ಶಿವಮೊಗ್ಗ:ಹೊಸ ಶಿಕ್ಷಣ ನೀತಿ ಅನ್ವಯ ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳಲ್ಲಿ 2022-23ನೇ ಸಾಲಿನ ಸ್ನಾತಕ ಪದವಿ ಕೋರ್ಸ್ಗಳ ಪ್ರವೇಶ ಪ್ರಕ್ರಿಯೆ ಜುಲೈ 01ರಿಂದಲೇ ಪ್ರಾರಂಭವಾಗಿದೆ. ಜು. 30ರ ವರೆಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಇಲಾಖೆಯಡಿ ಬರುವ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು, ಕಾಲೇಜು ಶಿಕ್ಷಣ, ಅನುದಾನ ಮತ್ತು ಅನುದಾನರಹಿತ ಕಾಲೇಜುಗಳಿಗೆ ಈ ವೇಳಾಪಟ್ಟಿಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಕುವೆಂಪು ವಿಶ್ವವಿದ್ಯಾಲಯವು ಇಲಾಖೆಯ ಶೈಕ್ಷಣಿಕ ವೇಳಾಪಟ್ಟಿಯನ್ನು ಅಳವಡಿಸಿಕೊಂಡಿದ್ದು, ವಿವಿ ವ್ಯಾಪ್ತಿಯ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಪದವಿ ಕಾಲೇಜುಗಳಲ್ಲಿ 2022-23ನೇ ಸಾಲಿನ ಪ್ರವೇಶ ಪ್ರಕ್ರಿಯೆ ಜುಲೈ 01ರಿಂದಲೇ ಆರಂಭವಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕುಲಸಚಿವೆ ಜಿ. ಅನುರಾಧ ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ದೇವಾಲಯಕ್ಕೆ ಬಂದಿದ್ದ ವೃದ್ಧೆ ದಿಢೀರ್ ಕಾಣೆ: ಕುಮುದ್ವತಿ ನದಿಯಲ್ಲಿ ಕೊಚ್ಚಿ ಹೋಗಿರುವ ಶಂಕೆ
ಎಲ್ಲ ಪ್ರವೇಶ ಪ್ರಕ್ರಿಯೆಗಳು ಕರ್ನಾಟಕ ಸರ್ಕಾರದ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (UUCMS) ಪೋರ್ಟಲ್ ಮೂಲಕ ನಡೆಯಲಿದೆ. ವಿದ್ಯಾರ್ಥಿಗಳು ಒಂದಕ್ಕಿಂತ ಹೆಚ್ಚಿನ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಕೋರಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಪ್ರತಿ ಕಾಲೇಜುಗಳ ಹಂತದಲ್ಲಿ UUCMS ಹೆಲ್ಪ್ ಡೆಸ್ಕ್ಗಳನ್ನು ಪ್ರಾರಂಭಿಸಲಾಗಿದ್ದು, ವಿದ್ಯಾರ್ಥಿಗಳು ಪ್ರವೇಶ ಪ್ರಕ್ರಿಯೆ ಸಂಬಂಧ ಯಾವುದೇ ಸಮಸ್ಯೆಗಳಿದ್ದರೂ ಪರಿಹರಿಸಿಕೊಳ್ಳಬಹುದು.
ಕುವೆಂಪು ವಿಶ್ವವಿದ್ಯಾಲಯದಲ್ಲಿ ಈ-ಗವರ್ನೆನ್ಸ್ ಘಟಕ ಸ್ಥಾಪಿಸಲಾಗಿದೆ. ಎನ್ಇಪಿ ಪ್ರವೇಶ ಪ್ರಕ್ರಿಯೆಯ ಯಾವುದೇ ಗೊಂದಲಗಳಿದ್ದರೂ ನಿಭಾಯಿಸಲು ಸನ್ನದ್ಧವಾಗಿದೆ. ಹೆಚ್ಚಿನ ಮಾಹಿತಿಗೆ ಘಟಕದ ಮುಖ್ಯಸ್ಥ ಪ್ರೊ. ಅಶ್ವಕ್ ಅಹಮದ್ ಅವರನ್ನು (98451-42267) ಸಂಪರ್ಕಿಸಬಹುದು ಎಂದು ಕುಲಸಚಿವೆ ಜಿ. ಅನುರಾಧ ಅವರು ತಿಳಿಸಿದ್ದಾರೆ.