ಶಿವಮೊಗ್ಗ: ನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಕೋಮಿನ ಯುವಕರ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ನಗರದ ಪ್ರಮುಖ ವೃತ್ತಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಶಿವಮೊಗ್ಗ ನಗರದ ಎರಡು ಕಡೆಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಹಾಗಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೆಎಸ್ಆರ್ಪಿಯ ಮೂರು ತುಕಡಿಗಳನ್ನು ನಗರದ ಟಿಪ್ಪು ನಗರ ಹಾಗೂ ದ್ರೌಪದಮ್ಮ ವೃತ್ತದಲ್ಲಿ ನಿಯೋಜಿಸಲಾಗಿದೆ.
ನಿನ್ನೆ ಸಂಜೆ ಶಿವಮೊಗ್ಗ ನಗರದಲ್ಲಿ ನಡೆದ ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಟ್ಟು ಆರು ಜನರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಎರಡೂ ಪ್ರಕರಣಗಳ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಕರಣ ಒಂದು:ಶಿವಮೊಗ್ಗದ ಟಿಪ್ಪು ನಗರದಲ್ಲಿ ಬಾಬಾ ಅಲಿಯಾಸ್ ಇರ್ಪಾನ್ ಎಂಬಾತ ಕುಡಿದುಕೊಂಡು ಆಟೋ ಚಲಾಯಿಸಿಕೊಂಡು ಬಂದು ಪಿಗ್ಮಿ ಸಂಗ್ರಹಕ ಸಂದೇಶ ಎಂಬುವರ ಬೈಕ್ಗೆ ಡಿಕ್ಕಿ ಹೊಡೆದಿದ್ದನು. ಈ ವೇಳೆ ಬೈಕ್ನ ಸೈಡ್ ಮಿರರ್ ಒಡೆದು ಹೋಗಿದ್ದು, ಅಲ್ಲಿಂದ ಗೋಪಿಶೆಟ್ಟಿಕೊಪ್ಪದ ಕಡೆ ಹೋಗುತ್ತಿದ್ದ ಆಟೋವನ್ನು ಹಿಂಬಾಲಿಸಿದ ಬೈಕ್ ಸವಾರ, ಆಟೋವನ್ನು ನಿಲ್ಲಿಸಿ, ಸುಮ್ಮನೆ ಡಿಕ್ಕಿ ಹೊಡೆದಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ದನು. ನಂತರ ಅಲ್ಲಿದ್ದ ಇತರರನ್ನು ಕಂಡ ಆಟೋ ಡ್ರೈವರ್ ಬಾಬಾ, 'ನನ್ನನ್ನು ಮುಟ್ಟಿ ನೋಡು' ಎಂದು ಬಟ್ಟೆ ಬಿಚ್ಚಿಕೊಂಡು ಕೂಗಾಡಿದ್ದನು. ಅಲ್ಲದೆ ಸಂದೇಶ ಎಂಬವರ ಕಣ್ಣಿಗೆ ಹಲ್ಲೆ ನಡೆಸಿದ್ದನು. ಗಾಯಗೊಂಡ ಸಂದೇಶ್ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.