ಕರ್ನಾಟಕ

karnataka

By

Published : Jan 31, 2022, 4:20 PM IST

ETV Bharat / state

ಸ್ಮಾರ್ಟ್ ಸಿಟಿ ಅವಾಂತರ : ಗುಂಡಿಗೆ ಬಿದ್ದು ಕಾಲು ಮುರಿದುಕೊಂಡ ದಿವ್ಯಾಂಗ..

ಇಮಾಮ್ ಸಾಬ್ ಇನಾಂದಾರ್ ಅವರು ಬಿದ್ದ ಗುಂಡಿಯೊಳಗೆ ಕಬ್ಬಿಣದ ರಾಡ್​ಗಳನ್ನು ಹಾಕಿರಲಿಲ್ಲ. ಒಂದು ವೇಳೆ ರಾಡ್​ಗಳನ್ನು ಹಾಕಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಸದ್ಯ ಇಮಾಮ್ ಸಾಬ್ ಇನಾಂದಾರ್ ಅವರ ಬಲಗಾಲಿಗೆ ಫ್ರಾಕ್ಚರ್ ಆಗಿದೆ. ಒಂದೂವರೆ ತಿಂಗಳು ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಸೂಚಿಸಿದ್ದಾರೆ..

shimoga
ರಸ್ತೆಯಲ್ಲಿ ಗುಂಡಿ

ಶಿವಮೊಗ್ಗ :ಸ್ಮಾರ್ಟ್ ಸಿಟಿ ಕಾಮಗಾರಿಯ ಅವಾಂತರಗಳು ಒಂದೆರಡಲ್ಲ. ಅವುಗಳಿಂದ ಆಗುವ ಅವಾಂತರಗಳು ನಿಲ್ಲುವ ಹಾಗೆ ಕಾಣುತ್ತಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಜನರು ಪ್ರತಿದಿನ ಹಿಡಿ ಶಾಪ ಹಾಕುವಂತಾಗಿದೆ. ಈಗ ಸ್ಮಾರ್ಟ್ ಸಿಟಿ ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ದಿವ್ಯಾಂಗರೊಬ್ಬರು ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದು, ನೋವಿನಿಂದ ಸಂಕಟ ಪಡುತ್ತಿದ್ದಾರೆ.

ಇಮಾಮ್ ಸಾಬ್ ಇನಾಂದಾರ್ (38) ಎಂಬುವ ದಿವ್ಯಾಂಗ ಸ್ಮಾರ್ಟ್ ಸಿಟಿ ಗುಂಡಿಗೆ ಬಿದ್ದು ಕಾಲು ಮುರಿದುಕೊಂಡಿದ್ದಾರೆ. ಗುತ್ತಿಗೆದಾರರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ.

ಗುಂಡಿಗೆ ಬಿದ್ದು ಕಾಲು ಮುರಿದುಕೊಂಡ ದಿವ್ಯಾಂಗ..

ಹೇಗಾಯ್ತು ಘಟನೆ?

ಇಮಾಮ್ ಸಾಬ್ ಇನಾಂದಾರ್ ಅವರು ಮೂಲತಃ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನವರು. ಇವರಿಗೆ ಹುಟ್ಟಿನಿಂದ ಅಂಧತ್ವ ಇದೆ. ಕಳೆದ ಐದು ವರ್ಷದಿಂದ ಶಿವಮೊಗ್ಗ ನ್ಯಾಯಾಲಯದಲ್ಲಿ 2ನೇ ಡಿವಿಜನ್ ಅಸಿಸ್ಟೆಂಟ್ ಆಗಿ ಇವರು ಕೆಲಸ ಮಾಡುತ್ತಿದ್ದಾರೆ.

ವೀರಭದ್ರೇಶ್ವರ ಟಾಕೀಸ್ ಬಳಿ ಇರುವ ಮುಸ್ಲಿಂ ಹಾಸ್ಟೆಲ್​ನಲ್ಲಿ ಇವರು ವಾಸವಾಗಿದ್ದಾರೆ. ಐದು ವರ್ಷದಿಂದ ಕುವೆಂಪು ರಂಗಮಂದಿರದ ಮುಂಭಾಗದ ರಸ್ತೆಯ ಮೂಲಕ ಇವರು ನ್ಯಾಯಾಲಯಕ್ಕೆ ತೆರಳುತ್ತಿದ್ದರು.

ಗುರುವಾರ ಮಧ್ಯಾಹ್ನ ಊಟಕ್ಕೆಂದು ಇಮಾಮ್ ಸಾಬ್ ಇನಾಂದಾರ್ ಅವರು ಶಿವಮೊಗ್ಗ ನ್ಯಾಯಾಲಯದಿಂದ ಹಾಸ್ಟೆಲ್​ಗೆ ತೆರಳುತ್ತಿದ್ದರು. ಪ್ರತಿದಿನದ ಹಾಗೆ ರಾಷ್ಟ್ರೀಯ ಕಾನೂನು ಕಾಲೇಜು ಮುಂಭಾಗದ ರಸ್ತೆಯಲ್ಲಿ ಅವರು ನಡೆದು ಬರುತ್ತಿದ್ದರು. ಆದರೆ, ಆ ರಸ್ತೆಯಲ್ಲಿ ಹೊಸತೊಂದು ಗುಂಡಿ ತೆಗೆದಿರುವುದು ಇಮಾಮ್ ಸಾಬ್ ಇನಾಂದಾರ್ ಅವರ ಗಮನಕ್ಕೆ ಬಂದಿರಲಿಲ್ಲ.

ಪ್ರತಿದಿನ ಓಡಾಡುವ ರಸ್ತೆ ಅದು. ಹಾಗಾಗಿ, ಅವರಿಗೆ ಹೊಸದಾಗಿ ಗುಂಡಿ ತೆಗೆದಿದ್ದಾರೆ ಎನ್ನುವುದು ಗೊತ್ತಾಗಿಲ್ಲ. ಗುಂಡಿ ತೆಗೆದ ನಂತರ ಅಲ್ಲಿ ಯಾವುದೇ ಬ್ಯಾರಿಕೇಡ್​ಗಳನ್ನು ಸಹ ಇಟ್ಟಿಲ್ಲ. ಹಾಗಾಗಿ, ನೇರವಾಗಿ ಗುಂಡಿಯೊಳಗೆ ಬಿದ್ದು ತೊಡೆ ಭಾಗಕ್ಕೆ ಪೆಟ್ಟಾಗಿದೆ.

ತಪ್ಪಿತು ಭಾರೀ ಅನಾಹುತ

ಇಮಾಮ್ ಸಾಬ್ ಇನಾಂದಾರ್ ಅವರು ಬಿದ್ದ ಗುಂಡಿಯೊಳಗೆ ಕಬ್ಬಿಣದ ರಾಡ್​ಗಳನ್ನು ಹಾಕಿರಲಿಲ್ಲ. ಒಂದು ವೇಳೆ ರಾಡ್​ಗಳನ್ನು ಹಾಕಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಸದ್ಯ ಇಮಾಮ್ ಸಾಬ್ ಇನಾಂದಾರ್ ಅವರ ಬಲಗಾಲಿಗೆ ಫ್ರಾಕ್ಚರ್ ಆಗಿದೆ. ಒಂದೂವರೆ ತಿಂಗಳು ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಸೂಚಿಸಿದ್ದಾರೆ.

ಗುತ್ತಿಗೆದಾರರ ನಿರ್ಲಕ್ಷ್ಯ

ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಅವೈಜ್ಞಾನಿಕ ಎಂಬ ಆರೋಪವಿದೆ. ಈ ಮಧ್ಯೆ ಕಾಮಗಾರಿ ಸಂದರ್ಭ ಜನರ ಸುರಕ್ಷತೆ ಬಗ್ಗೆ ಕಿಂಚಿತ್ತು ಗಮನ ಹರಿಸುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ. ಕಾಮಗಾರಿಗಾಗಿ ಗುಂಡಿ ತೆಗೆದು ಹಾಗೆ ಬಿಡಲಾಗುತ್ತದೆ. ಗುಂಡಿಯ ಸುತ್ತಲೂ ಬ್ಯಾರಿಕೇಡ್ ಅಳವಡಿಸಬೇಕು. ಆದರೆ, ಆ ಬಗ್ಗೆ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದನ್ನು ಪರಿಶೀಲಿಸಬೇಕಾದ ಅಧಿಕಾರಿಗಳು ಕ್ಯಾರೆ ಅನ್ನದೆ ಕಚೇರಿಗೆ ಸೀಮಿತವಾಗಿದ್ದಾರೆ. ಇದೇ ಕಾರಣಕ್ಕೆ ಇಮಾಮ್ ಸಾಬ್ ಇನಾಂದಾರ್ ಬಿದ್ದು ಗಾಯಗೊಂಡಿದ್ದಾರೆ.

ಗುತ್ತಿಗೆದಾರನ ವಿರುದ್ಧ ಕೇಸ್

ಸ್ಮಾರ್ಟ್ ಸಿಟಿ ಗುತ್ತಿಗೆದಾರರು ಸುರಕ್ಷತಾ ಕ್ರಮ ಕೈಗೊಳ್ಳದಿರುವ ಹಿನ್ನೆಲೆ ಅವರ ವಿರುದ್ಧ ಇಮಾಮ್ ಸಾಬ್ ಇನಾಂದಾರ್ ಅವರು ದೂರು ದಾಖಲಿಸಿದ್ದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

‘ನನಗೆ ಆದಂಗೆ ಇನ್ನೊಬ್ಬರಿಗೆ ಆಗಬಾರದು. ಯಾರಿಗೂ ನೋವಾಗಬಾರದು ಎನ್ನುವ ಕಾರಣಕ್ಕೆ ದೂರು ಕೊಟ್ಟಿದ್ದೇನೆ. ಈತನಕ ಸ್ಮಾರ್ಟ್ ಸಿಟಿಯ ಅಧಿಕಾರಿಗಳು ಯಾರೂ ಬಂದು ತಮ್ಮ ಆರೋಗ್ಯ ವಿಚಾರಿಸಿಲ್ಲ' ಎಂದು ಬೇಸರ ವ್ಯಕ್ತಪಡಿಸುತ್ತಾರೆ ಗಾಯಾಳು ಇಮಾಮ್ ಸಾಬ್ ಇನಾಂದಾರ್.

ಓದಿ:ನಾ ಮನೆಯಲ್ಲಿ ರಾಜಕೀಯ ಮಾಡಲ್ಲ : ಮೇಕೆದಾಟು ಅಭಿವೃದ್ಧಿ ಸಂಬಂಧ ಆನಂದ್ ಸಿಂಗ್ ಜತೆ ಮಾತನಾಡಿದ್ದೇನೆ : ಡಿಕೆಶಿ

ABOUT THE AUTHOR

...view details