ಕರ್ನಾಟಕ

karnataka

ಶಿವಮೊಗ್ಗದಲ್ಲಿ ಪ್ರತಿಸ್ಪರ್ಧಿಗಳಿಗೆ ಬಿಜೆಪಿ ಬಲೆ; ಧನಂಜಯ್ ಸರ್ಜಿ ಬಿಜೆಪಿ ಸೇರ್ಪಡೆ

By

Published : Dec 4, 2022, 11:11 AM IST

Updated : Dec 4, 2022, 11:19 AM IST

ಭಾರತೀಯ ಜನತಾ ಪಕ್ಷದ ಶಕ್ತಿ ಕೇಂದ್ರ ಎಂದು ಕರೆಯಲ್ಪಡುವ ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ತಂತ್ರಗಾರಿಕೆ ಮುಂದುವರೆದಿದ್ದು, ಬಿಜೆಪಿಯು ಡಾ.ಧನಂಜಯ್ ಸರ್ಜಿ ಅವರನ್ನು ಇಂದು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಿದೆ.

bjp
ಬಿಜೆಪಿ

ಶಿವಮೊಗ್ಗ: ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಾಂತರ ಪರ್ವ ಸಾಮಾನ್ಯ. ಆದರೆ, ಭಾರತೀಯ ಜನತಾ ಪಕ್ಷದ ನಾಯಕರು ತಮ್ಮ ಪ್ರತಿಸ್ಪರ್ಧಿಗಳನ್ನು ಹಾಗೂ ಪಾರ್ಟಿಗೆ ಹಾನಿಯುಂಟು ಮಾಡುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ತಮ್ಮ ಮುಂದಿನ ಹಾದಿ ಸುಗಮಗೊಳಿಸುವ ತಂತ್ರ ಮುಂದುವರೆಸಿದ್ದಾರೆ ಎನ್ನಲಾಗುತ್ತಿದೆ.

ಭಾ.ಜ.ಪ ದ ಶಕ್ತಿ ಕೇಂದ್ರ ಎಂದು ಕರೆಯಲ್ಪಡುವ ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ತಂತ್ರಗಾರಿಕೆ ಮುಂದುವರೆದಿದ್ದು, ಬಿಜೆಪಿಯು ಡಾ.ಧನಂಜಯ್ ಸರ್ಜಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ವೇದಿಕೆ ಸಿದ್ಧಪಡಿಸಿದ್ದು, ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ಸರ್ಜಿ ತಮ್ಮ ಹುಟ್ಟುಹಬ್ಬದಲ್ಲಿ ವ್ಯಕ್ತಪಡಿಸಿದ್ದರು. ಇದಕ್ಕಾಗಿ, ತಮ್ಮದೇ ಆದ ತಂಡ ಕಟ್ಟಿಕೊಂಡು ಕೆಲಸ ಪ್ರಾರಂಭಿಸಿದ್ದರು. ಮೊದಲು ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಸರ್ಜಿಯವರಿಗೆ ಕಾಯುವಂತೆ ಸೂಚನೆ ಸಿಕ್ಕಿತ್ತು. ನಂತರ ಕಾಂಗ್ರೆಸ್​ನಲ್ಲೂ ಸಹ ಟಿಕೆಟ್​ಗಾಗಿ ಪ್ರಯತ್ನ ನಡೆಸಿದ್ದರು. ಅಲ್ಲೂ ಸಹ ಸರಿಯಾದ ಸಿಗ್ನಲ್ ಸಿಗದ ಕಾರಣ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ತಮ್ಮ ಆತ್ಮೀಯ ಬಳಗದಲ್ಲಿ ಹೇಳಿಕೊಂಡಿದ್ದರು.

ಇದನ್ನೂ ಓದಿ:'ಬಿಜೆಪಿಯವರೆಂದರೆ ಓಟರ್ ಐಡಿ ಕಳ್ಳರು': ಶಿವರಾಜ್ ತಂಗಡಗಿ ವಾಗ್ದಾಳಿ

ಆದರೆ, ಚುನಾವಣಾ ತಯಾರಿಯಲ್ಲಿದ್ದ ಡಾ.ಧನಂಜಯ್ ಅವರು ಇದ್ದಕ್ಕಿದ್ದಂತೆ ಇಂದು ಜಿಜೆಪಿ ಸೇರಿಕೊಳ್ಳಲಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.

ಒಂದು ವೇಳೆ ಸರ್ಜಿಯವರು ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದರೆ ಬಿಜೆಪಿ ಮತ ಬುಟ್ಟಿಗೆ ಕೈ ಹಾಕುತ್ತಿದ್ದರು. ಇವರು ಲಿಂಗಾಯತ ಸಮುದಾಯದವರಾಗಿದ್ದು, ಇವರ ಮತಗಳು ಬಿಜೆಪಿ ಪಾಲಿಗೆ ಅತ್ಯಮೂಲ್ಯವಾಗಿದೆ. ಇದರಿಂದ ಸರ್ಜಿ ಪಕ್ಷೇತರವಾಗಿ ಸ್ಪರ್ಧಿಸಿದ್ದರೆ, ಬಿಜೆಪಿಗೆ ತೊಂದರೆಯುಂಟಾಗುತ್ತಿತ್ತು. ಇದನ್ನು ಮನಗಂಡ ಭಾಜಪ ಧನಂಜಯ್ ಸರ್ಜಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ:ಬಿಜೆಪಿ ಪಕ್ಷದಲ್ಲಿ ಇರಬೇಕೋ‌ ಬೇಡವೊ ಯೋಚನೆಯಲ್ಲಿರುವೆ ? ಉಮೇಶ ಕತ್ತಿ ಪುತ್ರ ನಿಖಿಲ್ ಅಚ್ಚರಿ ಹೇಳಿಕೆ

ಸಾಗರದ ಕಾಂಗ್ರೆಸ್ ಮುಖಂಡ ಬಿಜೆಪಿಗೆ:ಲೋಕಸಭೆಯ ಮಾಜಿ ಸಂಸದ ಕೆ.ಜಿ.ಶಿವಪ್ಪನವರ ಪುತ್ರ ಪ್ರಶಾಂತ್ ಅವರು ಸಹ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಇವರು ಸಾಗರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಸಾಗರದಲ್ಲಿ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪನವರು ತಮಗೆ ಅಥವಾ ತಮ್ಮ ಮಗಳು ಡಾ.ರಾಜನಂದಿನಿರವರಿಗೆ ಟಿಕೆಟ್ ನೀಡುವಂತೆ ಪಕ್ಷದ ಮುಖಂಡರಲ್ಲಿ ವಿನಂತಿಸಿಕೊಂಡಿದ್ದಾರೆ. ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸಹ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ. ಇದರಿಂದ ತಮಗೆ ಪಕ್ಷದಲ್ಲಿ ಅವಕಾಶವಿಲ್ಲವೆಂದು ಪ್ರಶಾಂತ್ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ.

ಶಿಕಾರಿಪುರದಲ್ಲಿ ಬಳಿಗಾರ್, ಸೊರಬದಲ್ಲಿ ರಾಜು ತಲ್ಲೂರು ಸೇರ್ಪಡೆ: ಶಿಕಾರಿಪುರದಲ್ಲಿ ಜೆಡಿಎಸ್​ನ ಹೆಚ್ ಟಿ ಬಳಿಗಾರ್​ರನ್ನು ಹಾಗೂ ಸೊರಬದ ತಲೂರಿನ ರಾಜು ಎಂಬುವರನ್ನು ಈಗಾಗಲೇ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಈ ಮೂಲಕ ಬಿಜೆಪಿಯು ಪಕ್ಷ ಬಲವರ್ಧನೆಗೆ ಮುಂದಾಗಿದೆ.

Last Updated : Dec 4, 2022, 11:19 AM IST

ABOUT THE AUTHOR

...view details