ಶಿವಮೊಗ್ಗ:ರಾಜ್ಯ ಸರ್ಕಾರ ನಿರುದ್ಯೋಗ ಭತ್ಯೆ ವಿಚಾರದಲ್ಲಿ ನಿರುದ್ಯೋಗಿಗಳಿಗೆ ಭ್ರಮನಿರಸನಗೊಳಿಸಿದ್ದಾರೆ ಎಂದು ಸಂಸದ ಬಿ ವೈ ರಾಘವೇಂದ್ರ ಟೀಕಿಸಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ನಿರುದ್ಯೋಗಿ ಯುವಕ - ಯುವತಿಯರಿಗೆ ನಿರುದ್ಯೋಗ ಭತ್ಯೆ ನೀಡುವ ಭರವಸೆ ನೀಡಿತ್ತು. ಗ್ಯಾರಂಟಿ ಅಲೆಯ ಮೇಲೆ ಗೆದ್ದು ಬಂದ ಕಾಂಗ್ರೆಸ್ ಸರ್ಕಾರ ಈಗ ಗ್ಯಾರಂಟಿ ಜಾರಿಗೆ ಅನೇಕ ಮಾನದಂಡಗಳನ್ನು ಹಾಕಿದೆ. ಘೋಷಣೆ ಮಾಡಿದ ಅನಿವಾರ್ಯತೆಗೆ ಗ್ಯಾರಂಟಿ ಜಾರಿ ಮಾಡುತ್ತಿದೆ. ದೊಡ್ಡ ಸಂಖ್ಯೆಯಲ್ಲಿ ನಿರುದ್ಯೋಗಿಗಳಿದ್ದಾರೆ. ನಿರುದ್ಯೋಗಿಗಳಿಗೆ ಈ ಯೋಜನೆ ತಲುಪುವ ನಮ್ಮ ಯೋಚನೆಯನ್ನು ರಾಜ್ಯ ಸರ್ಕಾರ ಸುಳ್ಳಾಗಿಸಿದೆ ಎಂದರು.
2023 ಏಪ್ರಿಲ್ ನಂತರ ಪಾಸಾಗಿರಬೇಕು, ಹೀಗೆ ಅನೇಕ ಕಂಡೀಷನ್ ಹಾಕಿದ್ದಾರೆ. ಏಪ್ರಿಲ್ನ ನಾಲ್ಕೈದು ತಿಂಗಳ ನಂತರ ಫಲಿತಾಂಶ ಪ್ರಕಟವಾಗಿರುವ ಕಾರಣಕ್ಕೆ ಅಂತಹವರಿಗೆ ಈ ಯೋಜನೆ ಲಭ್ಯವಾಗಲ್ಲ. ನಮ್ಮ ಜಿಲ್ಲೆಯಲ್ಲಿ 3,500 ಸಾವಿರ ಯುವಕರು ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ನಿರುದ್ಯೋಗಿ ಯುವಕರಿಂದ ಮತ ಪಡೆದ ರಾಜ್ಯ ಸರ್ಕಾರ ಈಗ ಕಂಡೀಷನ್ ಹಾಕಿದೆ. ಅದರಲ್ಲೂ ಎಪಿಎಲ್ - ಬಿಪಿಎಲ್ ಎಂದು ವರ್ಗಾವಣೆ ಮಾಡಿದ್ದಾರೆ ಎಂದು ಹೇಳಿದರು.