ಶಿವಮೊಗ್ಗ:ರೈತ ಮಹಿಳೆಯನ್ನು ಕೊಂದು ತಿಂದಿದ್ದ ನರ ಭಕ್ಷಕ ಚಿರತೆಯು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಇಂದು ಬಿದ್ದಿದೆ. ಅರಣ್ಯ ಇಲಾಖೆಯು ಬಿಕ್ಕೋನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಚಿರತೆ ಚಲನವಲನದ ಬಗ್ಗೆ ಗಮನಿಸಿ ಬೋನ್ ಇಡಲಾಗಿತ್ತು. ಈ ಬೋನ್ಗೆ ಚಿರತೆಯು ನಿನ್ನೆ ರಾತ್ರಿ ಸುಮಾರು 10 ಗಂಟೆಗೆ ಬಿದ್ದಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಚಿರತೆ ಬೋನಿಗೆ ಬಿದ್ದ ಮಾಹಿತಿ ಸಿಗುತ್ತಿದ್ದಂತೆಯೇ ಸುತ್ತಮುತ್ತಲ ಗ್ರಾಮಸ್ಥರು ಚಿರತೆ ನೋಡಲು ಆಗಮಿಸಿದ್ದರು. ನರ ಬಲಿ ಪಡೆದ ಚಿರತೆಯನ್ನು ನೋಡಲು ಜನಸಾಗರವೇ ಸೇರಿತ್ತು. ನಂತರ ಅರಣ್ಯ ಇಲಾಖೆಯವರು ಚಿರತೆಯನ್ನು ತಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ತೆಗೆದುಕೊಂಡು ಹೋದರು. ನಂತರ ಈ ಚಿರತೆಯನ್ನು ಇಲ್ಲಿನ ಚಿರತೆಗಳ ಬಳಿ ಬಿಡದೆ, ಅದನ್ನು ಬೆಂಗಳೂರಿನ ಬನ್ನೇರುಘಟ್ಟಕ್ಕೆ ಶಿಫ್ಟ್ ಮಾಡುವುದಾಗಿ ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಶಿವಮೊಗ್ಗ ತಾಲೂಕು ಬಿಕ್ಕೂನಹಳ್ಳಿ ಗ್ರಾಮದಲ್ಲಿ ಆಗಸ್ಟ್ 8 ರಂದು ಬಿಕ್ಕೂನಹಳ್ಳಿ ಗ್ರಾಮದ ರೈತ ಮಹಿಳೆ ಯಶೋಧಮ್ಮ ಅವರನ್ನು ಚಿರತೆಯು ಕೊಂದು ದೇಹದ ಒಂದು ಭಾಗವನ್ನು ತಿಂದು ಹೋಗಿತ್ತು. ಇದರಿಂದ ಈ ಭಾಗದ ಜನ ಭಯಭೀತರಾಗಿದ್ದರು. ಬಿಕ್ಕೂನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳು ಗುಡ್ಡದ ಪಕ್ಕದಲ್ಲಿಯೇ ಇರುವುದರಿಂದ ತೋಟ, ಹೊಲಗಳಿಗೆ ಹೋಗಲು ಜನರು ಭಯಪಡುವಂತಾಗಿತ್ತು.