ರಾಮನಗರ:ಆಸ್ತಿ ವಿವಾದದಿಂದ ಹೆತ್ತ ತಾಯಿಯನ್ನೇ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಿಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಕಾಟನಪಾಳ್ಯ ಗ್ರಾಮದ ಹನುಮಕ್ಕ (76) ಕೊಲೆಯಾದ ತಾಯಿ. ಈಕೆಯ 2ನೇ ಮಗ ಸಿದ್ದರಾಜು ಹಾಗೂ ಆತನ ಸ್ನೇಹಿತ ಲಕ್ಷ್ಮಣ ಎಂಬಾತನನ್ನ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾವರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಮೊಟಗೊಂಡನಹಳ್ಳಿ ಬಳಿಯ ಕಾಟನಪಾಳ್ಯ ಗ್ರಾಮದಲ್ಲಿ ಕಳೆದ ವಾರ ವೃದ್ಧೆಯೊಬ್ಬಳ ಶವ ಹಳ್ಳದಲ್ಲಿ ಪತ್ತೆಯಾಗಿತ್ತು. ಪೊಲೀಸರು ಮೃತರನ್ನು ಕಾಟನಹಳ್ಳಿ ಗ್ರಾಮದ ಹನುಮಕ್ಕ ಎಂದು ಗುರುತಿಸಿದ್ದರು. ಈ ಸಂಬಂಧ ಆಕೆಯ ಹಿರಿಯ ಮಗ ಲಕ್ಷ್ಮಪ್ಪ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಇಷ್ಟಕ್ಕೂ ಈ ಕೊಲೆ ನಡೆದಿದ್ದು ಆಸ್ತಿಗಾಗಿ ಎಂಬ ಸತ್ಯ ಬಯಲಾಗಿತ್ತು. ಹೆತ್ತವ್ವನನ್ನೇ ಪಾಪಿ ಮಗ ಹೆಣವಾಗಿಸಿದ್ದ.
ಹನುಮಕ್ಕನಿಗೆ ಪಿತ್ರಾರ್ಜಿತವಾಗಿ ಬಂದಿದ್ದ ಆಸ್ತಿಯಲ್ಲಿ ಎರಡನೇ ಮಗ ಸಿದ್ದರಾಜು ಪಾಲು ನೀಡಿರಲಿಲ್ಲ. ತನ್ನ ಆಸ್ತಿಯನ್ನೆಲ್ಲಾ ಹಿರಿಯ ಮಗ ಲಕ್ಷ್ಮಪ್ಪನಿಗೆ ಬರೆದಿದ್ದರು. ಆಸ್ತಿ ಸಿಗಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಕಿರಾತಕ ಮಗ ಸಿದ್ದರಾಜು ತನ್ನ ಸ್ನೇಹಿತನೊಂದಿಗೆ ಸೇರಿ ಹತ್ಯೆಗೈಯ್ದಿದ್ದ. ಸಂಜೆ ವೇಳೆ ಹನುಮಕ್ಕ ಕೆಲಸ ಮುಗಿಸಿಕೊಂಡು ಬರುವಾಗ ಆಕೆಯೊಡನೆ ಜಗಳ ತೆಗೆದು ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಹಳ್ಳದಲ್ಲಿ ಹಾಕಿದ್ದನೆಂದು ಪೊಲೀಸ್ ತನಿಖೆಯಲ್ಲಿ ಸಿದ್ದರಾಜು ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಗಳನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೊಪ್ಪಿಸಿ ಆದೇಶಿಸಿದೆ.