ಶಿವಮೊಗ್ಗ:ಬಿಜೆಪಿಯವರು ವಿಪಕ್ಷ ನಾಯಕನನ್ನು ಆಯ್ಕೆ ಮಾಡುವ ತನಕ ಕುಮಾರಸ್ವಾಮಿಯವರೇ ವಿಪಕ್ಷ ನಾಯಕರಾಗಲಿ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುವಾಗ ಒಂದು ಹೊಸ ಪರಂಪರೆಯನ್ನೇ ಸೃಷ್ಟಿಸಿದ್ದಾರೆ. ಅದೇನೆಂದರೆ ಹಳೆಯ ಸರ್ಕಾರವನ್ನು ಟೀಕಿಸುವುದಾಗಿದೆ. ಈ ಟೀಕೆಗೆ ಬಿಜೆಪಿ ಉತ್ತರ ಕೊಡಬೇಕಾದ ಅವಶ್ಯಕತೆ ಇದೆ. ಆದರೆ ಅವರಿನ್ನೂ ವಿಪಕ್ಷ ನಾಯಕನನ್ನೇ ಆಯ್ಕೆ ಮಾಡಿಲ್ಲ ಎಂದರು.
ಬಿಜೆಪಿಯವರು ಕೊನೆ ಪಕ್ಷ ವಿಪಕ್ಷ ನಾಯಕನನ್ನು ಆಯ್ಕೆ ಮಾಡುವ ತನಕವಾದರೂ ಕುಮಾರಸ್ವಾಮಿಯವರೇ ನಮ್ಮ ಪಕ್ಷದ ಪರವಾಗಿ ನಾಯಕರಾಗಲಿ ಎನ್ನಬೇಕು ಎಂದು ಲೇವಡಿ ಮಾಡಿದರು. ಹೊಸ ಸರ್ಕಾರ ಬಂದಿದೆ. ಬಜೆಟ್ ಕೂಡ ಮಂಡನೆಯಾಗಿದೆ. ಗ್ಯಾರಂಟಿಗಳಿಗೆ ಅನುಕೂಲವಾಗುವಂತಹ ಬಜೆಟ್ ಮಂಡನೆಯಾಗಿದೆ. ಬಜೆಟ್ಗೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆ ಕೂಡ ನಡೆಯುತ್ತಿದೆ. ಈ ಬಾರಿಯ ಬಜೆಟ್ನಲ್ಲಿ ಆಶಾದಾಯಕ ನಿರಾಶಾದಾಯಕ ಎರಡೂ ಇವೆ ಎಂದು ಹೇಳಿದರು.
ಇನ್ನು ಬಜೆಟ್ನಲ್ಲಿ ಕಾರ್ಮಿಕ ವಲಯಕ್ಕೆ ಒತ್ತುಕೊಟ್ಟಿಲ್ಲ. ಪೌರ ಕಾರ್ಮಿಕರ ಖಾಯಂ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಯುವಕರಿಗಾಗಿ ಯಾವ ಆಶ್ವಾಸನೆಗಳು ಇಲ್ಲ. ಕ್ರೀಡೆಗೆ ಆದ್ಯತೆ ಇಲ್ಲ. ಆಟೋ ಹಾಗೂ ಟ್ಯಾಕ್ಸಿ ಡ್ರೈವರ್ಗಳ ಪರವಾಗಿ ಕಲ್ಯಾಣ ಮಂಡಳಿ ರಚನೆ ಮಾಡುತ್ತೇವೆ. ವಿಮೆ ನೀಡುತ್ತೇವೆ ಎಂದಿದ್ದರು. ಅದಕ್ಕೂ ಬಜೆಟ್ನಲ್ಲಿ ಜಾಗವಿಲ್ಲ. ಸರ್ಕಾರಿ ಹಳೆ ಪಿಂಚಣಿ ಜಾರಿಗೆ ಸಮಿತಿ ರಚಿಸುತ್ತೇವೆ ಎಂದಷ್ಟೇ ಹೇಳಿದ್ದಾರೆ. ಆ ಬಗ್ಗೆಯೂ ಪ್ರಸ್ತಾಪವಿಲ್ಲ. ನೌಕರರ ಏಳನೇ ವೇತನ ಜಾರಿಗೆ ಕ್ರಮ ಕೈಗೊಂಡಿಲ್ಲ. ಹೀಗೆ ಹಲವು ಹೊಣೆಗಾರಿಕೆಗಳು ಸರ್ಕಾರ ಮೇಲಿವೆ. ಸರ್ಕಾರ ಏನೋ ಟೇಕಾಫ್ ಆಗಿದೆ. ಆದರೆ ಅದರ ಹಾರಟ ಮಾತ್ರ ನಿಲ್ಲಬಾರದು ಎಂದರು.