ETV Bharat Karnataka

ಕರ್ನಾಟಕ

karnataka

ETV Bharat / state

ಶಿವಮೊಗ್ಗ ಡಿಸಿಸಿ ಬ್ಯಾಂಕ್.. ಅಡಕೆ ಅಡಮಾನದ ಹೆಸರಿನಲ್ಲಿ ಲಕ್ಷಾಂತರ ರೂ. ಭ್ರಷ್ಟಾಚಾರ ನಡೆದ ಆರೋಪ.. - ಶಿವಮೊಗ್ಗ ಡಿಸಿಸಿ ಬ್ಯಾಂಕ್ ಹಗರಣ

ಸೊಸೈಟಿಗೆ ನೀಡಿರುವ ಸಾಲವನ್ನು ವಸೂಲಿ ಮಾಡುವ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್ ಕ್ರಮವಹಿಸಲಿದೆ. ಇಲ್ಲದ ಅಡಕೆಗೆ ಸಾಲ ನೀಡಿ ನಂತರ ಅದನ್ನು ಕಟ್ಟಿಸಿಕೊಂಡ ಮಾತ್ರಕ್ಕೆ ಅದು ಮುಗಿದಂತಲ್ಲ. ಇದೂ ಸಹ ತಪ್ಪಾಗುತ್ತದೆ. ಹಾಗಾಗಿ, ಜಾರಿಯಲ್ಲಿರುವ ತನಿಖೆ ಪೂರ್ಣಗೊಂಡ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಬ್ಯಾಂಕ್ ಅಧಿಕಾರಿ ಹೇಳಿದ್ದಾರೆ..

ಶಿವಮೊಗ್ಗ ಡಿಸಿಸಿ ಬ್ಯಾಂಕ್
ಶಿವಮೊಗ್ಗ ಡಿಸಿಸಿ ಬ್ಯಾಂಕ್
author img

By

Published : Oct 16, 2021, 7:20 PM IST

ಶಿವಮೊಗ್ಗ : ನಕಲಿ ಚಿನ್ನಕ್ಕೆ 65 ಕೋಟಿ ರೂ. ಸಾಲ ನೀಡಿದ್ದ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಪ್ರಕರಣ ಮರೆಯಾಗುವ ಮುನ್ನವೇ ಅಂಥದ್ದೇ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ತಾಲೂಕಿನ ಜಾವಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಡಕೆ ಅಡಮಾನದ ಸಾಲ ಹೆಸರಿನಲ್ಲಿ 30 ಲಕ್ಷ ರೂ. ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿ ಬಂದಿದೆ.

ಅಡಕೆ ಅಡಮಾನದ ಹೆಸರಿನಲ್ಲಿ ಲಕ್ಷಾಂತರ ರೂ. ಭ್ರಷ್ಟಾಚಾರ?

ಅಡಮಾನದ ಸಾಲದ ಹೆಸ್ರಲ್ಲಿ ಲಕ್ಷಾಂತರ ರೂ.ಭ್ರಷ್ಟಾಚಾರ?

ಸೊಸೈಟಿಯ ಸಿಇಒ ಆಗಿದ್ದ ಚಂದ್ರಶೇಖರ್ ಎಂಬುವರು ತಮ್ಮ ಪತ್ನಿ ಹಾಗೂ ಮತ್ತೊಬ್ಬರ ಹೆಸರಿನಲ್ಲಿ ಇಲ್ಲದ ಅಡಕೆಗೆ 30 ಲಕ್ಷ ರೂ. ಸಾಲ ನೀಡಿ, ನಂತರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇವರ ನಂತರ ಪ್ರಭಾರ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ವಿಜಯ್ ಕುಮಾರ್ ಸಹ ಅಡಕೆಯೇ ಇಲ್ಲದೆ ಅಡಮಾನ ಸಾಲದ ಹೆಸರಿನಲ್ಲಿ ಲಕ್ಷಾಂತರ ರೂ. ಸಾಲ ನೀಡಿರುವುದು.

ಬಂಗಾರ ಅಡಮಾನ ಸಾಲ ನೀಡುವ ವೇಳೆ ಸರಿಯಾದ ಕ್ರಮ ಅನುಸರಿಸದಿರುವುದೂ ಸೇರಿದಂತೆ ಹಲವು ಲೋಪದೋಷಗಳು ಬೆಳಕಿಗೆ ಬಂದಿವೆ. ಆದರೂ, ಅದನ್ನು ಸಹಕಾರ ಡಿಸಿಸಿ ಬ್ಯಾಂಕ್​ನ ಆಡಳಿತ ಮಂಡಳಿಗಾಗಲೀ, ಸಹಕಾರ ಸಂಘಗಳ ಇಲಾಖೆಯ ಗಮನಕ್ಕಾಗಲಿ ತಂದಿಲ್ಲ. ಇದರ ಜೊತೆಗೆ ಸೊಸೈಟಿಯ ವ್ಯವಹಾರದ ಮೇಲೆ ನಿಗಾವಹಿಸಬೇಕಿದ್ದ ಡಿಸಿಸಿ ಬ್ಯಾಂಕ್​ನ ಕ್ಷೇತ್ರ ಪ್ರತಿನಿಧಿ ಛಾಯಪ್ಪ ಸಹ ಈ ವಿಷಯವನ್ನು ತಮ್ಮ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲ ಎನ್ನಲಾಗಿದೆ.

ಬಳಿಕ ಬಂದ ಪ್ರಭಾರ ಸಿಇಒನಿಂದಲೂ ಭ್ರಷ್ಟಾಚಾರ?

ಕರ್ತವ್ಯಲೋಪ ಹಾಗೂ ಹಣ ದುರ್ಬಳಕೆಯ ಹಿನ್ನೆಲೆ ಸೊಸೈಟಿಯ ಪ್ರಭಾರ ಸಿಇಒ ಸ್ಥಾನದಿಂದ ವಿಜಯ್ ಕುಮಾರ್​ರನ್ನು ವಜಾಗೊಳಿಸಲಾಗಿದೆ. ಬಳಿಕ ಪ್ರಭಾರ ಸಿಇಒ ಆಗಿ ನಾಗೇಶ್, ಸೊಸೈಟಿಯಲ್ಲಿ ನಡೆದಿರುವ ಹಣಕಾಸಿನ ಅವ್ಯವಹಾರ, ಅಧಿಕಾರ ದುರುಪಯೋಗ ಹಾಗೂ ದಾಖಲೆ ತಿದ್ದುಪಡಿಗೆ ಯತ್ನ ನಡೆದಿರುವ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆ ಹಾಗೂ ಶಿವಮೊಗ್ಗದ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

ಆರೋಪಿಗಳ ವಿರುದ್ಧ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಕ್ರಮ

ಜಿಲ್ಲೆಯ ಪ್ರತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಆರ್ಥಿಕ ನೆರವು ಒದಗಿಸುವ ಡಿಸಿಸಿ ಬ್ಯಾಂಕ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಹಿಂದಿನ ಸಿಇಒ ಅಡಕೆ ಸಾಲ ನೀಡಿಕೆ ವಿಷಯದಲ್ಲಿ ಲೋಪ ಎಸಗಿರುವುದು ಕಂಡು ಬಂದಿರುವ ಹಿನ್ನೆಲೆ ಸಹಕಾರ ಸಂಘಗಳ ಕಲಂ 65ರ ಅಡಿ ವಿಸ್ತೃತ ತನಿಖೆ ನಡೆಸುವಂತೆ ಸೂಚಿಸಿದೆ.

ಸೊಸೈಟಿಗೆ ನೀಡಿರುವ ಸಾಲವನ್ನು ವಸೂಲಿ ಮಾಡುವ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್ ಕ್ರಮವಹಿಸಲಿದೆ. ಇಲ್ಲದ ಅಡಕೆಗೆ ಸಾಲ ನೀಡಿ ನಂತರ ಅದನ್ನು ಕಟ್ಟಿಸಿಕೊಂಡ ಮಾತ್ರಕ್ಕೆ ಅದು ಮುಗಿದಂತಲ್ಲ. ಇದೂ ಸಹ ತಪ್ಪಾಗುತ್ತದೆ. ಹಾಗಾಗಿ, ಜಾರಿಯಲ್ಲಿರುವ ತನಿಖೆ ಪೂರ್ಣಗೊಂಡ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಬ್ಯಾಂಕ್ ಅಧಿಕಾರಿ ಹೇಳಿದ್ದಾರೆ.

ಜಾವಳ್ಳಿ ಗ್ರಾಮದ ಸೊಸೈಟಿಯಲ್ಲಿ ನಡೆದಿರುವ ಅವ್ಯವಹಾರದ ಕುರಿತು ಸಹಕಾರ ಸಂಘಗಳ ಇಲಾಖೆ ಸಹ ಕ್ರಮಕ್ಕೆ ಮುಂದಾಗಿದೆ. ಸೊಸೈಟಿಯ ಹಿಂದಿನ ಸಿಇಒ ಅವಧಿಯಲ್ಲಿ ಅಡಕೆ ದಾಸ್ತಾನು ಇಲ್ಲದೆ ಲಕ್ಷಾಂತರ ರೂ. ಸಾಲ ನೀಡಿರುವುದು ಕಂಡು ಬಂದಿದೆ. ಹಿಂದಿನ ಸಿಇಒಗೆ ಈ ವಿಷಯ ಗೊತ್ತಿದ್ದರೂ ಸಂಬಂಧಪಟ್ಟವರ ಗಮನಕ್ಕೆ ತಂದಿಲ್ಲ. ಜೊತೆಗೆ ನಿರ್ದೇಶಕ ಸದಾಶಿವಪ್ಪ ಅವರು ಸೊಸೈಟಿಯಿಂದ ಪಡೆದಿರುವ ಗೊಬ್ಬರದ ಹಣ ಪಾವತಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ABOUT THE AUTHOR

...view details