ಶಿವಮೊಗ್ಗ: ಶಾಸಕ ಎಂಬ ಹೆಸರು ನಿಮಿತ್ತ ಮಾತ್ರ, ಸೇವಕ ನಿಜವಾದ ಅರ್ಥ. ನಾನು ಜನಸೇವಕನಾಗಿ ಮತದಾರರ ಋಣ ತೀರಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ನೂತನ ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನನ್ನು ಆಯ್ಕೆ ಮಾಡಿದ ಕ್ಷೇತ್ರದ ಮತದಾರರಿಗೆ, ಹಗಲಿರುಳು ಕೆಲಸ ಮಾಡಿದ ಕಾರ್ಯಕರ್ತರಿಗೆ, ನನಗೆ ಮಾರ್ಗದರ್ಶನ ಮಾಡಿದ ಪಕ್ಷದ ಹಿರಿಯರಿಗೆ, ಸಂಘ ಪರಿವಾರದವರಿಗೆ, ರಾಜ್ಯ, ರಾಷ್ಟ್ರದ ನಾಯಕರಿಗೆ ನನ್ನ ಧನ್ಯವಾದಗಳು ಎಂದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಿಲ್ಲ ನಿಜ.
ಬಿಜೆಪಿಗೆ ಸೋಲು ಇದೇ ಮೊದಲಲ್ಲ. ಸೋಲನ್ನು ಸವಾಲಾಗಿ ಸ್ವೀಕರಿಸಿ ನಮ್ಮ ನಾಯಕರು ಈಗ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ. ಕಾರ್ಯಕರ್ತರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಸಲಹೆ ನೀಡಿದರು.
ಈಗಾಗಲೇ ಶಿವಮೊಗ್ಗ ನಗರದ ಅಭಿವೃದ್ಧಿ ಆಗಿದೆ. ಇನ್ನೂ ಆಗಬೇಕಾಗಿದೆ. ಮುಂದಿನ ದಿನಗಳಲ್ಲಿ ನಗರದ ಅಭಿವೃದ್ಧಿಯ ಕಡೆ ಗಮನಹರಿಸುತ್ತೇನೆ. ಹಿಂದುತ್ತ ಮತ್ತು ಅಭಿವೃದ್ಧಿ ಎರಡನ್ನೂ ಒಟ್ಟಿಗೇ ತೆಗೆದುಕೊಂಡು ಹೋಗುವೆ. ಶಿವಮೊಗ್ಗಕ್ಕೆ ಶಾಂತಿ ಬೇಕು ಎಂಬುದು ನಿಜ. ಆದರೆ ಅದು ಎಲ್ಲಾ ಸಮುದಾಯದ ಕಡೆಯಿಂದ ಬರಬೇಕು ಎಂದು ತಿಳಿಸಿದರು.
ನಾವು ಯಾವತ್ತೂ ಶಾಂತಿಯನ್ನು ಕದಡಲು ಹೋಗಲ್ಲ. ಹೋಗುವುದೂ ಇಲ್ಲ. ಒಟ್ಟಾರೆ ಮತದಾರರ ಋಣ ತೀರಿಸುವಂತಹ ಕೆಲಸ ಮಾಡುತ್ತೇನೆ. ಅವರು ನನಗೆ ಮತದಾನ ಮಾಡಿದ್ದಾರೆ. ಆ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.