ಶಿವಮೊಗ್ಗ: ಕೇಂದ್ರ ಸರ್ಕಾರ ಪಿಂಚಣಿ ಯೋಜನೆಯಲ್ಲಿ ಕೆಲ ಮಾರ್ಪಾಡು ಮಾಡಿ ಕೇಂದ್ರ ಸರ್ಕಾರಿ ನೌಕರರಿಗೆ ಮಾತ್ರ ಹಳೆ ಪಿಂಚಣಿ ಸ್ಕೀಂ ಅನ್ವಯವಾಗುವಂತೆ ಮಾಡಿದೆ. ಇದನ್ನು ರಾಜ್ಯ ಸರ್ಕಾರಿ ನೌಕರರಿಗೂ ಸಹ ಅನ್ವಯವಾಗುವಂತೆ ಮಾಡಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪ್ರೆಸ್ ಟ್ರಸ್ಟ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಳೆ ಪಿಂಚಣಿ ಯೋಜನೆಯನ್ನು ರದ್ದು ಮಾಡಿ, ಹೊಸ ಪಿಂಚಣಿ ಯೋಜನೆ ಜಾರಿಗೆ ತಂದಿತ್ತು. ಇದರಿಂದ ಸರ್ಕಾರಿ ನೌಕರರಿಗೆ ಸೇವಾ ಭದ್ರತೆ ಇಲ್ಲದಂತಾಗಿತ್ತು. ನೌಕರನ ಪಿಂಚಣಿಯನ್ನು ಷೇರುಗಳ ಮೇಲೆ ಹಾಕಲಾಗಿತ್ತು. ಇದರಿಂದ ಆ ನೌಕರನ ಷೇರು ಅಂದು ಮಾರುಕಟ್ಟೆಯಲ್ಲಿ ಇದ್ದ ಬೆಲೆಯನ್ನೇ ನೌಕರರು ತೆಗೆದುಕೊಳ್ಳಬೇಕಿತ್ತು. ಇದರಿಂದ ಸರ್ಕಾರಿ ನೌಕರರು ನಿವೃತ್ತಿಯಾದಾಗ ಆತಂಕದಲ್ಲಿ ಜೀವನ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕೇಂದ್ರಕ್ಕೆ ಆಯನೂರು ಮಂಜುನಾಥ್ ಆಗ್ರಹ ಇದೀಗ ಕೇಂದ್ರ ಸರ್ಕಾರವು 2006ರ ನಂತರ ಕೇಂದ್ರ ಸರ್ಕಾರಿ ಹುದ್ದೆಗೆ ಸೇರ್ಪಡೆಯಾಗಿ, ನಂತರ ರಾಜೀನಾಮೆ ನೀಡಿ ಬೇರೆ ಹುದ್ದೆಗಳಿಗೆ, ಸ್ವಾಯತ್ತ ಸಂಸ್ಥೆಗಳಿಗೆ ಸೇರ್ಪಡೆಯಾಗಿದ್ದರೆ ಅವರಿಗೆ ಹಳೆಯ ಪಿಂಚಣಿ ಸ್ಕೀಂ ಅನ್ವಯವಾಗುವಂತೆ ಮಾಡಿದೆ. ಇದರಿಂದ ಹಲವರಿಗೆ ಅನುಕೂಲವಾಗುವುದಿಲ್ಲ. ಹಾಗಾಗಿ ಕೇಂದ್ರದ ಈ ಯೋಜನೆಯನ್ನೇ ರಾಜ್ಯ ಸರ್ಕಾರಿ ನೌಕರರಿಗೂ ಜಾರಿಗೆ ತರಲಿ ಎಂದು ಆಯನೂರು ಮಂಜುನಾಥ್ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ 13 ಸಾವಿರಕ್ಕೂ ಹೆಚ್ಚು ಜನ ಅತಿಥಿ ಉಪನ್ಯಾಸಕರಿದ್ದಾರೆ. ಅವರಿಗೆ ಕಳೆದ ನಾಲ್ಕು ತಿಂಗಳಿನಿಂದ ಸಂಬಳವಿಲ್ಲ. ಇದರಿಂದ ಅವರು ಜೀವನ ನಡೆಸುವುದೆ ಕಷ್ಟವಾಗಿದೆ. ಸರ್ಕಾರ ಇವರ ನೆರವಿಗೆ ಧಾವಿಸಬೇಕಿದೆ ಎಂದು ಆಗ್ರಹಿಸಿದರು. ಸರ್ಕಾರ ಅರ್ಹರನ್ನು ಖಾಯಂ ಉಪನ್ಯಾಸಕರನ್ನಾಗಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಸದನದಲ್ಲಿ ಮಾತನಾಡಲು ಯತ್ನಿಸಿದೆ. ಆದರೆ, ಕಳೆದ ಬಾರಿ ಪ್ರವಾಹ, ಈ ಬಾರಿ ಕೋವಿಡ್-19. ಹಾಗಾಗಿ ಸದನ ನಡೆಯದೆ ಇರುವುದರಿಂದ ಇಂತಹ ಸಮಸ್ಯೆಯ ಬಗ್ಗೆ ಪ್ರಸ್ತಾಪ ಮಾಡಲು ಆಗುತ್ತಿಲ್ಲ ಎಂದು ಬೇಸರಿಸಿದರು. ಈ ವೇಳೆ ಮಾಜಿ ಶಾಸಕ ಕುಮಾರಸ್ವಾಮಿ ಹಾಗೂ ಬಿಜೆಪಿ ಮುಖಂಡ ನಾಗರಾಜ್ ಹಾಜರಿದ್ದರು.