ಕರ್ನಾಟಕ

karnataka

ETV Bharat / state

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪಾಲಿಗೆ ಇನ್ನೂ ನಿಲುಕದ 'ತಾರಾ' ಲಯ.. - Ayanoru Planetarium Building work incomplited

ಆಯನೂರಿನಲ್ಲಿ ನಿರ್ಮಿತವಾಗಿರುವ ತಾರಾಲಯವನ್ನು ನಿರ್ಮಿತಿ ಕೇಂದ್ರ ನಿರ್ಮಿಸಿದೆ. ಕಟ್ಟಡ ನಿರ್ಮಾಣ ಮಾಡಿದೆ. ಅದನ್ನು ಬಿಟ್ಟರೆ ತಾರಾಲಯ ಪ್ರಾರಂಭ ಮಾಡಲು ಬೇಕಾದ ಮೂಲ ಸೌಕರ್ಯವನ್ನು ಒದಗಿಸಿಲ್ಲ. ತಾರಾಲಯದ ಕಟ್ಟಡದ ಒಳಗೆ ಡೂಮ್ ಒಂದನ್ನು ಹಾಕಿದ್ದು ಬಿಟ್ಟರೆ, ಬೇರೆ ಏನೂ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ..

ಆಯನೂರು ತಾರಾಲಯ
ಆಯನೂರು ತಾರಾಲಯ

By

Published : Jun 3, 2022, 6:06 PM IST

ಶಿವಮೊಗ್ಗ: ಗ್ರಾಮೀಣ ಭಾಗದ ಮಕ್ಕಳಲ್ಲಿ ಸೌರಮಂಡಲ ಹಾಗೂ ಆಕಾಶಕಾಯಗಳ ಬಗ್ಗೆ ಅರಿವು ಮೂಡಿಸುವ ಹಾಗೂ ಸಂಶೋಧನೆಗೆ ತೊಡಗಿಸುವ ಸಲುವಾಗಿ 2015-16 ನೇ ಸಾಲಿನಲ್ಲಿ ರಾಜ್ಯ ಸರ್ಕಾರ ರಾಜ್ಯಕ್ಕೆ ಐದು ತಾರಾಲಯಗಳನ್ನು‌ ಮಂಜೂರು ಮಾಡಿತು. ಈ ಐದರಲ್ಲಿ ಶಿವಮೊಗ್ಗ ತಾಲೂಕಿನ ಆಯನೂರು ಗ್ರಾಮದಲ್ಲಿ ನಿರ್ಮಾಣವಾದ ತಾರಾಲಯವೂ ಒಂದು.

ಆಯನೂರು ತಾರಾಲಯ ಪಾಳು ಬಿದ್ದರುವ ಬಗ್ಗೆ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಸ್ಥಳೀಯರು ಮಾತನಾಡಿದ್ದಾರೆ

ಈ ತಾರಾಲಯವನ್ನು ಆಯನೂರಿನ ಶಾಲಾ‌ ಮೈದಾನದಲ್ಲಿ ನಿರ್ಮಾಣ ಮಾಡಲಾಗಿದೆ. ನಿರ್ಮಾಣ ಎಂದರೆ ಕೇವಲ ಕಟ್ಟಡದ ಕಾಮಗಾರಿ ಆಗಿದೆಯೇ ವಿನಃ ಆಕಾಶಕಾಯಗಳ ಮಾಹಿತಿ ಒದಗಿಸುವ ತಾಂತ್ರಿಕ ಕಾಮಗಾರಿ ನಡೆದಿಲ್ಲ. ಇದರಿಂದ ಈ ತಾರಾಲಯವು ಕಳೆದ ಐದು ವರ್ಷಗಳಿಂದ ಪಾಳು ಬಿದ್ದು, ಪುಂಡ ಪೋಕರಿಗಳ ತಾಣವಾಗಿದೆ.

2016-17 ರಿಂದ ಪಾಳು ಬಿದ್ದ ತಾರಾಲಯ: ಆಯನೂರಿನಲ್ಲಿ ನಿರ್ಮಿತವಾಗಿರುವ ತಾರಾಲಯವನ್ನು ನಿರ್ಮಿತಿ ಕೇಂದ್ರ ನಿರ್ಮಿಸಿದೆ. ಕಟ್ಟಡ ನಿರ್ಮಾಣ ಮಾಡಿದೆ. ಅದನ್ನು ಬಿಟ್ಟರೆ ತಾರಾಲಯ ಪ್ರಾರಂಭ ಮಾಡಲು ಬೇಕಾದ ಮೂಲ ಸೌಕರ್ಯವನ್ನು ಒದಗಿಸಿಲ್ಲ. ತಾರಾಲಯದ ಕಟ್ಟಡದ ಒಳಗೆ ಡೂಮ್ ಒಂದನ್ನು ಹಾಕಿದ್ದು ಬಿಟ್ಟರೆ, ಬೇರೆ ಏನೂ ಮಾಡಿಲ್ಲ. ತಾರಾಲಯ ಪಾಳು ಬಿದ್ದಿದ್ದರಿಂದ ಇಲ್ಲಿಗೆ ಬರುವ ಪುಂಡ ಪೋಕರು, ಮುಂಭಾಗದ ಗಾಜುಗಳನ್ನು ಪುಡಿ ಮಾಡಿದ್ದಾರೆ. ಶೌಚಾಲಯದ ಎಲ್ಲ ವಸ್ತುಗಳನ್ನು ಕಿತ್ತು ಹಾಕಲಾಗಿದೆ. ನೆಲಕ್ಕೆ ಹಾಕಿದ್ದ ಟೈಲ್ಸ್​ಗಳನ್ನು ಕಿತ್ತುಕೊಂಡು ಹೋಗಿದ್ದಾರೆ.

ಆಯನೂರು ತಾರಾಲಯ

ತಾರಾಲಯದ ಕಟ್ಟಡ ನಿರ್ಮಾಣ ಮಾಡಿದ್ದು ಬಿಟ್ಟರೆ ಬೇರೆ ಕಾಮಗಾರಿ ನಡೆಯದ ಕಾರಣ ಇಲ್ಲಿ ಗುಂಡು ಪಾರ್ಟಿ ಮಾಡಲಾಗುತ್ತಿದೆ. ಗುಂಡು ಹಾಕಿ ಇಲ್ಲೆ ಮಲಗಿ ನಂತರ ವಾಪಸ್ ಆಗ್ತಾ ಇದ್ದಾರೆ‌. ಇದಕ್ಕೆ ಇಲ್ಲಿ ಸಿಗುವ ಎಣ್ಣೆ ಬಾಟಲಿಗಳೇ ಸಾಕ್ಷಿಯಾಗಿವೆ. ಗಾಂಜಾ ಸೇವನೆ ಸೇರಿದಂತೆ ಇತರ ಅನೈತಿಕ ಚಟುವಟಿಕೆಗಳು ಇಲ್ಲಿ‌ ನಡೆಯುತ್ತಿವೆ. ಇದಕ್ಕೆ ಬ್ರೇಕ್ ಹಾಕಬೇಕಿದೆ.

ತಾರಾಲಯದೊಳಗೆ ಪುಂಡ -ಪೋಕರಿಗಳ ಹಾವಳಿ

ಕನಿಷ್ಠ ಕಟ್ಟಡ ರಕ್ಷಣೆ ಮಾಡದ ಆಡಳಿತ, ಜನಪ್ರತಿನಿಧಿಗಳು: ಆಯನೂರಿನ ತಾರಾಲಯ ಕಟ್ಟಡ ನಿರ್ಮಾಣವಾಗಿ ಐದು ವರ್ಷವಾಗಿದೆ. ಕಳೆದ ಐದು ವರ್ಷಗಳಿಂದ ಕಟ್ಟಡವನ್ನು ಗ್ರಾಮ ಪಂಚಾಯಿತಿ, ತಾಲೂಕು ಆಡಳಿತ, ಜಿಲ್ಲಾಡಳಿತವಾಗಲಿ ಯಾರು ಸಹ ರಕ್ಷಣೆ ಮಾಡಿಲ್ಲ. ಇದರಿಂದ ಇಲ್ಲಿಗೆ ಬರುವ ಕಿಡಿಗೇಡಿಗಳು ಸುಮ್ಮನೆ ಇರದೇ, ಗಾಜಿಗೆ ಕಲ್ಲು ಒಡೆಯುತ್ತಾರೆ. ಕಟ್ಟಡದ ಒಳಗೆ, ಹೊರಗೆ ಗುಂಡು ಪಾರ್ಟಿ ಮಾಡುತ್ತಿದ್ದಾರೆ.

ಕಟ್ಟಡ ನಿರ್ಮಾಣದ ನಂತರ ನಿರ್ಮಿತಿ ಕೇಂದ್ರ ಯಾರಿಗೆ ವಹಿಸಿತು. ಯಾರು ಇದರ ಉಸ್ತುವಾರಿ. ಯಾರು ಮಾಡ್ತಾ ಇದ್ದರು ಎಂದರೆ, ಯಾರಿಗೂ ಗೊತ್ತಿಲ್ಲ. ಆದರೆ, ಕಾಮಗಾರಿ ಮುಗಿದಿರುವ ಬಗ್ಗೆ ಮಾತ್ರ ದೊಡ್ಡದಾಗಿ ಬೋರ್ಡ್ ಹಾಕಲಾಗಿದೆ. ತಾರಾಲಯ ಆಯನೂರಿಗೆ ತರುವಲ್ಲಿ ಆಸಕ್ತಿ ತೋರಿದ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ನಂತರ ತಮ್ಮ ಆಸಕ್ತಿಯನ್ನು ಕಳೆದುಕೊಂಡ ಪರಿಣಾಮ ತಾರಾಲಯ ಇಂದು ಪಾಳು ಬಿದ್ದಿದೆ.

ಆಯನೂರಿಗೆ ತಾರಾಲಯ ಬಂದಾಗ ಸಂತಸ ಪಟ್ಟಿದ್ದ ಆಯನೂರು ಸುತ್ತಮುತ್ತಲಿನ ಗ್ರಾಮಸ್ಥರು ಈಗ ವಿಷಾದವನ್ನು ಅನುಭವಿಸುತ್ತಿದ್ದಾರೆ. ಇನ್ನಾದರೂ ಸ್ಥಳೀಯ ಜನಪ್ರತಿನಿಧಿಗಳು, ಸಂಸದರು ಹಾಗೂ ಜಿಲ್ಲಾಡಳಿತ ಇತ್ತ ಗಮನಹರಿಸಿ ತಾರಾಲಯವನ್ನು ವಿದ್ಯಾರ್ಥಿಗಳ ಉಪಯೋಗಕ್ಕೆ ತರುವಂತಾಗಲಿ ಎಂದು ಸ್ಥಳೀಯರು ವಿನಂತಿಸಿದ್ದಾರೆ.

ಓದಿ:ಸಾಲದ ಸುನಾಮಿಯಲ್ಲಿ ದೇಶ, ರಾಜ್ಯ - ಇದು ಮೋದಿ ಸರ್ಕಾರದ ಸಾಧನೆ: ಸಿದ್ದರಾಮಯ್ಯ ವ್ಯಂಗ್ಯ

ABOUT THE AUTHOR

...view details