ಕರ್ನಾಟಕ

karnataka

By

Published : Feb 24, 2023, 8:07 PM IST

ETV Bharat / state

'ವಿಐಎಸ್​ಪಿ ಕಾರ್ಖಾನೆ ಉಳಿಸಿ': ಭದ್ರಾವತಿ ಬಂದ್ ಯಶಸ್ವಿ

ವಿಮಾನ ನಿಲ್ದಾಣ ಉದ್ಘಾಟನೆಗೆ ಜಿಲ್ಲೆಗೆ ಪ್ರಧಾನಿ ಆಗಮಿಸಿದಾಗ ಕಾರ್ಖಾನೆ ಉಳಿಸಿ ಎಂದು ಮನವಿ ಮಾಡುವುದಾಗಿ ಹೇಳಿದ ಶಾಸಕ ಸಂಗಮೇಶ್​.

Save VISP factory Bhadravati bandh successful
ವಿಐಎಸ್​ಪಿ ಕಾರ್ಖಾನೆ ಉಳಿಸಿ ಭದ್ರಾವತಿ ಬಂದ್ ಯಶಸ್ವಿ

ವಿಐಎಸ್​ಪಿ ಕಾರ್ಖಾನೆ ಉಳಿಸಿ ಭದ್ರಾವತಿ ಬಂದ್ ಯಶಸ್ವಿ

ಶಿವಮೊಗ್ಗ:ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆಯನ್ನು ಭಾರತೀಯ ಉಕ್ಕು ಪ್ರಾಧಿಕಾರ ಮುಚ್ಚುವ ಘೋಷಣೆ ಹಿನ್ನೆಲೆಯಲ್ಲಿ ಕಾರ್ಖಾನೆಯನ್ನು ಉಳಿಸಬೇಕೆಂದು ಕಾರ್ಖಾನೆಯ ಗುತ್ತಿಗೆ ಕಾರ್ಮಿಕರು ಕಳೆದ 37 ದಿನಗಳಿಂದ ಭದ್ರಾವತಿಯ ವಿಐಎಸ್​ಪಿ ಕಾರ್ಖಾನೆಯ ಮುಂಭಾಗದಲ್ಲಿ ಧರಣಿ ನಡೆಸುತ್ತಿದ್ದಾರೆ. ಅದರಂತೆ ಇಂದು ಗುತ್ತಿಗೆ ಕಾರ್ಮಿಕರು ಭದ್ರಾವತಿ ಪಟ್ಟಣ ಸ್ವಯಂ ಬಂದ್ ಕರೆ ನೀಡಿದ್ದರು. ಬಂದ್ ಹಿನ್ನಲೆಯಲ್ಲಿ ಇಂದು ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟು ಬಂದ್ ಆಗಿದ್ದವು.

ಬಂದ್​ನಿಂದಾಗಿ ಬೆಳಗ್ಗೆಯೇ ಕಾರ್ಮಿಕ ಸಂಘಟನೆಯವರು ನಗರದೆಲ್ಲೆಡೆ ಸಾಗಿ ಅಲ್ಲಲ್ಲಿ ತೆರೆದಿದ್ದ ಅಂಗಡಿಗಳನ್ನು ಮುಚ್ಚಿಸುತ್ತಾ ಸಾಗಿದರು. ಭದ್ರಾವತಿ ನಗರದ ಎಲ್ಲಾ ವೃತ್ತಗಳಲ್ಲಿ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿ, ಟೈರ್​ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಅಗ್ನಿಶಾಮಕ ದಳದ ನೆರವಿನಿಂದ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ನಂತರ ಪಟ್ಟಣದ ವಿವಿಧ ಭಾಗಗಳಿಂದ ಕಾರ್ಮಿಕ ಸಂಘಟನೆಯವರು ಪ್ರತಿಭಟನೆ ಪ್ರಾರಂಭಿಸಿ ಅಂಡರ್ ಬ್ರಿಡ್ಜ್ ಬಳಿ ಬಂದು ಸೇರಿ ಒಂದಾಗಿ ಪ್ರತಿಭಟನ ಮೆರವಣಿಗೆ ನಡೆಸಿದರು.

ಇಲ್ಲಿಂದ ಬಿ.ಹೆಚ್.ರಸ್ತೆಯಿಂದ ಹಳೆ ಸೇತುವೆ ಮೂಲಕ, ಮಾಧವಾಚಾರ್ ವೃತ್ತ, ರಂಗಪ್ಪ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೂ ಮೆರವಣಿಗೆ ಸಾಗಿತು. ಭದ್ರಾವತಿ ಪಟ್ಟಣ ವರ್ತಕರ ಸಂಘದವರು ಮನವಿ ಸಲ್ಲಿಕೆಯ ವೇಳೆ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್, ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಗೌಡ ಸೇರಿದಂತೆ ಇತರರು ಇದ್ದರು. ರಂಗಪ್ಪ ವೃತ್ತದಲ್ಲಿ ಮೆರವಣಿಗೆ ಸಾಗುವಾಗ ವಿವಿಧ ಸಮಾಜದವರು ತಮ್ಮ ಸಮಾಜದ ಫ್ಲೆಕ್ಸ್​ ಹಿಡಿದು ಹೊರಟಾಗ ಕೆಲವರು ಫ್ಲೆಕ್ಸ್​ನಲ್ಲಿ ವಿಐಎಸ್​ಎಲ್​ ಹೆಸರು ಯಾಕಿಲ್ಲ ಎಂದು ಜಟಾಪಟಿ ನಡೆಸಿದರು. ಮನವಿ‌ ಸಲ್ಲಿಕೆಯ ವೇಳೆ ಜೆಡಿಎಸ್​ನ ತಾಲೂಕು ಅಧ್ಯಕ್ಷ ಕರುಣಾಕರ ಮೂರ್ತಿ ಅವರಿಗೆ ಮಾತನಾಡಲು ಮೈಕ್ ನೀಡುವ ವೇಳೆ ಶಾಸಕ ಸಂಗಮೇಶ್ ಅವರು ಆಪೇಕ್ಷ ವ್ಯಕ್ತಪಡಿಸಿದ್ದರು. ನಂತರ ಕಾರ್ಮಿಕ ಸಂಘಟನೆಯವರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು.

ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಮೆಡಿಕಲ್, ಆಸ್ಪತ್ರೆ ಸೇರಿದಂತೆ ಅವಶ್ಯಕ ವಸ್ತುಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಬಸ್​ಗಳು ಬೈಪಾಸ್ ರಸ್ತೆಯಲ್ಲಿ ಸಾಗಿದವು. ಬಂದ್​ಗೆ ಸಿಐಟಿಯು, ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷ ಬೆಂಬಲ ನೀಡಿದ್ದವು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಖಾನೆಯನ್ನು ಮುಚ್ಚಲು ಹೊರಟಿವೆ. ಇದರಿಂದ ಕಾರ್ಮಿಕರು ಬೀದಿ ಪಾಲಾಗುತ್ತಾರೆ. ಕಾರ್ಖಾನೆ ಇದ್ದರೆ ನಾವು, ಭದ್ರಾವತಿ ಇದ್ದರೆ ನಾವು. ಇದರಿಂದ ಕಾರ್ಖಾನೆಯನ್ನು ಉಳಿಸಬೇಕು. ವಿಮಾನ ನಿಲ್ದಾಣದ ಉದ್ಘಾಟನೆಗೆ ಪ್ರಧಾನ‌ಮಂತ್ರಿಗಳು ಆಗಮಿಸಿದ ವೇಳೆ ನಾನು‌ ಕಾರ್ಖಾನೆ ಉಳಿಸಿ ಎಂದು ಮನವಿ ಸಲ್ಲಿಸಲಿದ್ದೇನೆ ಎಂದು ಶಾಸಕ ಸಂಗಮೇಶ್ ತಿಳಿಸಿದ್ದಾರೆ.

ರಾಜಕಾರಣಿಗಳು ದಪ್ಪ ಚರ್ಮ ಹೊಂದಿದವರು. ಅವರಿಗೆ ನಮ್ಮಂತಹ ಕಾರ್ಮಿಕರ ಕಷ್ಟ ಅರ್ಥವಾಗಲ್ಲ. ನಮ್ಮ ಜಿಲ್ಲೆಯ ವಿಮಾನ ನಿಲ್ದಾಣಕ್ಕೆ ಹಾಕುವ ಬಂಡವಾಳವನ್ನು ನಮ್ಮ ಕಾರ್ಖಾನೆಗೆ ಹಾಕಿದ್ದರೆ, 1,500 ಜನ ಗುತ್ತಿಗೆ ಕಾರ್ಮಿಕರು, ಅವರ ಕುಟುಂಬದವರು ಬದುಕುತ್ತಾರೆ. ಒಂದು ವೇಳೆ ಕಾರ್ಖಾನೆಗೆ ಬಂಡವಾಳ ಹಾಕದೇ ಹೋದರೆ ನಾವೆಲ್ಲಾ ವಿಷ ಕುಡಿಯಬೇಕಾಗುತ್ತದೆ ಎಂದು ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ ಹೇಳಿದರು.

ಇದನ್ನೂ ಓದಿ:ವಿಐಎಸ್‌ಎಲ್ ಉಳಿಸಿ ಹೋರಾಟ: ಭದ್ರಾವತಿಯಲ್ಲಿ ಸ್ವಯಂ ಪ್ರೇರಿತ ಬಂದ್

ABOUT THE AUTHOR

...view details