ರಾಮನಗರ: ರೇಷ್ಮೆನಗರಿ ಖ್ಯಾತಿಯ ರಾಮನಗರದ ಶಕ್ತಿ ದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಐತಿಹಾಸಿಕ ಕರಗ ಮಹೋತ್ಸವ ಇಂದು ನಡೆಯಲಿದೆ. ಯಳವಾರ ಪೂಜೆ ಅದ್ಧೂರಿಯಾಗಿ ಮುಗಿದಿದ್ದು, ಕೊಂಡ ಮಹೋತ್ಸವ ಜರುಗಲಿದೆ.
ನಗರದಾದ್ಯಂತ ಬೀದಿಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರದ ಜೊತೆಗೆ ಚಾಮುಂಡೇಶ್ವರಿ ಹಬ್ಬಕ್ಕೆ ನಗರದ ಜನತೆ ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ. ಪ್ರಮುಖ ರಸ್ತೆಗಳಲ್ಲಿರುವ ಕಟ್ಟಡಗಳು ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿವೆ. ನಗರ ಭಾಗದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಗಳ ಜೊತೆಗೆ ತಳಿರು ತೋರಣಗಳು ಗಮನ ಸೆಳೆಯುತ್ತಿವೆ.
ಅದ್ಧೂರಿ ನವ ಮಾತೃಕೆಯರ ಕರಗ ಮಹೋತ್ಸವಕ್ಕೆ ನಗರ ಸಜ್ಜಾಗಿದ್ದು, ಇಂದು ಕರಗಗಳು ಅಗ್ನಿಕೊಂಡ ಪ್ರವೇಶಿಸಲಿವೆ. ಕರಗದ ಪ್ರಯುಕ್ತ ಜಿಲ್ಲಾ ಕ್ರೀಡಾಂಗಣ ಮತ್ತು ಶ್ರೀ ರಾಮ ಚಿತ್ರ ಮಂದಿರದ ಬಳಿ ಸಾಂಸ್ಕೃತಿಕ ಕಾರ್ಯಕ್ರಮಗಳು ಬೃಹತ್ ವೇದಿಕೆಗಳನ್ನು ನಿರ್ಮಿಸಲಾಗಿದೆ.
ದೇವತೆ ಬಹಳಷ್ಟು ಶಕ್ತಿದೇವತೆಯಾಗಿದ್ದು ಇಲ್ಲಿ ಬೇಡಿದ ಎಲ್ಲವನ್ನೂ ದೇವಿ ನೀಡುತ್ತಾಳೆಂಬ ಪ್ರತೀತಿ ಹೆಚ್ಚಾಗಿದ್ದು ವರ್ಷದಿಂದ ವರ್ಷಕ್ಕೆ ಹೆಚ್ಚು ಜನರು ದೇವಿಯ ದರ್ಶನ ಪಡೆಯುತ್ತಿದ್ದಾರೆ. ಈ ಕರಗವು ಮೈಸೂರು ದಸರಾ ನಂತರದ ಸ್ಥಾನ ಗಳಿಸಿದ್ದು ಅತಿ ಹೆಚ್ಚು ಜನತೆ ದೇವಿಯ ಆಶೀರ್ವಾದ ಪಡೆಯುತ್ತಿದ್ದಾರೆ. ಇಲ್ಲಿ ಮಕ್ಕಳಾಗದವರಿಗೆ ಹರಕೆ ಕಟ್ಟಿಕೊಂಡರೆ ಮಕ್ಕಳಾಗುತ್ತವೆ ಅಲ್ಲದೆ ಆರ್ಥಿಕ ಸಂಕಷ್ಠ ಸೇರಿದಂತೆ ಹಲವು ಸಮಸ್ಯೆಗಳು ಇಲ್ಲಿ ಪರಿಹಾರ ಕಾಣುತ್ತಿವೆ. ಅದಕ್ಕಾಗಿ ಹೊರ ರಾಜ್ಯಗಳಿಂದಲೂ ಕೂಡ ಭಕ್ತ ಸಾಗರ ಹರಿದು ಬರುತ್ತಿದೆ ಎನ್ನುತ್ತಾರೆ ಸ್ಥಳೀಯರಾದ ಗೀತಾ ಸಿಂಗ್.
ರಜಪೂತ ವಂಶದವರು ಕರಗಾಧಾರಣೆ ಮಾಡಲಿದ್ದಾರೆ. ದಶಕಗಳ ಕಾಲ ನಗರವನ್ನು ಕಾಪಾಡುವ ಚಾಮುಂಡೇಶ್ವರಿ ಕರಗವು ಪ್ರತಿ ಬೀದಿ ಬೀದಿಗಳಲ್ಲಿ ಸಂಚರಿಸಿ ಎಲ್ಲರಿಗೂ ದರ್ಶನ ನೀಡಿ ಪೂಜೆ ಸ್ವೀಕರಿಸಿ, ನಂತರ ಅಗ್ನಿಕುಂಡ ಪ್ರವೇಶಿಸುವ ಪ್ರತೀತಿ ಅನಾದಿಕಾಲದಿಂದಲೂ ನಡೆದು ಬಂದಿದೆ.
ಅಲ್ಲದೆ ಆಷಾಢ ಮಾಸ ಶುಕ್ಲಪಕ್ಷದಲ್ಲಿ ನಡೆಯುವ ಈ ಜಾತ್ರೆ ಪೂಜೆಯಿಂದ ದೇವತೆಗೆ ಶಕ್ತಿ ಹೆಚ್ಚಾಗಲಿದೆ ಎಂಬ ನಂಬಿಕೆ ಪುರಾಣಗಳಲ್ಲೂ ಉಲ್ಲೇಖವಾಗಿದೆ. ಇಲ್ಲಿಗೆ ಭೇಟಿ ನೀಡಿ ಹರಕೆ ಕಟ್ಟಿಕೊಂಡರೆ ಎಲ್ಲಾ ಕಾರ್ಯಗಳು ಸಾಕಾರಗೊಳ್ಳುತ್ತವೆ. ಹಾಗಾಗಿಯೇ ಲಕ್ಷಾಂತರ ಜನ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ ಅನ್ನೋದು ಅರ್ಚಕ ಆರಾಧ್ಯ ಅವರ ಅಭಿಪ್ರಾಯ.