ಕರ್ನಾಟಕ

karnataka

ETV Bharat / state

ಬರಡು ಭೂಮಿಯಲ್ಲಿ ದಟ್ಟ ಅರಣ್ಯ: 40 ಲಕ್ಷ ರೂ ಪಿಂಚಣಿ ಹಣ ವಿನಿಯೋಗಿಸಿ ಮಾದರಿಯಾದ ಪುಟ್ಟಸ್ವಾಮಿ!

ಇಂದು ವಿಶ್ವ ಪರಿಸರ ದಿನ. ಇಲ್ಲೊಬ್ಬ ನಿವೃತ್ತಿ ಶಿಕ್ಷಕ ಬರಡು ಭೂಮಿಯನ್ನು ವನವಾಗಿಸಿದ್ದಾರೆ. ಬರೋಬ್ಬರಿ 12ಕ್ಕೂ ಹೆಚ್ಚು ಉದ್ಯಾನಗಳಲ್ಲಿ ವಿವಿಧ ಜಾತಿಯ ಸಾವಿರಾರು ಗಿಡಗಳನ್ನು ನೆಟ್ಟು ಪರಿಸರ ಕಾಳಜಿ ಮೆರೆಯುತ್ತಿದ್ದಾರೆ.

By

Published : Jun 5, 2022, 10:11 AM IST

Updated : Jun 5, 2022, 1:11 PM IST

World Enviranment Day Special
ಪರಿಸರ ಪ್ರೇಮಿ ಭೂವಳ್ಳಿ ಪುಟ್ಟಸ್ವಾಮಿ

ರಾಮನಗರ: ಅವರು ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಸೇವೆಯಿಂದ ನಿವೃತ್ತಿಯಾಗಿದ್ದರೂ ಅವರ ಪರಿಸರ ಕಾಳಜಿ ಮಾತ್ರ ನಿಂತಿಲ್ಲ. ಬಂದ ಪಿಂಚಣಿ ಹಣದಲ್ಲಿ ಪರಿಸರಕ್ಕಾಗಿ ಲಕ್ಷಾಂತರ ರೂ ಹಣ ಖರ್ಚು ಮಾಡಿದ್ದಾರೆ. ಹೌದು, ಇವರ ಹೆಸರು ಭೂಹಳ್ಳಿ ಪುಟ್ಟಸ್ವಾಮಿ. ತಮ್ಮ 9ನೇ ವಯಸ್ಸಿನಿಂದಲೇ ಬೆಳೆಸಿಕೊಂಡಿರುವ ಪರಿಸರ ಪ್ರೇಮದಿಂದ ಪ್ರಾಣಿ-ಪಕ್ಷಿಗಳಿಗೆ ಸುಂದರ ವನ ಬೆಳೆಸಿ ಆಶ್ರಯ ನೀಡಿದ್ದಾರೆ.

ಬರಡು ಭೂಮಿಯಾಗಿದ್ದ ಜಾಗದಲ್ಲಿ ಸುತ್ತಲೂ ಬೆಳೆದಿರುವ ಮರ ಗಿಡಗಳು. ಪ್ರತಿ ನಿತ್ಯ ಇದೇ ಜಾಗದಲ್ಲಿ ಪ್ರಾಣಿ ಪಕ್ಷಿಗಳು ಬಂದು ಆಶ್ರಯ ಪಡೆಯುತ್ತವೆ. ಈ ಸುಂದರ ವನ ನಿರ್ಮಾಣ ಮಾಡಲು ಶ್ರಮಪಟ್ಟಿರುವುದು ಭೂಹಳ್ಳಿ ಪುಟ್ಟಸ್ವಾಮಿ.

ಪರಿಸರ ಕಾಳಜಿ ಮೆರೆಯುತ್ತಿರುವ ನಿವೃತ್ತ ಶಿಕ್ಷಕ ಭೂವಳ್ಳಿ ಪುಟ್ಟಸ್ವಾಮಿ

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕು ಭೂಹಳ್ಳಿ ಗ್ರಾಮದವರಾದ ಪುಟ್ಟಸ್ವಾಮಿ 32 ವರ್ಷಗಳ ಕಾಲ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ನಿವೃತ್ತಿ ನಂತರವೂ ಸೇವೆ ಮುಂದುವರಿಸಿರುವ ಇವರು ಲಕ್ಷಾಂತರ ರೂ. ಖರ್ಚು ಮಾಡಿ ಬರೋಬ್ಬರಿ 12ಕ್ಕೂ ಹೆಚ್ಚು ಉದ್ಯಾನಗಳಲ್ಲಿ ವಿವಿಧ ಜಾತಿಯ ಸಾವಿರಾರು ಗಿಡಗಳನ್ನು ನೆಟ್ಟು ಪರಿಸರ ಕಾಳಜಿ ಮೆರೆಯುತ್ತಿದ್ದಾರೆ. ಚನ್ನಪಟ್ಟಣ ತಾಲೂಕಿನ ಭೂಹಳ್ಳಿಯಲ್ಲಿ ಬರಡು ಭೂಮಿಯಾಗಿದ್ದ 3 ಎಕರೆ ಪ್ರದೇಶದಲ್ಲಿ ಇವರು 'ಕವಿವನ' ನಿರ್ಮಿಸಿದ್ದಾರೆ. ನೂರಾರು ಬಗೆಯ ಗಿಡ ಮರಗಳು ಬೆಳೆದು ಬರಡಾಗಿದ್ದ ಪ್ರದೇಶ ಇಂದು ಅರಣ್ಯವಾಗಿದೆ.

ಪಕ್ಷಿ ಸಂಕುಲದ ಉಳಿವಿಗೆ ಪಣ: ಕವಿವನ ಹಲವು ಬಗೆಯ ಪ್ರಾಣಿ ಪಕ್ಷಿಗಳಿಗೆ ಆಶ್ರಯ ನೀಡಿದೆ. ಪಕ್ಷಿಗಳಿಗೆ ಆಹಾರದ ಸಲುವಾಗಿ ಸೀಬೆ, ಸಪೋಟ, ಸೀತಾಫಲ, ನೇರಳೆ ಹೀಗೆ ಹತ್ತಾರು ಹಣ್ಣಿನ ಗಿಡಗಳನ್ನು ನೆಟ್ಟು ಪಕ್ಷಿ ಸಂಕುಲದ ಉಳಿವಿಗೆ ಪಣ ತೊಟ್ಟಿದ್ದಾರೆ. ಇದರ ಜೊತೆಗೆ ಇನ್ನೊಂದು ಆಕರ್ಷಣೆ ಎಂದರೆ, 11 ಅಡಿ ಎತ್ತರದ ಬುದ್ಧೇಶ್ವರ ಪ್ರತಿಮೆಯನ್ನು ಇಟ್ಟಿದ್ದಾರೆ.

ಪರಿಸರ ಕಾಳಜಿ ಮೆರೆಯುತ್ತಿರುವ ನಿವೃತ್ತ ಶಿಕ್ಷಕ

ಹತ್ತಾರು ವನಗಳ ನಿರ್ಮಾತೃ ಪುಟ್ಟಸ್ವಾಮಿ ಅವರ ಸೇವೆ ಕೇವಲ ಒಂದು ವನ ಬೆಳೆಸಲು ಮಾತ್ರ ಸೀಮಿತವಾಗಿಲ್ಲ. ಚನ್ನಪಟ್ಟಣ ನಗರದ ಸಾರ್ವಜನಿಕ ಉದ್ಯಾನಗಳನ್ನು ಹಸಿರುಮಯವಾಗಿಸಲು ಅವಿರತವಾಗಿ ದುಡಿಯುತ್ತಿದ್ದಾರೆ. ಖಾಲಿ ಜಾಗ ಇರುವ ಕಡೆಯೆಲ್ಲ ಸಸಿಗಳನ್ನು ನೆಟ್ಟು, ಪೋಷಿಸುತ್ತಾ ಬಂದಿದ್ದಾರೆ. ರಸ್ತೆ ಬದಿಗಳಲ್ಲಿಯೂ ಗಿಡ-ಮರಗಳನ್ನು ಬೆಳೆಸುತ್ತಾ ಬಂದಿದ್ದಾರೆ.

ಚನ್ನಪಟ್ಟಣ- ಸಾತನೂರು ರಸ್ತೆಯ ಮಹದೇಶ್ವರ ದೇವಾಲಯದ ಆವರಣದಲ್ಲಿ ಪಾಳು ಬಿದ್ದಿದ್ದ 3 ಎಕರೆ ಸರ್ಕಾರಿ ಜಾಗದಲ್ಲಿ ಜೀವೇಶ್ವರ ವನವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿ ರೂಢಿಸಿಕೊಂಡ ಪರಿಸರ ಪ್ರೇಮ ತಮ್ಮ ನಿವೃತ್ತಿ ಅಂಚಿನವರೆಗೂ ಮುಂದುವರೆಸಿಕೊಂಡು ಬಂದಿದ್ದಾರೆ.

40 ಲಕ್ಷಕ್ಕೂ ಹೆಚ್ಚು ಹಣ ಖರ್ಚು:ನಿವೃತ್ತಿ ನಂತರ ಬಹಳಷ್ಟು ಮಂದಿ ಸರ್ಕಾರಿ ನೌಕರರು ತಮ್ಮ ನಿವೃತ್ತಿ ವೇತನವನ್ನ ಮನಸೋ ಇಚ್ಛೆ ದುಂದು ವೆಚ್ಚ ಮಾಡುತ್ತಾರೆ. ಆದರೆ ಈ ನಿವೃತ್ತ ಶಿಕ್ಷಕರುಈವರೆಗೆ ಸುಮಾರು 40 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿ ಗಿಡಗಳನ್ನ ಬೆಳೆಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸ್ವಾರ್ಥಕ್ಕಾಗಿ ಪರಿಸರ ನಾಶಮಾಡುತ್ತಿರುವಾಗ ತಮ್ಮ ಸ್ವಂತ ಹಣದಲ್ಲಿ ಸಸಿಗಳನ್ನ ನೆಟ್ಟು ಪರಿಸರ ಪ್ರೇಮವನ್ನು ಮೆರೆಯುತ್ತಿರುವ ಇವರ ಕಾರ್ಯ ಶ್ಲಾಘನೀಯ.

ಕವಿವನ ನಿರ್ಮಿಸಿದ ಭೂವಳ್ಳಿ ಪುಟ್ಟಸ್ವಾಮಿ

ಕಾಡು ಬೆಳೆಸುವುದರಿಂದ ನಮಗಷ್ಟೇ ಅಲ್ಲದೇ ಇಡೀ ಜೀವರಾಶಿಗೆ ಅನುಕೂಲವಿದೆ. ನಾನು ಈಗ ನಿವೃತ್ತಿಯ ಜೀವನವನ್ನು ನಡೆಸುತ್ತಿದ್ದೇನೆ. ನನಗೆ ಬರುವ ನಿವೃತ್ತಿ ವೇತನದಿಂದ ಉದ್ಯಾನಗಳಲ್ಲಿ ಗಿಡಗಳನ್ನು ನೆಟ್ಟು, ಪೋಷಣೆ ಮಾಡುತ್ತಿದ್ದೇನೆ ಎನ್ನುತ್ತಾರೆ ಪರಿಸರ ಪ್ರೇಮಿ ಪುಟ್ಟಸ್ವಾಮಿ.

Last Updated : Jun 5, 2022, 1:11 PM IST

ABOUT THE AUTHOR

...view details