ಕರ್ನಾಟಕ

karnataka

ಪ್ರತಿ ಗ್ರಾಮ ಪಂಚಾಯಿತಿಗೊಂದು ಪಬ್ಲಿಕ್ ಶಾಲೆ ನಿರ್ಮಾಣ: ಡಿಸಿಎಂ ಡಿ.ಕೆ.ಶಿವಕುಮಾರ್​

By ETV Bharat Karnataka Team

Published : Oct 6, 2023, 8:08 PM IST

ರಾಮನಗರ ಜಿಲ್ಲೆ ಮಾಗಡಿಯ ಕುದೂರಿನಲ್ಲಿ ನೂತನ ಕರ್ನಾಟಕ ಪಬ್ಲಿಕ್ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು ಶಂಕುಸ್ಥಾಪನೆ ನೆರವೇರಿಸಿದರು.

public school construct
ಡಿಸಿಎಂ ಶಿವಕುಮಾರ್ ಕರ್ನಾಟಕ ಪಬ್ಲಿಕ್ ಶಾಲೆಯ ಕಟ್ಟಡ ನಿರ್ಮಾಣದ ಶಂಕು ಸ್ಥಾಪನೆ ನೆರವೇರಿಸಿದರು.

ರಾಮನಗರ:ರಾಜ್ಯದಲ್ಲಿ 2,000 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ನಿರ್ಮಾಣ ಮಾಡುವ ಶಿಕ್ಷಣ ಕ್ರಾಂತಿಗೆ ಮಾಗಡಿಯಿಂದ ಚಾಲನೆ ದೊರೆತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ನಗರ ಪ್ರದೇಶಗಳಿಗೆ ಜನರು ಶಿಕ್ಷಣಕ್ಕಾಗಿ ವಲಸೆ ಹೋಗುವುದು ತಪ್ಪಬೇಕು. ಪ್ರತಿ ಗ್ರಾ.ಪಂ.ಪಂಚಾಯಿತಿಗೆ ಅಂತರರಾಷ್ಟ್ರೀಯ ಗುಣಮಟ್ಟದ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಕಟ್ಟಬೇಕು ಎಂಬುದು ನನ್ನ ಕನಸು. ಆದಷ್ಟು ಬೇಗ ಯೋಜನೆಯನ್ನು ಕಾರ್ಯಗತಗೊಳಿಸುತ್ತೇವೆ ಎಂದು ಅವರು ತಿಳಿಸಿದರು.

ಕುದೂರಿನಲ್ಲಿ ಸುಮಾರು 6 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ಶಾಲೆ ನಿರ್ಮಿಸಲು ಹೊರಟಿರುವ ಟೊಯೊಟೊ ಕಿರ್ಲೋಸ್ಕರ್ ಸಂಸ್ಥೆಗೆ ಅಭಾರಿಯಾಗಿರುತ್ತೇವೆ. ಈ ಸಂಸ್ಥೆಯವರು ಜಿಲ್ಲೆಯ 4 ತಾಲೂಕುಗಳಲ್ಲಿ ಒಂದೊಂದು ಶಾಲೆ ನಿರ್ಮಾಣ ಮಾಡುವುದಾಗಿ ಮಾತು ಕೊಟ್ಟಿದ್ದಾರೆ. ರಾಮನಗರ ಜಿಲ್ಲೆಯಲ್ಲಿರುವ ಎಲ್ಲ ಕೈಗಾರಿಕೆಗಳ ಸಿಎಸ್ಆರ್ ಹಣವನ್ನು ಶಿಕ್ಷಣಕ್ಕೆ ಮಾತ್ರ ಬಳಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸುಮಾರು 36 ಕೋಟಿಯಷ್ಟು ಹಣ ಈಗಾಗಲೇ ಈ ಅನುದಾನದಡಿ ಬಳಕೆಗೆ ಬಂದಿದೆ ಎಂದು ಮಾಹಿತಿ ನೀಡಿದರು.

ಕಣ್ಣು ಚೆನ್ನಾಗಿದ್ದರೆ ನೋಟ ಚೆನ್ನಾಗಿರುತ್ತದೆ. ನಾಲಿಗೆ, ನಡತೆ ಚೆನ್ನಾಗಿದ್ದರೆ ಇಡೀ ಜಗತ್ತೇ ನಮ್ಮನ್ನು ಹಿಂಬಾಲಿಸುತ್ತದೆ. ಇದಕ್ಕೆ ಶಿಕ್ಷಣ ಅತ್ಯಗತ್ಯ. ಸಮಯ ನಿಲ್ಲುವುದಿಲ್ಲ, ಆಡಿದ ಮಾತು ಮತ್ತೆ ಮರಳಿ ಬರುವುದಿಲ್ಲ. ಆದ ಕಾರಣ ವಿದ್ಯೆ ಕಲಿಯುವ ವಯಸ್ಸು ಕಳೆದು ಹೋದರೆ ಮತ್ತೆ ದೊರೆಯುವುದಿಲ್ಲ. ವಿದ್ಯಾರ್ಥಿ ಜೀವನದಲ್ಲಿ ಎಷ್ಟು ಕಲಿಯಲು ಸಾಧ್ಯವೋ ಅಷ್ಟು ಕಲಿಯಬೇಕು. ನಿಮ್ಮ ತಂದೆ- ತಾಯಿ ಕನಸು ಕಂಡಿರುತ್ತಾರೆ, ಆ ಕನಸಿಗೆ ನೀವು ಸಹಕಾರಿಯಾಗಿ ಬೆಳೆಯಬೇಕು If you forget the route, you will not get the Fruit ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶ್ರೀರಂಗ ನೀರಾವರಿ ಯೋಜನೆಗೆ ಮರುಜೀವ:ಜಿಲ್ಲೆಯ ಶ್ರೀರಂಗ ನೀರಾವರಿ ಯೋಜನೆಗೆ ಮರುಜೀವ ನೀಡಲಿದ್ದು, ಕೃಷಿ ಹಾಗೂ ಕುಡಿಯುವ ನೀರಿನ ಕೊರತೆಯನ್ನು ಶೀಘ್ರವೇ ಬಗೆಹರಿಸಲಿದ್ದೇವೆ. ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ಬಾಲಕೃಷ್ಣ ಅವರು ಕ್ಷೇತ್ರದಲ್ಲಿ ಅನೇಕ ಯೋಜನೆಗಳ ಜಾರಿ ಹಾಗೂ ಸಮಸ್ಯೆಗಳಿರುವ ಬಗ್ಗೆ ಗಮನ ಸೆಳೆದಿದ್ದಾರೆ. ಮುಖ್ಯವಾಗಿ, ಬಗರ್​ಹುಕುಂ ಜಮೀನುಗಳ ಬಗ್ಗೆ ಶೀಘ್ರ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದರು.

ಗೃಹಲಕ್ಷ್ಮೀ ತಾಂತ್ರಿಕ ಸಮಸ್ಯೆ ಶೀಘ್ರ ಪರಿಹಾರ: ಶೇ. 88ರಷ್ಟು ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ತಲುಪಿದೆ. ಮಿಕ್ಕ ಅರ್ಜಿದಾರರಿಗೆ ಬ್ಯಾಂಕ್ ಖಾತೆ ಸಮಸ್ಯೆಯಿಂದ ಹಣ ತಲುಪಿಲ್ಲ. ಈ ಸಮಸ್ಯೆಯನ್ನು ಬೇಗ ಬಗೆಹರಿಸಲಾಗುವುದು. ಬೆಲೆ ಏರಿಕೆಯಿಂದ ನಮ್ಮ ಗ್ರಾಮೀಣ ಪ್ರದೇಶದ ಜನರು ತತ್ತರಿಸಿ ಹೋಗಿದ್ದರು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಸ್ವಲ್ಪ ಉಸಿರಾಡುವಂತೆ ಮಾಡಿವೆ ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2,58,000 ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯ ಹಣ ತಲುಪಿಸಿದ್ದೇವೆ. ಗೃಹಲಕ್ಷ್ಮೀ ಯೋಜನೆಯ 2,000 ಹಣವನ್ನು ಮಹಿಳೆಯರು ಗಂಡಂದಿರಿಗೆ ನೀಡಬೇಡಿ. ಉಳಿತಾಯ ಮಾಡಿ, ಮಕ್ಕಳ ಭವಿಷ್ಯಕ್ಕೆ ಬಳಸಿಕೊಳ್ಳಿ ಎಂದು ಸೂಚಿಸಿದರು.

ಇದನ್ನೂಓದಿ:5 ಗ್ಯಾರಂಟಿ ಸೇರಿ ಯಾವುದೇ ಅಭಿವೃದ್ಧಿ ಕಾಮಗಾರಿಗೆ ಹಣದ ಕೊರತೆ ಇಲ್ಲ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details