ಕರ್ನಾಟಕ

karnataka

By

Published : Aug 20, 2023, 7:12 PM IST

ETV Bharat / state

ಚಳಿಗಾಲದಲ್ಲಿ ಬಿಜೆಪಿ, ಬೇಸಿಗೆಯಲ್ಲಿ ಜೆಡಿಎಸ್, ಈಗ ಮಳೆಗಾಲದಲ್ಲಿ ಕಾಂಗ್ರೆಸ್ ಕದತಟ್ಟುತ್ತಿದ್ದಾರೆ: ಆಯನೂರು ಮಂಜುನಾಥ್ ವಿರುದ್ಧ ಕೆಪಿಸಿಸಿ ಸದಸ್ಯ ಯೋಗೇಶ್ ವಾಗ್ದಾಳಿ

ಆಯನೂರು ಮಂಜುನಾಥ್​ ಅವರು ಕಾಂಗ್ರೆಸ್​ ಪಕ್ಷದ ಬಾಗಿಲು ತಟ್ಟಿರುವುದಕ್ಕೆ ನಮ್ಮ ಧಿಕ್ಕಾರ ಇದೆ ಎಂದು ಕೆಪಿಸಿಸಿ ಸದಸ್ಯ ಹೆಚ್​. ಸಿ ಯೋಗೇಶ್​ ತಿಳಿಸಿದ್ದಾರೆ.

ಕೆಪಿಸಿಸಿ ಸದಸ್ಯ ಹೆಚ್ ಸಿ ಯೋಗೇಶ್
ಕೆಪಿಸಿಸಿ ಸದಸ್ಯ ಹೆಚ್ ಸಿ ಯೋಗೇಶ್

ಕೆಪಿಸಿಸಿ ಸದಸ್ಯ ಹೆಚ್ ಸಿ ಯೋಗೇಶ್

ಶಿವಮೊಗ್ಗ: ಚಳಿಗಾಲ, ಮಳೆಗಾಲ, ಬೇಸಿಗೆ ಕಾಲಕೊಮ್ಮೆ ಪಕ್ಷ ಬದಲಿಸುವ ಆಯನೂರು ಮಂಜುನಾಥ್ ಅವರನ್ನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ಕೆಪಿಸಿಸಿ ಸದಸ್ಯ ಹೆಚ್. ಸಿ ಯೋಗೇಶ್ ಹೇಳಿದ್ದಾರೆ.

ಇಂದು ಭಾನುವಾರ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಳಿಗಾಲದಲ್ಲಿ ಬಿಜೆಪಿಯಲ್ಲಿದ್ದು, ಬೇಸಿಗೆಗಾಲದಲ್ಲಿ ಕಾಂಗ್ರೆಸ್ ಬಾಗಿಲು ತಟ್ಟಿ, ಕಾಂಗ್ರೆಸ್ ಮುಚ್ಚಿದೆ ಅಂತ ಗೊತ್ತಾದ ಮೇಲೆ ಜೆಡಿಎಸ್ ಸೇರ್ಪಡೆಗೊಂಡವರು, ಈಗ ಮಳೆಗಾಲದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಆಯನೂರು ಮಂಜುನಾಥ್ ಅವರು ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟಿರುವುದಕ್ಕೆ ನಮ್ಮ ಧಿಕ್ಕಾರ ಇದೆ. ಕಾಂಗ್ರೆಸ್ ಮುಖಂಡರ ಬಳಿ ಹೋಗಿ ನಾನು ಕಾಂಗ್ರೆಸ್​ಗೆ ಸೇರುತ್ತೇನೆ ಎನ್ನುತ್ತಿದ್ದಾರೆ. ಇವರು 2023ರ ಚುನಾವಣೆಯಲ್ಲಿ ಕೇವಲ 8863 ಮತ ತೆಗೆದುಕೊಂಡು ಠೇವಣಿಗೂ ಯೋಗ್ಯತೆ ಇಲ್ಲದ ವ್ಯಕ್ತಿ ಕಾಂಗ್ರೆಸ್​ಗೆ ಬರುತ್ತೇನೆ ಅಂದಿದ್ದಾರೆ. ಹಾಗಾಗಿ ನಾನೇ ಕಾಂಗ್ರೆಸ್​ನ ಎಲ್ಲಾ ಮುಖಂಡರಿಗೆ ಪತ್ರ ಬರೆದಿದ್ದೇನೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಾರದು ಎಂದು ಹೇಳಿದರು.

2023ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 5% ಮತ ಮಾತ್ರ ಇವರು ತೆಗೆದುಕೊಂಡಿದ್ದರು. ನಮ್ಮ ನಾಯಕರ ಬಗ್ಗೆ ಏಕವಚನದಲ್ಲಿ ಮಾತನಾಡಿರುವ ವ್ಯಕ್ತಿ, ಈಗ ಕಾಂಗ್ರೆಸ್​ಗೆ ಸೇರುತ್ತೇನೆ ಎನ್ನುತ್ತಿದ್ದಾರೆ. ನಮ್ಮ ನಾಯಕರ ಬಗ್ಗೆ ವೈಯಕ್ತಿಕ ವಿಚಾರವನ್ನು ಸಹ ಮಾತನಾಡಿದ್ದಾರೆ. ಸಿದ್ದರಾಮಯ್ಯನವರ ಬಗ್ಗೆ ಮಾತನಾಡಿ, ಈಗ ಅವರ ಮನೆ ಬಾಗಿಲು ತಟ್ಟುತ್ತಿದ್ದಿರಾ?. ನೀವಿರುವ ಪಕ್ಷದಲ್ಲೇ ನಿಮ್ಮ ತಾಕತ್ತು ತೋರಿಸಿ ಎಂದು ಸವಾಲು ಹಾಕಿದರು.

ಅಧಿಕಾರದ ಆಸೆಗೆ ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ ಹೊರತು, ನಮ್ಮ ಪಕ್ಷದ ಉದ್ದಾರಕ್ಕಲ್ಲ. ಯುವಕರಿಗೆ ನಿಮ್ಮ ಸಂದೇಶ ಏನು? ಪಕ್ಷದಿಂದ ಪಕ್ಷಕ್ಕೆ ಹಾರುವುದಾ?. ನೀವು ಗೆದ್ದಿರುವುದು ಪದವೀಧರ ಕ್ಷೇತ್ರದಿಂದ. ಆ ಯುವಕರಿಗೆ ನಿಮ್ಮ ಸಂದೇಶ ಏನು?. ಮರದಿಂದ ಮರಕ್ಕೆ ಹಾರುವುದು ಹೇಗೆ ಎನ್ನುವುದಾ? ಎಂದು ಪ್ರಶ್ನಿಸಿದರು.

ಈಶ್ವರಪ್ಪನವರ ವಿರುದ್ಧ ಗಲಾಟೆ ಮಾಡಿಲ್ಲ: ಜೆಡಿಎಸ್ ಸೇರ್ಪಡೆ ವೇಳೆ ಅವರ ಜೊತೆಗೆ ಹೋದವರನ್ನ ಬಿಟ್ಟು ಈಗ ಒಬ್ಬರೇ ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ. ಪಾಪ ಅವರನ್ನು ಅಲ್ಲೇ ಬಿಟ್ಟು ಬಂದಿದ್ದಾರೆ. ಇವರು ಹಾಗೂ ಈಶ್ವರಪ್ಪನವರ ನಡುವೆ ಗಲಾಟೆ ಯಾಕೆ ಅಂದ್ರೆ ಗುದ್ದಲಿ ಪೂಜೆಗೆ ಕರೆಯುತ್ತಿಲ್ಲ, ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸುತ್ತಿಲ್ಲ ಅಂತ ಅಷ್ಟೇ ಹೊರತು, ಅಭಿವೃದ್ಧಿ ವಿಚಾರವಾಗಿ ಅಲ್ಲ ಎಂದರು.

ಬಿಜೆಪಿ ಅವರನ್ನು ಹೊರತುಪಡಿಸಿ ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್ ಗೆಲ್ಲಲ್ಲ ಎಂದು ಇವರು ಬಿಜೆಪಿ ಪಕ್ಷದಲ್ಲಿ ಇದ್ದಾಗ ಹೇಳಿದ್ದರು. ಈಗ ಕಾಂಗ್ರೆಸ್​ಗೆ ಬಂದ ತಕ್ಷಣ ನೀವು ಗೇಲ್ತೀರಾ? ಎಂದು ಪ್ರಶ್ನಿಸಿದರು. ಈಗಾಗಲೇ ನಮ್ಮ ಪಕ್ಷದ ಅಭ್ಯರ್ಥಿಗಳು ಕೆಪಿಸಿಸಿಗೆ ಪದವೀಧರರ ಕ್ಷೇತ್ರಕ್ಕೆ ಅಭ್ಯರ್ಥಿ ಬಯಸಿ ಅರ್ಜಿ ಹಾಕಿದ್ದಾರೆ. ಹಾಗಾಗಿ ಪಕ್ಷಕ್ಕಾಗಿ ದುಡಿದವರನ್ನ ಕಡೆಗಣಿಸಬಾರದು ಎಂದರು.

ಪಕ್ಷದಲ್ಲಿ ದುಡಿದವರಿಗೆ ಅವಕಾಶ ನೀಡಬೇಕು:ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆಗೆ ನಮ್ಮೆಲ್ಲರ ವಿರೋಧ ಇದೆ. ಆಯನೂರು ಮಂಜುನಾಥ್ ಸೇರಿಸಿಕೊಳ್ಳುವ ಮುನ್ನ ನಮ್ಮ ನಾಯಕರು ಯೋಚನೆ ಮಾಡಲಿ. ಇವರ ಸೇರ್ಪಡೆಯಿಂದ ಲೋಕಸಭಾ ಚುನಾವಣೆಯಲ್ಲಿ ನಮಗೇನು ಪ್ರಯೋಜನ ಆಗಲ್ಲ. ನಮ್ಮ ನಾಯಕರ ಬಗ್ಗೆ ಏಕವಚನದಲ್ಲೇ ಮಾತನಾಡಿರುವ ವಿಡಿಯೋ ಕ್ಲಿಪ್​​ಗಳನ್ನು ನಮ್ಮ ಹೈಕಮಾಂಡ್​​ಗೆ ಕಳಿಸಿಕೊಡಲಾಗಿದೆ. ಪಕ್ಷದಲ್ಲಿ ದುಡಿದವರಿಗೆ ಅವಕಾಶ ನೀಡಬೇಕು ಎಂದು ತಿಳಿಸಿದರು.

ಇದನ್ನೂ ಓದಿ:ಬಿಜೆಪಿಗೆ ಗುಡ್ ​ಬೈ ಹೇಳಿ ಜೆಡಿಎಸ್​ ಸೇರ್ಪಡೆಯಾದ ಆಯನೂರು ಮಂಜುನಾಥ್

ABOUT THE AUTHOR

...view details