್ಲೆಯ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಾಕಷ್ಟು ವಿಳಂಬವಾಗಿರುವುದು ಜಿಲ್ಲಾ ಬಿಜೆಪಿ ಕಾರ್ಯಕರ್ತರಲ್ಲೇ ಚರ್ಚೆಗೆ ಗ್ರಾಸವಾಗಿದೆ.
ಇನ್ನೆರಡು ದಿನಗಳಲ್ಲಿ ಅಧಿಕಾರ ಹಸ್ತಾಂತರ: ಟಿ.ಡಿ.ಮೇಘರಾಜ್ ವಿಶ್ವಾಸ - ನೂತನ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಪ್ರತಿಕ್ರಿಯೆ
ಶಿವಮೊಗ್ಗ ಜಿಲ್ಲೆಯ ನೂತನ ಅಧ್ಯಕ್ಷರನ್ನಾಗಿ ಸಾಗರದ ಬಿಜೆಪಿಯ ಹಿರಿಯ ಮುಖಂಡ ಹಾಲಿ ನಗರಸಭ ಸದಸ್ಯ ಟಿ.ಡಿ.ಮೇಘರಾಜ್ ಅವರ ಹೆಸರು ಘೋಷಣೆಯಾಗಿದೆ. ಇವರನ್ನು ಜಿಲ್ಲಾ ಬಿಜೆಪಿಯ ಹಿಂದಿನ ಸಮಿತಿ ಜನವರಿ 12 ರಂದು ಆಯ್ಕೆ ಮಾಡಿದೆ. ಘೋಷಣೆಯಾಗಿ ಸುಮಾರು ಒಂದೂವರೆ ತಿಂಗಳಾದ್ರೂ ಅಧಿಕಾರ ಹಸ್ತಾಂತರವಾಗಿಲ್ಲ.
ಸಿಎಂ ತವರು ಕ್ಷೇತ್ರದಲ್ಲಿ ಜಿಲ್ಲಾಧ್ಯಕ್ಷರ ನೇಮಕವಾಗಿ ಸುಮಾರು ಒಂದೂವರೆ ತಿಂಗಳಾದ್ರೂ ಅಧಿಕಾರ ಹಸ್ತಾಂತರವಾಗಿಲ್ಲ. ಬಿಜೆಪಿಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಜಿಲ್ಲಾ ಸಮಿತಿಯ ರಚನೆಯಾಗುತ್ತದೆ. ಈ ವೇಳೆ, ಜಿಲ್ಲಾಧ್ಯಕ್ಷರ ನೇಮಕದಿಂದ ಹಿಡಿದು ಎಲ್ಲಾ ಮೊರ್ಚಾದ ಅಧ್ಯಕ್ಷರ ನೇಮಕ ಸಹ ಆಗುತ್ತದೆ. ನಂತ್ರ ಉಳಿದವರ ನೇಮಕವಾಗುತ್ತದೆ. ಶಿವಮೊಗ್ಗ ಜಿಲ್ಲೆಯ ನೂತನ ಅಧ್ಯಕ್ಷರನ್ನಾಗಿ ಸಾಗರದ ಬಿಜೆಪಿಯ ಹಿರಿಯ ಮುಖಂಡ ಹಾಲಿ ನಗರಸಭ ಸದಸ್ಯ ಟಿ.ಡಿ.ಮೇಘರಾಜ್ ಹೆಸರು ಘೋಷಣೆಯಾಗಿದೆ. ಇವರನ್ನು ಜಿಲ್ಲಾ ಬಿಜೆಪಿಯ ಹಿಂದಿನ ಸಮಿತಿಯು ಜನವರಿ 12 ರಂದು ಆಯ್ಕೆ ಮಾಡಿದೆ. ಘೋಷಣೆಯಾಗಿ ಸುಮಾರು ಒಂದೂವರೆ ತಿಂಗಳಾದರೂ ಅಧಿಕಾರ ಹಸ್ತಾಂತರವಾಗಿಲ್ಲ.
ಜಿಲ್ಲೆಯ ಹಾಲಿ ಜಿಲ್ಲಾಧ್ಯಕ್ಷ ಎಂಎಲ್ಸಿ, ಸಿಎಂ ಯಡಿಯೂರಪ್ಪ ಅತ್ಯಾಪ್ತರಲ್ಲಿ ಒಬ್ಬರಾದ ಎಸ್. ರುದ್ರೇಗೌಡರ ನೇಮಕದಲ್ಲಿ ಜಿಲ್ಲಾ ಸಮಿತಿಯಲ್ಲಿ ಸಾಕಷ್ಟು ಗೊಂದಲವಿತ್ತು. ಇವರು ಕೆಜೆಪಿಯಿಂದ ಬಂದವರಾಗಿದ್ದರು. ಈ ಹಿಂದೆ ಬಿಜೆಪಿಯ ವಿರುದ್ದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಯಡಿಯೂರಪ್ಪ ತಮ್ಮ ಆಪ್ತರು ಎಂದು ಹೇಳಿ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಈ ಕುರಿತು ರಾಜ್ಯಾದ್ಯಾಂತ ಚರ್ಚೆ ಸಹ ನಡೆದಿತ್ತು. ಎಸ್.ರುದ್ರೇಗೌಡರು ಜಿಲ್ಲಾಧ್ಯಕ್ಷರಾಗಿ ಎಲ್ಲರನ್ನು ಜೊತೆಗೆ ತೆಗೆದು ಕೊಂಡು ಹೋಗುವ ಕೆಲ್ಸ ಮಾಡಿದರೂ ಸಹ ಅದು ಅಷ್ಟೊಂದು ಯಶಸ್ವಿಯಾಗಿರಲಿಲ್ಲ. ಇಷ್ಟಾದರೂ ರುದ್ರೇಗೌಡರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ನಡೆದ ಎಲ್ಲ ಚುನಾವಣೆಯಲ್ಲಿ ಬಿಜೆಪಿ ಗೆಲುವು ಕಂಡಿತು. ರುದ್ರೇಗೌಡರನ್ನು ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ, ಅವರನ್ನೇ ಜಿಲ್ಲಾಧ್ಯಕ್ಷರಾಗಿ ಮುಂದುವರೆಸುವ ಯೋಚನೆ ಸಹ ಯಡಿಯೂರಪ್ಪನವರ ಮುಂದಿತ್ತು.
ಆದರೆ, ಬಿಜೆಪಿಯು ಪ್ರಜಾಪ್ರಭುತ್ವದ ಆಧಾರದಂತೆ ನೂತನ ಜಿಲ್ಲಾಧ್ಯಕ್ಷರನ್ನಾಗಿ ಮೇಘರಾಜ್ ರನ್ನು ನೇಮಕ ಮಾಡಿದೆ. ಆದರೆ, ಇನ್ನೂ ಅಧಿಕಾರ ಹಸ್ತಾಂತರವಾಗಿಲ್ಲ. ಮೇಘರಾಜ್ ಅವರ ನೇಮಕಕ್ಕೂ ಬಿಜೆಪಿಯಲ್ಲಿ ಅಸಮಾಧಾನ ಇದೆ. ಕಾರಣ ರುದ್ರೇಗೌಡರು ಸಹ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಮೇಘರಾಜ್ ರವರು ಸಹ ಅದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇದರಿಂದ ಬೇರೆ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ನೀಡಬಹುದಾಗಿತ್ತು ಎಂಬ ಕೂಗು ಪಕ್ಷದಲ್ಲೆ ಇತ್ತು.
ಅಧಿಕಾರ ಹಸ್ತಾಂತರ ವಿಳಂಬವಾಗಿರುವ ಬಗ್ಗೆ ನೂತನ ಅಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ ಯಾವುದೇ ವಿಳಂಬವಾಗಿಲ್ಲ. ಅಧಿಕಾರ ಹಸ್ತಾಂತರದ ಕುರಿತು ಪಕ್ಷದಲ್ಲಿ ಸಭೆ ನಡೆಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಅಧಿಕಾರ ಹಸ್ತಾಂತರದ ದಿನಾಂಕ ಘೋಷಣೆ ಮಾಡಲಾಗುತ್ತದೆ. ಅಧಿಕಾರ ಸ್ವೀಕಾರದ ನಂತ್ರ ಪಕ್ಷವನ್ನು ಇನ್ನಷ್ಟು ಸಧೃಢವಾಗಿ ಕಟ್ಟುತ್ತೇನೆ ಎಂದರು.