ಶಿವಮೊಗ್ಗ: ಅಖಿಲ ಭಾರತ ವೀರಶೈವ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಆಯ್ಕೆಯಾದ ಸಿಎಂ ಪುತ್ರಿ ಎಸ್.ವೈ.ಅರುಣಾದೇವಿ ಅವರನ್ನು ಜಿಲ್ಲಾ ಜಂಗಮ ಸಮಾಜ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ವತಿಯಿಂದ ಸನ್ಮಾನಿಸಲಾಗಿದೆ.
ಜಿಲ್ಲಾ ಜಂಗಮ ಮಹಿಳಾ ಸಮಾಜದ ವತಿಯಿಂದ ಫೆಸಿಟ್ ಸಭಾಂಗಣದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮಹಿಳೆಯರು ಮನೆಯಿಂದ ಹೊರಗೆ ಬಂದು ಸಮಾಜಮುಖಿ ಕೆಲಸದಲ್ಲಿ ಭಾಗಿಯಾಗಬೇಕು. ಪ್ರತಿಯೊಬ್ಬರಲ್ಲೂ ಅನೇಕ ಪ್ರತಿಭೆ ಅಡಗಿದೆ. ಮನೆಯನ್ನು ನಿಭಾಯಿಸುವುದರ ಜೊತೆಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರಿಂದ ಅವರಲ್ಲಿ ಆತ್ಮಸ್ಥೆರ್ಯ ಹೆಚ್ಚಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಂಗಮ ಸಮಾಜದ ನಗರಾಧ್ಯಕ್ಷ ಉಮೇಶ್ ಹಿರೇಮಠ್, ನಗರ ಕಾರ್ಯದರ್ಶಿ ಸತೀಶ್ ಹಿರೇಮಠ್, ಜಿಲ್ಲಾ ಜಂಗಮ ಮಹಿಳಾ ಘಟಕದ ಅಧ್ಯಕ್ಷೆ ಸುಜಯ್ ಪ್ರಸಾದ್, ಉಪಾಧ್ಯಕ್ಷೆ ಬಸಮ್ಮ ಚಂದ್ರಯ್ಯ ಇತರರು ಉಪಸ್ಥಿತರಿದ್ದರು.
ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದಿಂದ ಹಮ್ಮಿಕೊಳ್ಳಲಾದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ನನಗೆ ಈ ರಾಜ್ಯಮಟ್ಟದ ಉನ್ನತ ಹುದ್ದೆ ಸಿಕ್ಕಿರುವುದು ತುಂಬಾ ಸಂತೋಷವಾಗಿದೆ. ಅಲ್ಲದೇ ಸಮಾಜದ ಜವಾಬ್ದಾರಿ ಹೆಚ್ಚಿದೆ. ಈ ನಿಟ್ಟಿನಲ್ಲಿ ನಾವುಗಳು ಮಹಿಳೆಯರಿಗೆ ಆತ್ಮವಿಶ್ವಾಸ ಮೂಡಿಸುವ ಹಾಗೂ ದುಡಿಮೆಯ ಮಾರ್ಗ ತೋರಿಸುವ ಮತ್ತು ನಮ್ಮ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಜಿ.ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಸಂಗಮೇಶ್ ಮಠದ್, ಕಾರ್ಯದರ್ಶಿ ಎನ್.ಜಿ.ಮಂಜುನಾಥ್, ಪುಷ್ಪ, ಕೋಕಿಲ, ಚಂದ್ರಶೇಖರ್, ಉಮೇಶ್ ಹಿರೇಮಠ್, ವಾಣಿ ಈಶ್ವರಪ್ಪ, ಹಾಗೂ ಇತರರು ಹಾಜರಿದ್ದರು.