ಶಿವಮೊಗ್ಗ: ಪ್ರಪಂಚಾದ್ಯಂತ ಕೊರೊನಾ ವೈರಸ್ ಕಾಟವಾದರೆ, ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ಮರಣ ಮೃದಂಗ ಬಾರಿಸುತ್ತಿದೆ.
ಕೊರೊನಾ ಮಧ್ಯೆ ಸದ್ದು ಮಾಡ್ತಿದೆ ಮಂಗನಕಾಯಿಲೆ... ಮಲೆನಾಡಿನಲ್ಲಿ ಕೆಎಫ್ಡಿಗೆ ಮತ್ತೊಂದು ಬಲಿ!
ಕೊರೊನಾ ಭೀತಿ ಹೆಚ್ಚಿರುವ ಮಧ್ಯೆಯೇ ಮಲೆನಾಡು ಹೆಬ್ಬಾಗಿಲು ಶಿವಮೊಗ್ಗದಲ್ಲಿ ಮಂಗನ ಕಾಯಿಲೆ ಸದ್ದು ಮಾಡ್ತಿದೆ. ಕೆಎಫ್ಡಿಗೆ 65 ವರ್ಷದ ವೃದ್ಧರೊಬ್ಬರು ಬಲಿಯಾಗಿದ್ದಾರೆ.
ಕೆಎಫ್ಡಿ(ಕ್ಯಾಸನೂರು ಫಾರೆಸ್ಟ್ ಡಿಸೀಜ್) ಯಿಂದ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬೆಜ್ಜಬಳ್ಳಿ ಬಳಿಯ ಕುಕ್ಕೆ ಗ್ರಾಮದ ದೇವದಾಸ್ (65) ಎಂಬುವರು ಮಣಿಪಾಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇವರು ಕಳೆದ ನಾಲ್ಕೈದು ದಿನಗಳಿಂದ ತೀರ್ಥಹಳ್ಳಿಯ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
ಶನಿವಾರ ತೀರ್ಥಹಳ್ಳಿ ತಾಲೂಕಿನ ಚಿರನಕೋಡಿ ಗ್ರಾಮದ ಗುಲಾಬಿ ಎಂಬ ಮಹಿಳೆ ಸಹ ಸಾವನ್ನಪ್ಪಿದ್ದರು. ಅಲ್ಲದೆ ಈವರೆಗೆ ಮಂಗನಕಾಯಿಲೆಗೆ ಅರಳಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಾಲ್ಕು ಜನರು ಬಲಿಯಾಗಿದ್ದಾರೆ.