ಶಿವಮೊಗ್ಗ: ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಶರಾವತಿ ಮುಳುಗಡೆ ಸಂತ್ರಸ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಆಯನೂರು ಹೋಬಳಿ ಕೂಡಿ, ಆಡಿನಕೊಟ್ಟಿಗೆ, ಕೆಸುವಿನಹೊಂಡ, ಚಿಲುಮೆಜೆಡ್ಡು ಗ್ರಾಮದ ಸರ್ವೆ ನಂ. 31, 32, 33, 34 ಹಾಗೂ 17ರಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದೇವೆ. ಆದರೆ ಈ ಹಿಂದೆ ಸರ್ಕಾರ ಇಲ್ಲಿ ಸಾಗುವಳಿ ಮಾಡುತ್ತಿರುವ ಸುಮಾರು 200 ಕುಟುಂಬಗಳ ಜಮೀನನನ್ನು ಡಿನೋಟಿಫೈ ಮಾಡಿದೆ. ಈ ಬಗ್ಗೆ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಮೂಲ ದಾಖಲಾತಿ ಪರಿಶೀಲಿಸಿ, ಪಹಣಿ ಕಲಂ ತರಲು ಆದೇಶಿಸಿದ್ದರು ಎಂದು ಪ್ರತಿಭಟನಾಕಾರರು ತಿಳಿಸಿದರು.
ನಾವು ಮೂಲ ಶರವಾತಿ ಮುಳುಗಡೆ ಪಟ್ಟಿಯಲ್ಲಿ ಅರ್ಹತೆ ಹೊಂದಿದ್ದೇವೆ. ಎಲ್ಲ ಫಲಾನುಭವಿಗಳ ಜಮೀನುಗಳು ಜಂಟಿ ಸರ್ವೆಯಲ್ಲಿ ಒಳಪಟ್ಟಿವೆ. ಇದನ್ನು ಕೂಡಲೇ ಪರಿಶೀಲಿಸಿ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದ್ದಾರೆ.