ಕರ್ನಾಟಕ

karnataka

By

Published : Apr 20, 2022, 10:13 AM IST

Updated : Apr 20, 2022, 10:33 AM IST

ETV Bharat / state

ಗ್ರಾಹಕರ ಎಂಟೂವರೆ ಕೆಜಿ ಚಿನ್ನಾಭರಣ‌ ಅಧಿಕ ಹಣಕ್ಕೆ ಅಡಮಾನ ಇಟ್ಟ ಭೂಪ: ಆರೋಪಿ ಅರೆಸ್ಟ್​​

ತಮ್ಮ‌ ಅಧಿಕಾರವನ್ನ ದುರುಪಯೋಗ ಪಡಿಸಿಕೊಂಡ ಟಿಎಪಿಸಿಎಂಎಸ್ ಸೊಸೈಟಿಯ ವ್ಯವಸ್ಥಾಪಕ ಗೋವಿಂದಪ್ಪ ಸಂಸ್ಥೆಗೆ ಯಾವುದೇ ಮಾಹಿತಿಯನ್ನು ನೀಡದೆ ಸಂಸ್ಥೆ ಹಾಗೂ ಗ್ರಾಹಕರಿಗೆ ವಂಚಿಸಿದ್ದಾನೆ. ಗ್ರಾಹಕರ ಚಿನ್ನಾಭರಣ ತೆಗೆದುಕೊಂಡು ಹೋಗಿ ವಿವಿಧ ಖಾಸಗಿ ಹಣಕಾಸಿನ ಸಂಸ್ಥೆಗಳಲ್ಲಿ ಅಡವಿಟ್ಟು ಹಣ ಪಡೆದ ಆರೋಪ ಈತನ ಮೇಲಿದೆ.

TAPCMS gold loss case accused arrested in Ramnagar
ಟಿಎಪಿಸಿಎಂಎಸ್ ಚಿನ್ನ ಅಡಮಾನ ಪ್ರಕರಣ

ರಾಮನಗರ:ಕಷ್ಟ ಬಂದಾಗ ಚಿನ್ನಾಭರಣ ಅಡಮಾನ ಇಟ್ಟು ಹಣ ಪಡೆಯುವುದು ಸರ್ವೇ ಸಾಮಾನ್ಯ. ಆದ್ರೆ ಇಲ್ಲೊಬ್ಬ ಭೂಪ ಬೇರೆಯವರು ಅಡಮಾನ ಇಟ್ಟ ಒಡವೆಯನ್ನೇ ಇತರೆ ಖಾಸಗಿ ಫೈನಾನ್ಸ್ ಬ್ಯಾಂಕ್​​ನಲ್ಲಿ ಹೆಚ್ಚು ಹಣಕ್ಕೆ ಅಡಮಾನ ಇಟ್ಟು ಹಣ ಪಡೆದುಕೊಳ್ಳುತ್ತಿದ್ದ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಕನಕಪುರ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕನಕಪುರದ ಟಿಎಪಿಸಿಎಂಎಸ್ ಸೊಸೈಟಿಯ ವ್ಯವಸ್ಥಾಪಕ ಗೋವಿಂದಪ್ಪ ಬಂಧಿತ ಆರೋಪಿ.

ಟಿಎಪಿಸಿಎಂಎಸ್ ಚಿನ್ನ ಅಡಮಾನ ಪ್ರಕರಣ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷ್ ಬಾಬು ಮಾಹಿತಿ ನೀಡುತ್ತಿರುವುದು..

ಏನಿದು ಪ್ರಕರಣ: ಟಿಎಪಿಸಿಎಂಎಸ್ ಖಾಸಗಿ ಸಹಕಾರ ಬ್ಯಾಂಕ್ ಕನಕಪುರ ತಾಲೂಕಿನ ಮರಳವಾಡಿ ಗ್ರಾಮದ ಸರ್ಕಲ್ ಬಳಿಯ ವಸಂತಬಾಯಿರವರ ಬಿಲ್ಡಿಂಗ್​​ನಲ್ಲಿ‌ ಆರ್ಥಿಕ ವ್ಯವಹಾರ ವಿಭಾಗದ ಶಾಖೆಯನ್ನ ಹೊಂದಿದೆ. ಈ ಸದರಿ ಶಾಖೆಗೆ ಗೋವಿಂದಪ್ಪ(ಆರೋಪಿ) ಎಂಬುವವರು ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮರಳವಾಡಿ ಗ್ರಾಮದ ವೆಂಕಟೇಶ್ ಎಂಬುವವರು ಇದೇ ಸಹಕಾರ ಬ್ಯಾಂಕ್​​ನಲ್ಲಿ‌ ಇಟ್ಟಿದ್ದ ಚಿನ್ನಭರಣಕ್ಕೆ ಕಳೆದ ಮಾ.16ರಂದು ಒಡವೆ ಹಣವನ್ನ ಸಂಪೂರ್ಣವಾಗಿ ಕಟ್ಟಿದ್ದರು. ಆದರೆ ಅವರಿಗೆ ಅವರ ಒಡವೆಯನ್ನ ಕೊಟ್ಟಿರಲಿಲ್ಲ. ಅಂದು ವೆಂಕಟೇಶ್ ಇಟ್ಟಿದ್ದ 68 ಗ್ರಾಂ 700 ಮಿಲಿ ಚಿನ್ನವನ್ನ ಕೇಳಿದಾಗ ಕುಂಟು ನೆಪ ಹೇಳಿ ತಪ್ಪಿಸಿಕೊಂಡಿದ್ದರು.

ಈ ಸಂಬಂಧ ಮಾ. 25ರಂದು ಕನಕಪುರದ ಟಿಎಪಿಸಿಎಂಸಿಎಸ್ ಸೊಸೈಟಿ ಕನಕಪುರ ಮುಖ್ಯ ಕಾರ್ಯದರ್ಶಿಯಾದ ನದಿಂ ಎಂಬುವವರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈತನ ವಿರುದ್ಧ ತೀವ್ರ ತನಿಖೆ ನಡೆಸಿದ್ದಾರೆ. ಆಗ ಈತನ ಒಂದೊಂದೆ ಪ್ರಕರಣಗಳು ಬಯಲಾಗುತ್ತಾ ಹೋಗಿವೆ. ಇದಲ್ಲದೇ ಈತ ಸೊಸೈಟಿಯಲ್ಲಿ ಇತರೆ ಸುಮಾರು 267 ಗ್ರಾಹಕರ ಒಡವೆಯನ್ನ ಹಣದಾಸೆಗಾಗಿ ಇತರೆ ಖಾಸಗಿ ಫೈನಾನ್ಸ್​​ನಲ್ಲಿ‌ ಅಡಮಾನ ಇಟ್ಟು ಹೆಚ್ಚಿಗೆ ದುಡ್ಡು ಪಡೆದುಕೊಂಡಿರುವುದು ತನಿಖೆಯಿಂದ ಬಯಲಾಗಿದೆ.

ಜನರು ಸೊಸೈಟಿಯಲ್ಲಿ ಇಟ್ಟ ಒಡವೆಯನ್ನು ಈತ ಕನಕಪುರ ಟೌನಿನ ಮಣಪ್ಪುರಂ, ಮುತ್ತೂಟ್ ಫೈನಾನ್ಸ್, ಮುತ್ತೂಟ್ ಫಿನ್ ಕಾರ್ಫ್, ಐಐಎಫ್ಎಲ್ ಹಾಗೂ ರಾಮದೇವ್ ಬ್ಯಾಂಕರ್ಸ್ ಮತ್ತು ಹಾರೋ‌ಹಳ್ಳಿ ಮುತ್ತೂಟ್​ ಫಿನ್ ಕಾರ್ಫ್, ಸಾತನೂರಿನ ಮುತ್ತೂಟ್ ಫೈನಾನ್ಸ್ ಗಳಲ್ಲಿ ಅಡಮಾನವಿಟ್ಟು ಹಣ ಪಡೆದುಕೊಂಡಿದ್ದಾನೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಈತ ಒಟ್ಟು 8 ಕೆ.ಜಿ 534 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಅಡಮಾನ ಇಟ್ಟು ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾನೆ ಎನ್ನಲಾಗ್ತಿದೆ.

ನಿಯಮದ ಪ್ರಕಾರ ಸಾರ್ವಜನಿಕರು ಅಡಮಾನವಿಟ್ಟ ಆಭರಣಗಳನ್ನು 'ಕನಕಪುರ ಟೌನ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಲಾಕರ್' ನಲ್ಲಿ ಇಡಬೇಕು. ಆದರೆ ತಮ್ಮ‌ ಅಧಿಕಾರವನ್ನ ದುರುಪಯೋಗ ಪಡಿಸಿಕೊಂಡ ಗೋವಿಂದಪ್ಪ ಸಂಸ್ಥೆಗೆ ಯಾವುದೇ ಮಾಹಿತಿಯನ್ನು ನೀಡದೆ ಸಂಸ್ಥೆ ಹಾಗೂ ಗ್ರಾಹಕರಿಗೆ ವಂಚಿಸಿದ್ದಾರೆ. ಚಿನ್ನಾಭರಣ ತೆಗೆದುಕೊಂಡು ಹೋಗಿ ವಿವಿಧ ಖಾಸಗಿ ಹಣಕಾಸಿನ ಸಂಸ್ಥೆಗಳಲ್ಲಿ ಅಡವಿಟ್ಟು ಹಣ ಪಡೆದ ಆರೋಪ ಈತನ ಮೇಲಿದೆ. ಈ ಹಿನ್ನೆಲೆ ಗೋವಿಂದಪ್ಪ ಹಾಗೂ ಇದಕ್ಕೆ ಸಹಕರಿಸಿದವರ ಮೇಲೆ ಕಾನೂನು ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್​​ 380, 403, 406, 409, 420 ಹಾಗೂ 34ರ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಬಂಧಿತ ಆರೋಪಿ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಲು ಹಾಗೂ ರಿಯಲ್ ಎಸ್ಟೇಟ್​​ಗೆ ಹಣ ತೊಡಗಿಸಿ ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಈ ಕೃತ್ಯ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗ್ತಿದೆ. ಸದ್ಯ ಆರೋಪಿ ಅಡಮಾನ ಇಟ್ಟಿದ್ದ ಸಾರ್ವಜನಿಕರ ಒಡವೆಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಉಡುಪಿಯಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಯತ್ನ: ಕಾಮುಕನಿಗೆ ಧರ್ಮದೇಟು

Last Updated : Apr 20, 2022, 10:33 AM IST

ABOUT THE AUTHOR

...view details