ಕರ್ನಾಟಕ

karnataka

ಗೃಹಸಚಿವರ ತವರಲ್ಲಿ ಅಕ್ರಮ ಮರಳು ಗಣಿಗಾರಿಕೆಗಿಲ್ಲ ಕಡಿವಾಣ: ಪ್ರತಿದಿನ ಸರ್ಕಾರಕ್ಕೆ ₹30 ಲಕ್ಷ ನಷ್ಟ!

By

Published : Mar 31, 2022, 8:28 PM IST

ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಣೆ ಎಗ್ಗಿಲ್ಲದಂತೆ ನಡೆಯುತ್ತಿದೆ. ತೀರ್ಥಹಳ್ಳಿ ತಾಲೂಕು ಒಂದರಲ್ಲೇ ಕನಿಷ್ಠ 300 ಲೋಡ್ ಮರಳು ಅಕ್ರಮವಾಗಿ ಸಾಗಣೆಯಾಗುತ್ತಿದೆ. ಇದರಿಂದ ಪ್ರತಿದಿನ ಸರ್ಕಾರಕ್ಕೆ ಕನಿಷ್ಠ 30 ಲಕ್ಷ ರೂಪಾಯಿ ನಷ್ಟ ಸಂಭವಿಸುತ್ತಿದೆ ಎನ್ನುವುದೊಂದು ಅಂದಾಜು.

illegal-sand-mining-under-the-protection-police-in-shivamogga
ಶಿವಮೊಗ್ಗದಲ್ಲಿ ಅಕ್ರಮ ಮರಳುಗಾರಿಕೆ

ಶಿವಮೊಗ್ಗ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತು ತೀರ್ಥಹಳ್ಳಿಯ ಮರಳು ಮಾಫಿಯಾಗೆ ಹೇಳಿ ಮಾಡಿಸಿದಂತಿದೆ. ಇಲ್ಲಿ ಅಕ್ರಮವನ್ನು ತಡೆಯಬೇಕಾದವರೇ ಅಕ್ರಮದಲ್ಲಿ ಸಿಕ್ಕಿಬಿದ್ದಿದ್ದಾರೆ. ಅಕ್ರಮ ಮರಳು ಸಾಗಣೆ ತಡೆಯಬೇಕಾಗಿದ್ದ ಪೊಲೀಸ್ ಅಧಿಕಾರಿಯೇ ಕಾನೂನು ಬಾಹಿರ ಕೆಲಸದಲ್ಲಿ ಭಾಗಿಯಾಗಿ ಇದೀಗ ಸಸ್ಪೆಂಡ್ ಆಗಿದ್ದಾರೆ.

ಮರಳು ಸಾಗಣೆ ಮಾಡುವ ಪ್ರತಿ ಲಾರಿಯಿಂದ ಪ್ರತಿ ತಿಂಗಳು ತಲಾ 30 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಸಬ್ ಇನ್ಸ್​ಪೆಕ್ಟರ್ ಮುಖವಾಡ ಬಯಲಾಗಿದೆ. ಎರಡು ದಿನಗಳ ಹಿಂದೆ ರಾತ್ರಿ 09 ಗಂಟೆಯ ಸುಮಾರಿಗೆ ಶಿವಮೊಗ್ಗ ಎಸ್​ಪಿ ಲಕ್ಷ್ಮೀಪ್ರಸಾದ್ ಅವರು ತೀರ್ಥಹಳ್ಳಿ ಕಡೆಯಿಂದ ಶಿವಮೊಗ್ಗದತ್ತ ಬರುತ್ತಿದ್ದಾಗ ಮಾರ್ಗಮಧ್ಯೆ ತೀರ್ಥಹಳ್ಳಿ ಕಡೆಯಿಂದ ಟಿಪ್ಪರ್ ಲಾರಿ ಬರುತ್ತಿರುವುದನ್ನು ಗಮನಿಸಿದ್ದಾರೆ.


ಈ ವೇಳೆ ಅನುಮಾನಗೊಂಡ ಎಸ್​ಪಿ, ಲಾರಿಯನ್ನು ತಪಾಸಣೆ ನಡೆಸಿದಾಗ ಟಿಪ್ಪರ್​ನಲ್ಲಿ ಮರಳು ಇರುವುದು ಪತ್ತೆಯಾಗಿದೆ. ಸಂಜೆ 06 ಗಂಟೆಯ ಬಳಿಕ ಮರಳು ಸಾಗಣೆ ಮಾಡಲು ಅವಕಾಶವಿಲ್ಲದಿದ್ದರೂ ಮರಳನ್ನು ಎಲ್ಲಿಗೆ ಸಾಗಿಸುತ್ತಿದ್ದೀರಿ? ಎಂದು ಲಾರಿ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಲಾರಿ ಚಾಲಕ ಮಾಳೂರು ಸಬ್‌ ಇನ್ಸ್​ಪೆಕ್ಟರ್​​ಗೆ ಮರಳು ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾನೆ.

ಭ್ರಷ್ಟ ಸಬ್‌ ಇನ್ಸ್‌ಪೆಕ್ಟರ್‌: ಇದರಿಂದ ಸಿಟ್ಟಿಗೆದ್ದ ಎಸ್​ಪಿ, ಮಾಳೂರು ಪಿಎಸ್​ಐ ಜಯಪ್ಪ ನಾಯ್ಕ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ, ಲಾರಿ ಸೀಜ್ ಮಾಡುವಂತೆಯೂ ಸೂಚನೆ ನೀಡಿದ್ದಾರೆ. ಎಸ್​ಪಿ ಅವರು ಮಾಳೂರು ಪಿಎಸ್​ಐಗೆ ತರಾಟೆಗೆ ತೆಗೆದುಕೊಂಡ ಬಳಿಕ ಸಿಟ್ಟಿಗೆದ್ದ ಮಾಳೂರು ಸಬ್ ಇನ್ಸ್​ಪೆಕ್ಟರ್ ಜಯಪ್ಪ ನಾಯ್ಕ ಅವರು ಮರಳು ಸಾಗಣೆದಾರನಿಗೆ ಕರೆಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ವಿಡಿಯೋ ವೈರಲ್‌ ಬಳಿಕ ಕ್ರಮ: ಈ ವೇಳೆ ಮರಳು ಸಾಗಣೆದಾರ, 'ಸರ್ ನಾನು ನಿಮಗೆ ಪ್ರತಿ ತಿಂಗಳೂ ತಪ್ಪಿಸದೆ 30 ಸಾವಿರ ರೂಪಾಯಿ ನೀಡುತ್ತಿದ್ದೇನೆ. ನನಗೆ ಈ ರೀತಿ ಬೈಯುತ್ತೀರಲ್ಲಾ?' ಎಂದಿದ್ದಾರೆ. ಬಳಿಕ ಹಣ ಪಡೆದಿದ್ದನ್ನೂ ಎಸ್​ಐ ಒಪ್ಪಿಕೊಂಡಿದ್ದಾರೆ. ಮರಳು ಸಾಗಣೆದಾರ ಹಾಗೂ ಸಬ್‌ ಇನ್ಸ್​ಪೆಕ್ಟರ್ ನಡುವಿನ ಫೋನ್ ಸಂಭಾಷಣೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೂರ್ವ ವಲಯ ಡಿಐಜಿ ತ್ಯಾಗರಾಜ್ ಅವರು ಮಾಳೂರು ಸಬ್ ಇನ್ಸ್​ಪೆಕ್ಟರ್ ಜಯಪ್ಪ ನಾಯ್ಕ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.

ಸರ್ಕಾರಕ್ಕೆ ದಿನವೊಂದಕ್ಕೆ ₹30 ಲಕ್ಷ ನಷ್ಟ: ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಣೆ ಎಗ್ಗಿಲ್ಲದಂತೆ ನಡೆಯುತ್ತಿದೆ. ತೀರ್ಥಹಳ್ಳಿ ತಾಲೂಕು ಒಂದರಲ್ಲೇ ಕನಿಷ್ಠ 300 ಲೋಡ್ ಮರಳು ಅಕ್ರಮವಾಗಿ ಸಾಗಣೆಯಾಗುತ್ತಿದೆ. ಇದರಿಂದ ಪ್ರತಿದಿನ ಸರ್ಕಾರಕ್ಕೆ ಕನಿಷ್ಠ 30 ಲಕ್ಷ ರೂಪಾಯಿ ನಷ್ಟ ಸಂಭವಿಸುತ್ತಿದೆ ಎನ್ನುವುದೊಂದು ಅಂದಾಜು.

ಇದನ್ನೂಓದಿ:ಶಿವಮೊಗ್ಗದಲ್ಲಿ ವಿಚಿತ್ರ ಘಟನೆ.. ಕಾಪಿ ಮಾಡುತ್ತಿದ್ದ ವಿದ್ಯಾರ್ಥಿಯ ಕೈ ಕಚ್ಚಿದ ಪರೀಕ್ಷಾ ಮೇಲ್ವಿಚಾರಕ!

ABOUT THE AUTHOR

...view details