ಶಿವಮೊಗ್ಗ : ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿರುವುದರಿಂದ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ತೀರ್ಥಹಳ್ಳಿಯಲ್ಲಿಂದು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ಸರ್ವೇ ಮಾಡಿ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಂಡಿದೆ. ದೇಶದಲ್ಲಿ ನಮ್ಮ ಹೈಕಮಾಂಡ್ ನಿರ್ಧಾರಗಳು ಯಶಸ್ವಿಯಾಗಿವೆ. ಅದೇ ರೀತಿ ಕರ್ನಾಟಕದಲ್ಲೂ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.
ಶೆಟ್ಟರ್ ಅವರನ್ನು ಪಕ್ಷ ಮುಖ್ಯಮಂತ್ರಿ ಮಾಡಿತ್ತು. ಲಕ್ಷ್ಮಣ ಸವದಿ ಅವರನ್ನೂ ಉಪ ಮುಖ್ಯಮಂತ್ರಿ ಮಾಡಿತ್ತು. ಅವರಿಬ್ಬರಿಗೆ ಪಕ್ಷ ಎಲ್ಲ ರೀತಿಯ ಸೌಲಭ್ಯ, ಅವಕಾಶ ನೀಡಿದೆ. ಆದರೂ ಅವರು ಪಕ್ಷ ಬಿಟ್ಟು ಹೋಗುವುದರಲ್ಲಿ ಅರ್ಥವಿಲ್ಲ. ಸೈದ್ಧಾಂತಿಕವಾಗಿ ನಾವು ಇದ್ದರೆ ಪಕ್ಷ ಬಿಡುವ ಪ್ರಶ್ನೆ ಬರುವುದಿಲ್ಲ. ಹೀಗಾಗಿ ಖಂಡಿತವಾಗಿಯೂ ಜನರು ಅವರನ್ನು ನಂಬುವುದಿಲ್ಲ ಎಂದು ಆರಗ ಜ್ಞಾನೇಂದ್ರ ಹೇಳಿದರು.
ನಾನು ಬಿಜೆಪಿಯಿಂದ ಸತತ 10ನೇ ಬಾರಿಗೆ ಒಂದೇ ಪಕ್ಷ, ಒಂದೇ ಚಿಹ್ನೆಯಲ್ಲಿ ನಾಮಪತ್ರ ಸಲ್ಲಿಸಿದ್ದೇನೆ. ಕಳೆದ 9 ಚುನಾವಣೆಯಲ್ಲಿ 4 ಬಾರಿ ತೀರ್ಥಹಳ್ಳಿ ಜನರು ನನ್ನನ್ನು ಗೆಲ್ಲಿಸಿದ್ದಾರೆ. ಇಂದು ನನ್ನ ನಾಮಪತ್ರ ಸಲ್ಲಿಕೆಯ ವೇಳೆ ಸುಮಾರು 15 ಸಾವಿರಕ್ಕೂ ಹೆಚ್ಚು ಜನ ಬಂದು ಆಶೀರ್ವಾದ ಮಾಡಿದ್ದಾರೆ ಎಂದರು.
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಸಿರುವ ಅಭಿವೃದ್ದಿಯ ಮೇಲೆ ಮತ ಕೇಳುತ್ತೇನೆ. ಇಷ್ಟು ದೊಡ್ಡ ಪ್ರಮಾಣದ ಅಭಿವೃದ್ದಿ ಒಂದೇ ಅವಧಿಯಲ್ಲಿ ಆಗಿರಲಿಲ್ಲ. ಮೊದಲ ಒಂದು ವರ್ಷ ಸಮ್ಮಿಶ್ರ ಸರ್ಕಾರವಿತ್ತು. ನಂತರದ ಎರಡು ವರ್ಷ ಕೋವಿಡ್ನಿಂದ ಸಮಸ್ಯೆ ಆಗಿತ್ತು. ಉಳಿದೆರಡು ವರ್ಷಗಳಲ್ಲಿ ಕ್ಷೇತ್ರಕ್ಕೆ 3,200 ಕೋಟಿ ರೂಪಾಯಿ ಹಣ ತಂದಿದ್ದೇನೆ. ಯಾವುದೇ ಹಳ್ಳಿಗೆ ಹೋದರೂ ಅಭಿವೃದ್ಧಿ ಕಾರ್ಯ ನಡೆಯುವುದನ್ನು ಗಮನಿಸಬಹುದು ಎಂದು ತಿಳಿಸಿದರು.