ಕರ್ನಾಟಕ

karnataka

ETV Bharat / state

ಶಿವಮೊಗ್ಗ: ದೀಪಾವಳಿ ಪಟಾಕಿ ಮಾರಾಟ ಜೋರು.. ಮುಂಜಾಗ್ರತಾ ಕ್ರಮಗಳೊಂದಿಗೆ ಪಟಾಕಿ ಮಾರಾಟಕ್ಕೆ ಅವಕಾಶ - ಈಟಿವಿ ಭಾರತ್ ಕನ್ನಡ ಸುದ್ದಿ

ಶಿವಮೊಗ್ಗದಲ್ಲಿ ಜಿಲ್ಲಾಡಳಿತದ ಆದೇಶದ ಮೇರೆಗೆ ಪಟಾಕಿ ಮಾರಾಟಗಾರರು ಫ್ರೀಡಂ ಪಾರ್ಕ್​ನಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ.

ಶಿವಮೊಗ್ಗ
ಶಿವಮೊಗ್ಗ

By ETV Bharat Karnataka Team

Published : Nov 13, 2023, 9:27 PM IST

ಜಿಲ್ಲಾಧಿಕಾರಿ ಸೆಲ್ವಮಣಿ

ಶಿವಮೊಗ್ಗ :ಪ್ರತಿ ವರ್ಷ ಪಟಾಕಿ ಮಾರಾಟವನ್ನು ನಗರದ ಸೈನ್ಸ್ ಮೈದಾನ ಹಾಗೂ ನೆಹರು ಕ್ರೀಡಾಂಗಣದಲ್ಲಿ ನಡೆಸಲು ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿತ್ತು.‌ ಆದರೆ, ಈ ಬಾರಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ನಗರದ ಹಳೆ ಜೈಲು ಆವರಣದ ಫ್ರೀಡಂ ಪಾರ್ಕ್​ನಲ್ಲಿ ಮಾರಾಟ ಮಾಡಲು ಸೂಚಿಸಿದೆ. ಅದರಂತೆ ಪಟಾಕಿ ಮಾರಾಟಗಾರರು ಸಹ ಜಿಲ್ಲಾಡಳಿತದ ಆದೇಶದ ಮೇರೆಗೆ ಫ್ರೀಡಂ ಪಾರ್ಕ್​ನಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ.

ಪ್ರತಿವರ್ಷ ಜಿಲ್ಲಾಡಳಿತ ನಗರದ ಎರಡು ಕಡೆ ಪಟಾಕಿ ಮಾರಾಟಕ್ಕೆ ಅವಕಾಶ ಮಾಡಿಕೊಡುತ್ತಿತ್ತು. ಆದರೆ ಬೆಂಗಳೂರಿನ ಅತ್ತಿಬೆಲೆಯ ಪಟಾಕಿ ಗೋದಾಮಿನಲ್ಲಿ ನಡೆದ ಅವಘಡದಿಂದ ಎಚ್ಚೆತ್ತು ನಗರದ ಒಂದೇ ಕಡೆ ಪಟಾಕಿ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ. ಕಳೆದ ವರ್ಷ ಗಾಂಧಿ ಬಜಾರ್, ಸೈನ್ಸ್ ಮೈದಾನ, ನೆಹರು ಕ್ರೀಡಾಂಗಣ ಹಾಗೂ ಮಲ್ಲಿಗೇನಹಳ್ಳಿಯಲ್ಲಿ ಪಟಾಕಿ ಮಾರಾಟ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಒಂದೇ ಕಡೆ ಪಟಾಕಿ ಮಾರಾಟ ಮಾಡಲು ಅವಕಾಶ ಮಾಡಿಕೊಡುವ ಮೂಲಕ ಅವಘಡಗಳ ತಡೆಗೆ ಜಿಲ್ಲಾಡಳಿತ ಪ್ಲಾನ್ ಮಾಡಿದೆ.

ಜಿಲ್ಲಾಡಳಿತ ಪಟಾಕಿ ಮಾರಾಟಗಾರರಿಗೆ ತಮ್ಮ ಮಳಿಗೆಗಳ ನಿರ್ಮಾಣಕ್ಕೆ ಸೂಕ್ತ ನಿರ್ದೇಶನ ನೀಡಿದೆ. ಪ್ರತಿ ಮಳಿಗೆಗಳು ಕೇವಲ 10*10 ರಲ್ಲಿ ನಿರ್ಮಿಸಲು ಸೂಚಿಸಿದೆ. ಅಲ್ಲದೇ ಪ್ರತಿ ಮಳಿಗೆ ಮುಂದೆ ನೀರು ಹಾಗೂ ಮರಳು ತುಂಬಿದ ಬಕೆಟ್ ಇಡಲು ಹಾಗೂ ಬೆಂಕಿ ನಿರೋಧಕ ಸಿಲಿಂಡರ್​ಗಳನ್ನು ಇಡಲು ಸೂಚನೆ ನೀಡಿದೆ. ಈ ಮೂಲಕ ಆಕಸ್ಮಿಕ ಬೆಂಕಿ ತಡೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸಿದೆ. ಅದರಂತೆ ಮಳಿಗೆ ನಿರ್ಮಾಣ ಮಾಡಿಕೊಂಡಿರುವ ಎಲ್ಲಾ ವ್ಯಾಪಾರಸ್ಥರು ಸಹ ಫೈರ್ ಸೇಫ್ಟಿಯನ್ನು ಮಾಡಿಕೊಂಡಿದ್ದಾರೆ.

ಪಟಾಕಿ ವ್ಯಾಪಾರ ಜೋರು : ಈ ಬಾರಿ ಒಂದೇ ಕಡೆ ಪಟಾಕಿ ಮಾರಾಟ ಮಾಡುತ್ತಿರುವುದರಿಂದ ಪಟಾಕಿ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಕಳೆದ ಎರಡು ದಿನಗಳಿಂದ‌ ಪಟಾಕಿ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಒಂದೇ ಕಡೆ ಪಟಾಕಿ ಮಳಿಗೆಗಳು ಇರುವುದರಿಂದ ನಗರ ಸೇರಿದಂತೆ‌ ಸುತ್ತಮುತ್ತಲಿನ ಗ್ರಾಮಸ್ಥರು ಸಹ‌ ಇಲ್ಲೆ ಬಂದು ಪಟಾಕಿ ಕೊಂಡು ಕೊಂಡು ಹೋಗುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಪಟಾಕಿ ಮಾರಾಟ ಜೋರಾಗಿದೆ.

ಹಸಿರು‌ ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ :ಜಿಲ್ಲಾಡಳಿತ ಪಟಾಕಿ ಮಾರಾಟಕ್ಕೆ ಹಲವು ಷರತ್ತುಗಳನ್ನು ವಿಧಿಸಿದ್ದು ಅದರಲ್ಲಿ ಪ್ರಮುಖವಾಗಿ ಹಸಿರು ಪಟಾಕಿ ಮಾರಾಟ ಮಾಡುವುದರ ಕುರಿತು ತಿಳಿಸಿದೆ. ಮಾರಾಟಗಾರರು ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಸೂಚಿಸಿದೆ. ಅದರಂತೆ ಮಾರಾಟಗಾರರು ಹಸಿರು ಪಟಾಕಿಗಳನ್ನೆ ಮಾರಾಟ ಮಾಡುತ್ತಿದ್ದಾರೆ. ಪಟಾಕಿಯ ಗುರುತು ಹಾಗೂ ಪಕ್ಕದಲ್ಲಿ ಸ್ಕ್ಯಾನ್ ಇರುವ ಚಿತ್ರ ಇದ್ರೆ ಅದು ಹಸಿರು ಪಟಾಕಿ ಎಂದು ಕರೆಯುತ್ತಾರೆ. ಹಸಿರು ಪಟಾಕಿಯಲ್ಲಿ ಬೇರಿಯಂ ಸಲ್ಫೇಟ್ ಸೇರಿದಂತೆ ಕೆಲವೊಂದು ಅಪಾಯಕಾರಿ ಸಲ್ಪೇಟ್​ಗಳನ್ನು‌ ಒಳಗೊಂಡಿರುವ ಪಟಾಕಿಗಳನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ಈ ರೀತಿಯ ಪಟಾಕಿಗಳನ್ನು ಮಾರಾಟ‌ ಮಾಡುವಂತಿಲ್ಲ.

ಪಟಾಕಿ‌ ಮಾರಾಟದ ಅನುಮತಿ ಕುರಿತು ಜಿಲ್ಲಾಧಿಕಾರಿ ಸೆಲ್ವಮಣಿ ಅವರು ಈಟಿವಿ ಭಾರತದೊಂದಿಗೆ ಮಾತನಾಡಿ, ನಗರದಲ್ಲಿ ಹಿಂದೆಲ್ಲಾ ಬೇರೆ ಬೇರೆ ಕಡೆ ಪಟಾಕಿ‌ ಮಾರಾಟ ನಡೆಸಲಾಗುತ್ತಿತ್ತು. ನಗರದ ಸೈನ್ಸ್ ಮೈದಾನ ಹಾಗೂ ನೆಹರು ಮೈದಾನದಲ್ಲಿ ಮಾರಾಟ ಮಾಡುತ್ತಿತ್ತು. ಅಲ್ಲಿಕ್ಕಿಂತ ಫ್ರೀಡಂ ಪಾರ್ಕ್​ನಲ್ಲಿ ಮಾರಾಟಕ್ಕೆ ಸೂಕ್ತವಾಗಿದೆ. ಸೈನ್ಸ್ ಮೈದಾನದಲ್ಲಿ ಕಾಲೇಜು ನಡೆಯುತ್ತಿರುತ್ತದೆ. ಅಲ್ಲದೇ ಬಿ. ಹೆಚ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಇದಕ್ಕೆಲ್ಲಾ ಒದು ಉಪಾಯ ಎಂಬಂತೆ ಫ್ರೀಡಂ ಪಾರ್ಕ್​ನಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಹಸಿರು ಪಟಾಕಿ ಮಾರಾಟಕ್ಕೆ ಸೂಚನೆ: ಜಿಲ್ಲಾಡಳಿತವು ಬೆಂಕಿ ಅವಘಡದ ಮುಂಜಾಗ್ರತಾ ಕ್ರಮ ತೆಗೆದುಕೊಂಡು‌ ಮಳಿಗೆ ತೆರೆಯಲು ಸೂಚಿಸಿದೆ. ಇನ್ನು ಹಸಿರು ಪಟಾಕಿ‌ ಮಾರಾಟಕ್ಕೆ ಸೂಚಿಸಿದೆ. ಆದರೆ, ಕೆಲವರು ಪಟಾಕಿ ಮಾರಾಟವನ್ನು ನಿಷೇಧಿಸಿದೆ ಎಂದು ಭಾವಿಸಿದ್ದಾರೆ. ಜಿಲ್ಲಾಡಳಿತ ಸುಪ್ರೀಂಕೋರ್ಟ್ ನಿರ್ದೇಶನದಂತೆ ಹಸಿರು ಪಟಾಕಿ ಮಾರಾಟಕ್ಕೆ ಸೂಚಿಸಿದೆ. ಬೇರಿಯಂ ಸಲ್ಪೇಟ್​ನಂತಹ ಅಪಾಯಕಾರಿ ಸಲ್ಪೇಟ್​ನಂತಹ ಪಟಾಕಿ ಮಾರಾಟಕ್ಕೆ ನಿಷೇಧ ಹೇರಿದೆ ಎಂದು ತಿಳಿಸಿದ್ದಾರೆ.

ಪಟಾಕಿ ಮಳಿಗೆಯ ಮಾಲೀಕರಾದ ಶಿವಕುಮಾರ್ ಮಾತನಾಡಿ, ಈ ಬಾರಿ ಒಂದೇ ಕಡೆ ಪಟಾಕಿ ಮಳಿಗೆ ಹಾಕಲು ಜಿಲ್ಲಾಡಳಿತ ಸೂಚನೆ ಮೇರೆಗೆ ಫ್ರೀಡಂ ಪಾರ್ಕ್​ನಲ್ಲಿ ಪಟಾಕಿ‌ ಮಳಿಗೆ ಹಾಕಿ‌ಕೊಂಡಿದ್ದೇವೆ. ಜಿಲ್ಲಾಡಳಿತದ ಎಲ್ಲಾ ಕಂಡಿಷನ್​ಗಳಿಗೆ ಒಪ್ಪಿ‌ ನಾವು ಮಾರಾಟ ಮಾಡುತ್ತಿದ್ದೇವೆ. ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ವ್ಯಾಪಾರ ಜೋರಾಗಿ ನಡೆಯುತ್ತಿದೆ ಎಂದು ಹೇಳಿದರು.

ಸಾರ್ವಜನಿಕರಾದ ಲೋಕೇಶ್ ಮಾತನಾಡಿ, ಜಿಲ್ಲಾಡಳಿತ ಒಂದೇ ಕಡೆ ಪಟಾಕಿ ಮಾರಾಟಕ್ಕೆ ಅವಕಾಶ ನೀಡಿದೆ. ಇದರಿಂದ ಅವಘಡ ತಡೆಯಬಹುದಾಗಿದೆ. ಜನ ಸಹ ಖುಷಿಯಿಂದಲೇ ಪಟಾಕಿ‌ ಕೊಂಡು‌ಕೊಳ್ಳುತ್ತಿದ್ದಾರೆ. ವ್ಯಾಪಾರವು ಸಹ ಜೋರಾಗಿ ನಡೆಯುತ್ತಿದೆ. ನಾವು ಪಟಾಕಿ ಕೊಂಡು ಹೋಗುತ್ತಿದ್ದೇವೆ. ಪ್ರತಿ ವರ್ಷ ಕೋಟಿಗಟ್ಟಲೆ ಪಟಾಕಿ ವ್ಯಾಪಾರ ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿದೆ ಎಂದರು.

ಇದನ್ನೂ ಓದಿ :ಸಾಂಸ್ಕೃತಿಕ ನಗರಿಯಲ್ಲಿ ಹಸಿರು ಪಟಾಕಿ ಕೊಳ್ಳಲು ಜನರ ನಿರಾಸಕ್ತಿ: ಸಂಕಷ್ಟದಲ್ಲಿ ಪಟಾಕಿ ವ್ಯಾಪಾರಸ್ಥರು

ABOUT THE AUTHOR

...view details