ರಾಮನಗರ: ಶಕ್ತಿಯ ಅನುಗ್ರಹ ಇಲ್ಲದೇ ಇಷ್ಟು ದೊಡ್ಡ ಮಟ್ಟಕ್ಕೆ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಈ ಕ್ಷೇತ್ರದ ಬಗ್ಗೆ ಕೆಲವು ತಿಂಗಳ ಹಿಂದೆ ಮಾಹಿತಿ ಕೊಟ್ಟಿದ್ರು. ಕ್ಷೇತ್ರದ ಮಹಿಮೆಯಿಂದಲೇ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪ್ರಚಾರ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು. ಶ್ರೀ ಕ್ಷೇತ್ರದ ಚಾಮುಂಡೇಶ್ವರಿ ತಾಯಿಗೆ ಶಕ್ತಿ ಇರುವುದರಿಂದಲೇ ಜನಸಾಗರ ಸೇರಿದೆ. ಹೀಗಾಗಿ ಪವಿತ್ರವಾದ ಈ ದಿನದಂದು ನಾನು ಭೇಟಿ ಕೊಟ್ಟಿದ್ದೇನೆ. ತಾಯಿಯ ಅನುಗ್ರಹ ರಾಜ್ಯದ ಜನರ ಮೇಲಿರಲಿ. ಎಲ್ಲಾ ದುಃಖಗಳನ್ನು ತಾಯಿ ನಿವಾರಣೆ ಮಾಡಲಿ ಎಂದರು.
ಹಾಗೆಯೇ ಇದೇ ತಿಂಗಳ 30 ರಂದು ದೆಹಲಿಗೆ ಹೋಗಲಿದ್ದೇನೆ. ಇಡಿ ಮುಂದೆ ವಿಚಾರಣೆಗೆ ಹಾಜರಾಗಲಿದ್ದೇನೆ. ಕೆಲವರು ಸಾಕಷ್ಟು ಆಸೆ ಪಡ್ತಾ ಇದ್ದಾರೆ. ಬಹಳ ಜನರಿಗೆ ಆಸೆಯಿದೆ, ಸ್ವ-ಪಕ್ಷದವರೋ ವಿರೋಧ ಪಕ್ಷದವರೋ ಗೊತ್ತಿಲ್ಲ. ಮತ್ತೆ ನನಗೆ ಇಡಿಯಲ್ಲಿ ಸಿಲುಕಿಸಲು ತಯಾರಿ ನಡೆಯುತ್ತಿದೆ. ಆದರೆ ಚಾಮುಂಡಿ ತಾಯಿ ಇದ್ದಾಳೆ. ನನ್ನನ್ನು ರಕ್ಷಣೆ ಮಾಡ್ತಾಳೆ. ನಾನೇನಾದ್ರೂ ತಪ್ಪು ಮಾಡಿದ್ರೆ, ತೊಂದರೆ ಮಾಡ್ತಾರೆ. ನಾನೇನು ತಪ್ಪು ಮಾಡಿಲ್ಲ, ಅಂದ್ರೆ ದೇವಿನೇ ಎಲ್ಲಾ ನೋಡಿಕೊಳ್ಳುತ್ತಾಳೆ ಎಂದರು.
ಇದಲ್ಲದೆ ನನಗೆ ಖೆಡ್ಡಾ ತೋಡಲು ಏನು ಬೇಕೊ ಎಲ್ಲಾ ಮಾಡ್ತಾ ಇದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯನ್ನೇ ಬಿಟ್ಟಿಲ್ಲ. ಇನ್ನು ನನ್ನನ್ನು ಬಿಡ್ತಾರಾ? ಎಲ್ಲಾ ನನ್ನ ವೈರಿಗಳು, ತೊಂದರೆ ಕೊಡುವುದನ್ನು ದೂರ ಮಾಡು ಎಂದು ದೇವಿಯಲ್ಲಿ ಬೇಡಿಕೊಂಡಿದ್ದೇನೆ ಎಂದು ತಿಳಿಸಿದರು.
ಸಿಎಂ ಜನೋತ್ಸವ ರದ್ದು:ಈ ವಿಚಾರವಾಗಿ ಮಾತನಾಡಿದ ಡಿ ಕೆ ಶಿವಕುಮಾರ್ ಅವರು, ಸಿಎಂ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರು ಜನೋತ್ಸವ ಮಾಡುವಂತಹ ಅವಶ್ಯಕತೆ ಇರಲಿಲ್ಲ ಎಂದು ಮೊದಲೇ ಹೇಳಿದ್ದೆ. ಕಾರ್ಯಕರ್ತರ ನೋವಿನ ಅರಿವಿದೆ. ನಾನು ಈ ಘಟನೆಯನ್ನು ಖಂಡಿಸುತ್ತೇನೆ. ಯಾರೇ ತಪ್ಪು ಮಾಡಿದ್ರೂ, ಸಿಎಂ ಅವರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಏನೆಲ್ಲಾ ಕಾನೂನುಗಳಿವೆ, ಬಂಧಿಸಿ ಶಿಕ್ಷೆ ಕೊಡಿಸುವ ಕೆಲಸ ಆಗಬೇಕು. ಈ ಮೂಲಕ ಕಾರ್ಯಕರ್ತರಿಗೆ ಧೈರ್ಯ ತುಂಬಬೇಕು. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಇದೇ ವೇಳೆ ಹೇಳಿದರು.