ಕರ್ನಾಟಕ

karnataka

ETV Bharat / state

ಮಾಜಿ ಸಿಎಂ ಬಿಎಸ್​ವೈಗೆ ಗೌರವ ಡಾಕ್ಟರೇಟ್ ಪ್ರದಾನ

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾನಿಲಯದಿಂದ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ, ಮಾಜಿ ಸಿಎಂ ಯಡಿಯೂರಪ್ಪಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

By

Published : Jul 21, 2023, 8:03 PM IST

Updated : Jul 22, 2023, 12:20 PM IST

Honorary Doctorate Awarded to Former CM Yeddyurappa
Honorary Doctorate Awarded to Former CM Yeddyurappa

ಮಾಜಿ ಸಿಎಂ ಬಿಎಸ್​ವೈ, ರಾಜ್ಯಪಾಲರ ಭಾಷಣ

ಶಿವಮೊಗ್ಗ: ರೈತಪರ ಹೋರಾಟಗಾರ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಇರುವಕ್ಕಿ ಗ್ರಾಮದ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾನಿಲಯ ಆವರಣದಲ್ಲಿ ಇಂದು ನಡೆದ ಸುಗ್ಗಿ ಸಂಭ್ರಮ-8 (ಘಟಿಕೋತ್ಸವ) ದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿವಿಯ ಪರವಾಗಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದರು. ಇದು ಕೃಷಿ ವಿವಿಯ ಎರಡನೇ ಗೌರವ ಡಾಕ್ಟರೇಟ್ ಪ್ರಶಸ್ತಿಯಾಗಿದೆ.

ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ಯಡಿಯೂರಪ್ಪ, ನನ್ನ ಕರ್ಮಭೂಮಿಯಲ್ಲಿ ನಿಮ್ಮೆಲ್ಲರ ಮುಂದೆ ಡಾಕ್ಟರೇಟ್ ಪದವಿ ಪಡೆದಿದ್ದು, ನನ್ನ ಸೌಭಾಗ್ಯ. ನಾನೂ ಕೂಡ ಕೃಷಿ ಕುಟುಂಬದಿಂದ ಬಂದವನು. ಅಧಿಕಾರದ ಅವಧಿಯಲ್ಲಿ ರೈತರ ಪರ ಹಲವು ಯೋಜನೆಗಳನ್ನು ಜಾರಿ ಮಾಡಿದ್ದೇನೆ. ದೇಶದ ಆತ್ಮ ಇರುವುದು ಗ್ರಾಮಗಳಲ್ಲಿ ಎಂದು ಮಹಾತ್ಮ ಗಾಂಧಿ ತಿಳಿಸಿದಂತೆ ಗ್ರಾಮಗಳ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನ ನಡೆಸಿದ್ದೇನೆ. ಜೀತಮುಕ್ತಿ, ಬಗರ್ ಹುಕುಂ ಸೇರಿದಂತೆ ಹಲವು ಹೋರಾಟಕ್ಕಾಗಿ ಶಿಕಾರಿಪುರದಿಂದ ಬೆಂಗಳೂರಿಗೆ, ತಲಕಾವೇರಿಯಿಂದ ಕೆಆರ್​ಎಸ್​ ವರಿಗೆ ಮಾಡಿದ ಎಲ್ಲಾ ಪಾದಯಾತ್ರೆಗಳು ಈಗ ನೆನಪಾಗುತ್ತಿವೆ. ನನಗೆ ಈ ಪದವಿ ಪ್ರದಾನ ಮಾಡಿದ ನಿಮಗೆಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.

ನಂತರ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ, ಯಡಿಯೂರಪ್ಪಗೆ ಅಭಿನಂದನೆಗಳನ್ನು ಸಲ್ಲಿಸಿದರು. ಮಂಡ್ಯದಿಂದ ಶಿವಮೊಗ್ಗಕ್ಕೆ ಬಂದ ಯಡಿಯೂರಪ್ಪ ಬದುಕನ್ನು ಕಟ್ಟಿಕೊಂಡು ರಾಜಕೀಯವಾಗಿ ಸಾಕಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಈ ವಿಶ್ವ ವಿದ್ಯಾನಿಲಯ ಸ್ಥಾಪನೆಗೆ ಕಾರಣಿಕರ್ತರಾಗಿ ಅದೇ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದಾರೆ. ರಾಜ್ಯದ ಪ್ರಮುಖ ಹೋರಾಟಗಾರರಲ್ಲಿ‌ ಯಡಿಯೂರಪ್ಪ ಸಹ ಒಬ್ಬರು ಎಂದು ಬಿಎಸ್​ವೈ ರಾಜಕೀಯ ಹಾದಿಯನ್ನು ಗುಣಮಾನ ಮಾಡಿದರು.

ನಮ್ಮದು ಕೃಷಿ ಹಿನ್ನೆಲೆಯನ್ನು ಹೊಂದಿರುವ ದೇಶ. ರೈತ ನೆಮ್ಮದಿಯಾಗಿದ್ದರೆ ಮಾತ್ರ ಎಲ್ಲರೂ ನೆಮ್ಮದಿಯಾಗಿರುತ್ತಾರೆ. ಇತ್ತೀಚೆಗೆ ಸೆಕಂಡರಿ ಕೃಷಿಗೆ ಹೆಚ್ಚು ಒತ್ತು ನೀಡಲಾಗಿದೆ. ನೀವು ಉದ್ಯೋಗಸ್ಥರಾಗದೇ ಹಲವರಿಗೆ ಉದ್ಯೋಗ ನೀಡುವಂತರಾಗಬೇಕು. ಜಿಡಿಪಿಯಲ್ಲಿ ಕೃಷಿಯು ಪ್ರಗತಿಯಲ್ಲಿದೆ. ನೀವು ಯಾವುದೇ ಉದ್ಯೋಗಗಳಲ್ಲಿ ಇದ್ದರೂ ಸಹ ಕೃಷಿಯನ್ನು ಮರೆಯಬೇಡಿ ಎಂದು ವಿವಿ ವಿದ್ಯಾರ್ಥಿಗಳಿಗೆ ಕೆಲವು ಸಲಹೆಗಳನ್ನು ನೀಡಿದರು.

ಬಳಿಕ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ದೇಶದ ಅರ್ಥ ವ್ಯವಸ್ಥೆಯಲ್ಲಿ ಕೃಷಿ ಬಹುಮುಖ್ಯ. ವಿವಿಯು ಕೃಷಿಗೆ ಸಾಕಷ್ಟು ಬೆಂಬಲ‌ ನೀಡುತ್ತದೆ. ಯಡಿಯೂರಪ್ಪಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ್ದಕ್ಕೆ ಅಭಿನಂದನೆ. ಇವರ ಸೇವೆ ಇನ್ನಷ್ಟು ಜನರಿಗೆ ಸಿಗಲಿ ಎಂದು ಬಿಎಸ್​ವೈಗೆ ಅಭಿನಂದನೆ ಸಲ್ಲಿಸಿದರು.

ಇದೇ ವೇಳೆ ಪದವಿ ಪಡೆದ ವಿದ್ಯಾರ್ಥಿಗಳಿಗೂ ಅಭಿನಂದನೆ ಸಲ್ಲಿಸಿದ ರಾಜ್ಯಪಾಲರು, ನೀವು ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಶ್ರಮಿಸಬೇಕು. ದೇಶದ ಆರ್ಥಿಕ‌ ಪ್ರಗತಿಯಲ್ಲಿ‌ ಕೃಷಿ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದ್ದು, ರಾಷ್ಟ್ರದ ಅರ್ಥ ವ್ಯವಸ್ಥೆ ಹಾಗೂ ಅಭಿವೃದ್ಧಿಗೆ ನೀವು ವಿಶ್ವಗುರು ಮಾಡಲು ಶ್ರಮಿಸಬೇಕೆಂದು ಸಲಹೆ ನೀಡಿದರು.

ರೈತನ ಮಗಳಿಗೆ 4 ಚಿನ್ನದ ಪದಕ:ಈ ವೇಳೆ ಆರು ಜನ ವಿದ್ಯಾರ್ಥಿಗಳಿಗೆ ಪಿಹೆಚ್​​ಡಿ ಪ್ರಧಾನ ಮಾಡಲಾಯಿತು. ಈ ಆರು‌ ಜನ ಬಂಗಾರದ ಪದಕ ವಿಜೇತರಾಗಿದ್ದು ವಿಶೇಷ. ಹಾಗೆಯೇ ಎಂಎಸ್ಸಿ ಪದವಿಯಲ್ಲಿ ಅತಿ ಹೆಚ್ಚು ಅಂಕಗಳಿಗೆ ಮಾಡಿದ 13 ಜನ ವಿದ್ಯಾರ್ಥಿಗಳು 14 ಬಂಗಾರದ ಪದಕ ಪಡೆದುಕೊಂಡರು. ಬಿಎಸ್ಸಿ ಪದವಿಯಲ್ಲಿ ಹಾಸನ ಜಿಲ್ಲೆ ಹಳೆಬೀಡು ಬಳಿಯ ಮಲ್ಲಾಪುರ ಗ್ರಾಮದ ಕಾವ್ಯ ನಾಲ್ಕು ಚಿನ್ನದ ಪದಕ ಕೊರಳಿಗೇರಿಸಿಕೊಂಡರು.

ಕೃಷಿ ಕುಟುಂಬದಿಂದ ಬಂದ ಕಾವ್ಯ ಮುಂದೆ ಸಾರ್ವಜನಿಕ ಸೇವೆ ಸಲ್ಲಿಸುವ ಇಚ್ಛೆ ವ್ಯಕ್ತಪಡಿಸಿದರು. ಇವರ ತಂದೆ ಧನಂಜಯ ಎರಡು ಎಕರೆ ಭೂಮಿಯಲ್ಲಿ ಕೃಷಿ ಮಾಡಿ, ಇಬ್ಬರು ಮಕ್ಕಳನ್ನು ಚೆನ್ನಾಗಿಯೇ ಓದಿಸಿದ್ದಾರೆ. ಹಿರಿಯ ಮಗ ಇಂಜಿನಿಯರ್ ಆಗಿದ್ದಾರೆ. 'ತಮ್ಮ ತಂದೆ ಕಷ್ಟದಲ್ಲಿ‌ ನಮ್ಮನ್ನು ಓದಿಸಿದ್ದಾರೆ. ಮುಂದೆ ಸಾರ್ವಜನಿಕ ಸೇವೆಯಲ್ಲಿ ಗ್ರಾಮೀಣಾಭಿವೃದ್ಧಿಯಲ್ಲಿ ಸೇವೆ ಮಾಡುವುದಾಗಿ' ಕಾವ್ಯ ತಿಳಿಸಿದರು. ಧನಂಜಯ ಅವರು ಮಾತನಾಡಿ ಕಾವ್ಯ ನಾಲ್ಕು ಪದಕಗಳಿಸುತ್ತಾರೆ ಎಂಬ ನಂಬಿಕೆ‌ ಇತ್ತು. ಕಷ್ಟ ಪಟ್ಟು ಓದಿದ್ದಾಳೆ. ನಾವು ಸಹ ಕಷ್ಟದಲ್ಲಿ ಓದಿಸಿದ್ದೇವೆ. ಮಗಳು ಪದಕಗಳಿಸಿದ್ದು ನಮಗೆ ಸಂತೋಷ ತಂದಿದೆ ಎಂದು ಈ ಟಿವಿ ಭಾರತದ ಜೊತೆ ತಮ್ಮ ಸಂತಸ ಹಂಚಿಕೊಂಡರು.

ರೈತನ ಮಗನಿಗೆ ಡಾಕ್ಟರೇಟ್ ನೀಡಿರುವುದು ನಮಗೆ ಸಂತೋಷ ತಂದಿದೆ. ನಮ್ಮ ತಂದೆಗೆ ವಿದೇಶದಲ್ಲಿ ಡಾಕ್ಟರೇಟ್ ನೀಡಿದ್ದರೂ ಸಹ ನಮ್ಮ ನೆಲದ ಡಾಕ್ಟರೇಟ್ ನೀಡಿರುವುದಕ್ಕೆ ಹೆಚ್ಚಿನ ತೂಕ ಎಂದು ಇದೇ ವೇಳೆ ಯಡಿಯೂರಪ್ಪನವರ ಪುತ್ರಿ ಅರುಣಾದೇವಿ ಸಂತಸ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ವಿವಿಯ ಕುಲಪತಿ ಡಾ.ಆರ್.ಸಿ.ಜಗದೀಧ್ ಸೇರಿದಂತೆ ಹಲವರು‌ ಹಾಜರಿದ್ದರು.

ಇದನ್ನೂ ಓದಿ:ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ ಮೂವರು ಗಣ್ಯರಿಗೆ KSOU ಗೌರವ ಡಾಕ್ಟರೇಟ್

Last Updated : Jul 22, 2023, 12:20 PM IST

ABOUT THE AUTHOR

...view details