ಕರ್ನಾಟಕ

karnataka

By

Published : May 4, 2023, 7:07 AM IST

ETV Bharat / state

ಶಿವಮೊಗ್ಗವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡಲು ಬಿಜೆಪಿಯನ್ನು ಹೊರ ಹಾಕಿ: ಹೆಚ್‌ಡಿಕೆ

ಎರಡೂ ರಾಷ್ಟ್ರೀಯ ಪಕ್ಷಗಳ ಸ್ವಯಂಕೃತ ಅಪರಾಧದಿಂದ ನಮ್ಮ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಕುಮಾರಸ್ವಾಮಿ ಹೇಳಿದರು.

ಹೆಚ್​ ಡಿ ಕುಮಾರಸ್ವಾಮಿ
ಹೆಚ್​ ಡಿ ಕುಮಾರಸ್ವಾಮಿ

ಶಿವಮೊಗ್ಗ: ಶಿವಮೊಗ್ಗವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡಲು ಬಿಜೆಪಿಯನ್ನು ಹೊರ ಹಾಕಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತದಾರರಿಗೆ ಮನವಿ ಮಾಡಿದರು. ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಪರ ನಗರದ ಎನ್​ಇಎಸ್ ಮೈದಾ‌ನದಲ್ಲಿ ಬುಧವಾರ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಶಿವಮೊಗ್ಗ ನಗರ ಇಷ್ಟು ಅಭಿವೃದ್ಧಿಯಾಗಲು ನಾನು ಕಾರಣ. ಅಂದು ಬಿ.ಎಸ್.ಯಡಿಯೂರಪ್ಪನವರು ನಮ್ಮ ಪಕ್ಷಕ್ಕೆ ಬರುತ್ತೇನೆ, ನನ್ನನ್ನು ಎಂಎಲ್ಸಿ ಮಾಡಿ, ಮಂತ್ರಿ ಮಾಡಿ ಎಂದು ಹೇಳಿದ್ದರು. ಅವರು ಜಿಲ್ಲೆಯ ಯುವಕರಿಗೆ ಉದ್ಯೋಗ ನೀಡಿ ಆರ್ಥಿಕವಾಗಿ ಸಬಲರಾಗುವಂತೆ ಮಾಡಬಹುದಿತ್ತು. ಅದನ್ನು ಮಾಡಲಿಲ್ಲ. ಮೈತ್ರಿ ಸರ್ಕಾರ ಇದ್ದಾಗ ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣಕ್ಕೆ ಅಡಿಗಲ್ಲು ಹಾಕಿದ್ದೆ. ಬಿಜೆಪಿಯವರು ಅಧಿಕಾರದ ರುಚಿ‌ ನೋಡಿದ್ದು ಮೈತ್ರಿ ಸರ್ಕಾರದಿಂದ ಎಂದರು.

ಶಿವಮೊಗ್ಗದ ಅಭಿವೃದ್ದಿಯಲ್ಲಿ ನನ್ನ ಪಾಲಿದೆ. ಕಮಿಷನ್ ಹಣ ಎಣಿಸಲು ಕೈ ನೋವು ಬರುತ್ತದೆ ಎಂದು‌ ನೋಟು ಮಿಷನ್ ತಂದರು ಎಂದು ಈಶ್ವರಪ್ಪನವರಿಗೆ ಟಾಂಗ್ ನೀಡಿದರು. ಜಿಲ್ಲೆಯಲ್ಲಿ ಅಮಾಯಕ ಮಕ್ಕಳ ರಕ್ತದೋಕುಳಿ ಆಡಿದ್ದೀರಿ. ಗಣೇಶನ ಹಬ್ಬ ಬಂದ್ರೆ ಹೆಣ ಬೀಳಬೇಕಾಗಿದೆ. ಇದಕ್ಕೆಲ್ಲ ಬ್ರೇಕ್ ಹಾಕಬೇಕು. ಎಂಪಿಎಂ ಮುಳುಗಿಸಿ, ವಿಐಎಎಸ್ ಮುಚ್ಚಲು ಹೊರಟಿದ್ದೀರಿ. ಇದನ್ನು ತಡೆಯಲು ಒಮ್ಮೆ ಜೆಡಿಎಸ್​ಗೆ ಮತ ನೀಡಿ ಎಂದು ಕುಮಾರಸ್ವಾಮಿ ವಿನಂತಿಸಿದರು.

ನಾನು ಕಾಂಗ್ರೆಸ್ ಶಾಸಕರಿಗೆ ಅನುದಾನ ನೀಡಿ ಸಾಲ ಮನ್ನಾ ಮಾಡಿದೆ. ಅವರ ರೀತಿ ರಸ್ತೆ, ನೀರಾವರಿ ಅಂತ ಮಾಡಿದ್ರೆ, 10 ಸಾವಿರ ಕೋಟಿ ರೂ ಹಣ‌ ಮಾಡಬಹುದಾಗಿತ್ತು. ಕಾಂಗ್ರೆಸ್‌ನವರು ಕೈಯಲ್ಲಿ ದೋಚಿದರು. ಬಿಜೆಪಿಯವರು ಜೆಸಿಬಿಯಲ್ಲಿ ದೋಚಿದ್ದಾರೆ. ನಾವು ದೇಶ, ರಾಜ್ಯ ಆಳಿದವರು. ನನ್ನ ಆಸ್ತಿ ಅಂದ್ರೆ ರಾಜ್ಯದ ಆರೂವರೆ ಕೋಟಿ ಜನ. ನಾನು ಉದ್ದುದ್ದ ಕಾಲೇಜು ಕಟ್ಟಿಲ್ಲ. ಮೈಸೂರಿನ 45 ಎಕರೆ ತೆಂಗಿನ ತೋಟ ಬಿಟ್ಟರೆ ಬೇರೆ ಆಸ್ತಿ ಇಲ್ಲ. ಭದ್ರಾವತಿಯ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದರೆ ವಿಐಎಸ್ಎಲ್ ಉಳಿಸಿಕೊಡುತ್ತೇನೆ ಎಂದು ಭರವಸೆ ಕೊಟ್ಟರು.

ಇದಕ್ಕೂ ಮುನ್ನ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್, ಶಿವಮೊಗ್ಗದಲ್ಲಿ ಜನ ಬದಲಾವಣೆ ಬಯಸುತ್ತಿದ್ದಾರೆ. 33 ವರ್ಷಗಳಿಂದ ಏಕತಾನತೆಯ ರಾಜಕಾರಣ ನಡೆದಿದೆ. ಕಲೆ, ಸಾಹಿತ್ಯ, ಸಂಸ್ಕೃತಿ ಹಾಗು ಶಾಂತಿಗೆ ಹೆಸರಾಗಿದ್ದ ಜಿಲ್ಲೆ ಇದೆಲ್ಲವನ್ನೂ ಕಳೆದು‌ಕೊಂಡಿದೆ. ದೇವೇಗೌಡರು ಸಿಎಂ ಆಗಿದ್ದಾಗ ನಾನು ಶಾಸಕನಾಗಿದ್ದೆ. ನಾನು ಕೂಲಿ‌ ಕಾರ್ಮಿಕರ ಪರ ಹೋರಾಟ ಮಾಡಿದವನು. 53 ಕಾರ್ಮಿಕ ಸಂಘಟನೆಗಳ ಹೋರಾಟ ನಡೆಸಿಕೊಂಡು ಬಂದಿದ್ದೇನೆ. ತುರ್ತು ಪರಿಸ್ಥಿತಿಯಲ್ಲಿ ವಿದ್ಯಾರ್ಥಿ ನಾಯಕನಾಗಿದ್ದಾಗ ಬಂಧನಕ್ಕೆ ಒಳಗಾಗಿದ್ದೇನೆ. ರಾಜಕೀಯ ಶುರು ಮಾಡಿದ್ದೇ ಜನತಾದಳದಿಂದ ಎಂದರು.

ಇದನ್ನೂ ಓದಿ:ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಾದಾಯಿ ಯೋಜನೆ ಅನುಷ್ಠಾನ: ಪ್ರಿಯಾಂಕಾ ಗಾಂಧಿ ಭರವಸೆ

ABOUT THE AUTHOR

...view details