ರಾಮನಗರ :ಮೇಕೆದಾಟು ಯೋಜನೆಯ ಬಗ್ಗೆ ಕರ್ನಾಟಕ ಬಿಜೆಪಿ ಸ್ಪಷ್ಟವಾಗಿದೆ. ನಾವು ಈ ಯೋಜನೆಯನ್ನು ಮಾಡೇ ಮಾಡ್ತೇವೆ. ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಹೇಳಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಮೇಕೆದಾಟು ಯೋಜನೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದಾಗಿದೆ. ಈ ಯೋಜನೆಯನ್ನು ಮಾಡಿಯೇ ತೀರುತ್ತೇವೆ. ನ್ಯಾಯಾಲಯದ ತೀರ್ಮಾನದಂತೆ ನಮ್ಮ ರಾಜ್ಯಕ್ಕೆ ಸಿಗಬೇಕಾದ ಹಕ್ಕನ್ನು ನಾವು ಕೇಳುತ್ತಿದ್ದೇವೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜಕೀಯದಲ್ಲಿ ಸ್ಥಾನಮಾನಗಳನ್ನು ಕೇಳುವುದು ಸರ್ವೇ ಸಾಮಾನ್ಯ. ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಅಂತಹ ವಿಚಾರಗಳನ್ನು ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ನಡೆಸಬೇಕು. ಬಹಿರಂಗವಾಗಿ ಚರ್ಚೆ ಮಾಡೋದು ಸರಿಯಲ್ಲ ಎಂದರು.
ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ:
ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಕಲ್ಪ ಫೌಂಡೇಶನ್ ಸಹಯೋಗದಲ್ಲಿ ರೈತರ ಉತ್ಪಾದಕ ಕಂಪನಿಗಳ ಸದಸ್ಯರಿಗೆ ಉಚಿತ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಇದಕ್ಕೆ ಸಚಿವರು ಚಾಲನೆ ನೀಡಿದರು.
ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವರು ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಬೇಕು ಎನ್ನುವುದು ಸರ್ಕಾರದ ಉದ್ದೇಶ. ಅದಕ್ಕಾಗಿ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಅನೇಕ ಸುಧಾರಣಾ ಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ. ನಗರಗಳಲ್ಲಿ ಸೃಷ್ಟಿಯಾಗುವ ಬಿಕ್ಕಟ್ಟುಗಳನ್ನು ತಂತ್ರಜ್ಞಾನದ ಸಹಕಾರದಿಂದ ಬಗೆಹರಿಸಿಕೊಳ್ಳುವಂತೆ ಗ್ರಾಮೀಣ ಭಾಗದಲ್ಲಿಯೂ ಪರಿಹಾರಗಳನ್ನು ನೀಡಬೇಕು. ಆ ದಿಕ್ಕಿನಲ್ಲಿ ಕೃಷಿ ಕಲ್ಪ ಕೆಲಸ ಮಾಡುತ್ತಿದೆ ಎಂದು ಸಚಿವರು ಹೇಳಿದರು.
ರೈತರ ಉತ್ಪಾದಕರ ಸಂಸ್ಥೆ ಸಂಸ್ಕರಣಾ ಸ್ಥಳಕ್ಕೆ ಭೇಟಿ:
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮೈಲನಾಯಕನ ಹೊಸಹಳ್ಳಿಯಲ್ಲಿರುವ ರೈತರ ಉತ್ಪಾದಕರ ಸಂಸ್ಥೆ ಸಂಸ್ಕರಣಾ ಸ್ಥಳಕ್ಕೆ ಸಚಿವರು ಭೇಟಿ ನೀಡಿದರು.
ರೈತರ ಉತ್ಪಾದಕರ ಸಂಸ್ಥೆ ಸಂಸ್ಕರಣಾ ಸ್ಥಳಕ್ಕೆ ಸಚಿವರು ಭೇಟಿ ರೈತರಿಂದ ಖರೀದಿಸಿ ತೆಂಗಿನ ಕಾಯಿಗಳನ್ನು ಸಂಸ್ಕರಿಸಿ ಅವುಗಳನ್ನು ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಹೆಚ್ಚು ಯಶಸ್ವಿ ಹಾಗೂ ಲಾಭದಾಯಕವಾಗಿದೆ. ಈ ಮೊದಲಿಗಿಂತಲೂ ತೆಂಗಿನಕಾಯಿ ಮಾರಾಟದಿಂದ ರೈತರಿಗೆ ಹೆಚ್ಚು ದರ ಸಿಗುತ್ತಿದೆ. ಆಂಧ್ರಪ್ರದೇಶದ ವೈಜಾಗ್ಗೆ ಇಲ್ಲಿಂದ ವಾರಕ್ಕೊಮ್ಮೆ ಒಂದು ಟ್ರಕ್ ತೆಂಗಿನ ಕಾಯಿ ಸರಬರಾಜು ಮಾಡಲಾಗುತ್ತಿದೆ ಎಂದರು.
ಈ ವೇಳೆ ಕೃಷಿ ಕಲ್ಪ ಫೌಂಡೇಶನ್ ಅಧ್ಯಕ್ಷ ಪ್ರಶಾಂತ ಪ್ರಕಾಶ, ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಕೆ, ಜಿಪಂ ಸಿಇಒ ಇಕ್ರಂ, ಕೃಷಿ ಕಲ್ಪ ಫೌಂಡೇಷನ್ ಸಿಇಒ ಸಿ.ಎಂ.ಪಾಟೀಲ್ , ಅರ್ಕಾವತಿ ಎಫ್ಪಿಒ ಸಿಇಒ ವಿನುತಾ ಮತ್ತಿತರರಿದ್ದರು.