ಕರ್ನಾಟಕ

karnataka

By

Published : Mar 18, 2021, 9:09 PM IST

ETV Bharat / state

ಮಮತೆಯ ಮಡಿಲು ಚನ್ನಪಟ್ಟಣದ ಈ 'ಮಾತೃ ಭೂಮಿ'‌ ಸೇವಾಶ್ರಮ

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಚಿಕ್ಕೇನಹಳ್ಳಿ‌ ಗ್ರಾಮದ ನಿವಾಸಿ ಮಹೇಶ್​ ಶಿಕ್ಷಣದಿಂದ ವಂಚಿತವಾಗಿರುವ ಬಡ ಮಕ್ಕಳನ್ನ ಗುರುತಿಸಿ ಅಂತಹ ಮಕ್ಕಳಿಗೆ ಉಚಿತವಾಗಿ ವಸತಿ ಸಹಿತ ಶಿಕ್ಷಣ ನೀಡುತ್ತಾ ಬಂದಿದ್ದಾರೆ. 2014ರಲ್ಲಿ ಚನ್ನಪಟ್ಟಣದ ಭಾರತಿ ನಗರದಲ್ಲಿ ಬಾಡಿಗೆ ಕಟ್ಟಡ ಪಡೆದುಕೊಂಡು ಮಾತೃ ಭೂಮಿ‌ ಸೇವಾ ಫೌಂಡೇಶನ್ ಹೆಸರಿನಡಿಯಲ್ಲಿ ಸೇವಾ ಕೈಂಕರ್ಯ ಮಾಡಿಕೊಂಡು ಬರುತ್ತಿದ್ದಾರೆ.

Mathrubhoomi Madilu childrens orphanage
ಮಮತೆಯ ಮಡಿಲು ಈ 'ಮಾತೃ ಭೂಮಿ'‌ ಸೇವಾಶ್ರಮ..

ರಾಮನಗರ:ಪ್ರತಿಯೊಬ್ಬರಲ್ಲೂ ಸೇವಾ ಮನೋಭಾವ ಇರುತ್ತದೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ನಿಸ್ವಾರ್ಥ ಸೇವೆಯಿಂದ ಅನಾಥ ಮಕ್ಕಳಿಗೆ ಆಶ್ರಯದಾತನಾಗಿದ್ದಾನೆ. "ಮಾತೃ ಭೂಮಿ ಮಡಿಲು" ಮಕ್ಕಳ ಸೇವಾಶ್ರಮ ಸ್ಥಾಪಿಸಿ ಶಿಕ್ಷಣದಿಂದ ವಂಚಿತವಾಗಿರುವ ಅನಾಥ ಬಡ ಮಕ್ಕಳಿಗೆ ಉಚಿತ ವಸತಿ ಸಹಿತ ಶಿಕ್ಷಣ ನೀಡಿ ಮಾದರಿಯಾಗಿದ್ದಾರೆ.

ಮಮತೆಯ ಮಡಿಲು ಈ 'ಮಾತೃ ಭೂಮಿ'‌ ಸೇವಾಶ್ರಮ..

ಇವರ ಹೆಸರು ಮಹೇಶ್. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಚಿಕ್ಕೇನಹಳ್ಳಿ‌ ಗ್ರಾಮದ ನಿವಾಸಿ. ಹಳ್ಳಿಯಿಂದ ನಗರಕ್ಕೆ ಬಂದು ಅನಾಥ ಮಕ್ಕಳಿಗೆ ಭವಿಷ್ಯ ರೂಪಿಸುವ ಉದ್ದೇಶದಿಂದ ಟ್ರಸ್ಟ್ ಸ್ಥಾಪನೆ ಮಾಡಿದ್ದಾರೆ.

ಶಿಕ್ಷಣದಿಂದ ವಂಚಿತವಾಗಿರುವ ಬಡ ಮಕ್ಕಳನ್ನ ಗುರುತಿಸಿ ಅಂತಹ ಮಕ್ಕಳಿಗೆ ಉಚಿತವಾಗಿ ವಸತಿ ಸಹಿತ ಶಿಕ್ಷಣ ನೀಡುತ್ತಾ ಬಂದಿದ್ದಾರೆ. 2014ರಲ್ಲಿ ಚನ್ನಪಟ್ಟಣದ ಭಾರತಿ ನಗರದಲ್ಲಿ ಬಾಡಿಗೆ ಕಟ್ಟಡ ಪಡೆದುಕೊಂಡು ಮಾತೃ ಭೂಮಿ‌ ಸೇವಾ ಫೌಂಡೇಶನ್ ಹೆಸರಿನಡಿಯಲ್ಲಿ ಸೇವಾ ಕೈಂಕರ್ಯ ಮಾಡಿಕೊಂಡು ಬರುತ್ತಿದ್ದಾರೆ. ಇದುವರೆಗೂ ಈ ವಸತಿ ಶಾಲೆಯಲ್ಲಿ 16 ಅನಾಥ ಮಕ್ಕಳು ಕಲಿಯುತ್ತಿದ್ದಾರೆ.

ನನಗೆ ಎಲ್ಲಾ ಇದ್ದು, ಅನಾಥನಾಗಿ ಎಲ್ಲಾ ಕಷ್ಟಗಳನ್ನ ಕೂಡ ನಾನು ಅನುಭವಿಸಿದ್ದೇನೆ‌. ನನ್ನ ಹಾಗೆ ಯಾರು ಕೂಡ ಅನಾಥರಾಗಬಾರದೆಂಬ ಉದ್ದೇಶದಿಂದ ಮಾತೃ ಭೂಮಿ ಸೇವಾಶ್ರಮ ಪ್ರಾರಂಭ ಮಾಡಿ ಇಲ್ಲಿ ಅನಾಥ ಮಕ್ಕಳಿಗೆ ಆಶ್ರಯ ನೀಡಲಾಗುತ್ತಿದೆ. ಈ ಆಶ್ರಮದಲ್ಲಿ‌ ಇರುವ ಒಂದೊಂದು ಮಗುವಿನ‌ ಹಿಂದೆ ಒಂದೊಂದು‌ ಸಂಕಷ್ಟದ ಕಥೆಯೇ ಇದೆ. ಈ ಮಕ್ಕಳನ್ನು ನಾಡಿನ ಉನ್ನತ ವ್ಯಕ್ತಿಯನ್ನಾಗಿ ಮಾಡುವ ಉದ್ದೇಶವೇ ಟ್ರಸ್ಟ್​​ನ ಗುರಿಯಾಗಿದೆ. ಈ ಸೇವೆಯ ಜೊತೆಗೆ ಕಷ್ಟದಲ್ಲಿರುವ ಬಡವರಿಗೆ ಸೇವೆ ಒದಗಿಸಲು ನಮ್ಮ ಟ್ರಸ್ಟ್ ಸದಾ ಮುಂದೆ ಇರುತ್ತದೆ. ಯಾವುದೇ ಸಮಸ್ಯೆಗಳು ಎದುರಾದಾಗ ನಮ್ಮ ಟ್ರಸ್ಟ್​​ನಿಂದ ಆಗುವ ಸೇವೆಯನ್ನ ಕೂಡ ನಾವು ಮಾಡಿಕೊಂಡು ಬರುತ್ತಿದ್ದೇವೆ ಎನ್ನುತ್ತಾರೆ ಆಶ್ರಮದ ಸಂಸ್ಥಾಪಕ ಮಹೇಶ್.

ಸದ್ಯಕ್ಕೆ ಆಶ್ರಮದಲ್ಲಿ 16 ಮಂದಿ ಅನಾಥ ಮಕ್ಕಳಿದ್ದಾರೆ. ಮಕ್ಕಳನ್ನ ಸಾಕಲು ಸಂಪನ್ಮೂಲ‌ ವ್ಯಕ್ತಿಗಳು ಸಹಾಯ ಮಾಡುತ್ತಿದ್ದಾರೆ. ಚನ್ನಪಟ್ಟಣ ಗ್ರಾಮಾಂತರ ಠಾಣೆಯ ಪಿಎಸ್ಐ ಶಿವಕುಮಾರ್, ಚನ್ನಪಟ್ಟಣ ಗ್ರಾಮಾಂತರ ಠಾಣೆ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಕೆ.ಟಿ.ಲಕ್ಷಮ್ಮ ಸೇರಿದಂತೆ ಹಲವರು ಇಲ್ಲಿ‌ ಓದುತ್ತಿರುವ ಅನಾಥ ಮಕ್ಕಳನ್ನ ದತ್ತು ಪಡೆದುಕೊಂಡು ಸೇವೆ ಮಾಡುತ್ತಿದ್ದಾರೆ.

ಇನ್ನು ಈ ಆಶ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಅನಾಥ ಮಕ್ಕಳು‌ ಸಹ ಇದ್ದಾರೆ. ಈ ಸೇವಾಶ್ರಮಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಸಿಗುತ್ತಿಲ್ಲ. ಕೇವಲ‌ ಸಂಪನ್ಮೂಲ ವ್ಯಕ್ತಿಗಳಿಂದ ಮಾತ್ರ ಸೇವೆ ಸಿಗುತ್ತಿದೆ. ಸೇವಾ ಮನೋಭಾವ ಇದ್ದರೆ ಸಾಲದು, ಅದನ್ನು ಹಂಚುವ ಕೆಲಸವನ್ನು ಮಾಡಬೇಕು. ಅದನ್ನು ಈ ಮಾತೃ ಭೂಮಿ ಸೇವಾಶ್ರಮ ಮಾಡುತ್ತಿದೆ ಎನ್ನುತ್ತಾರೆ ಸ್ಥಳೀಯರು.

ಮಹೇಶ್ ಬಡ ಹಾಗೂ ಅನಾಥ ಮಕ್ಕಳಿಗೆ ಅಪ್ಪ-ಅಮ್ಮ ಕೂಡ ಆಗಿದ್ದಾರೆ. ಪ್ರತಿನಿತ್ಯ ಮಕ್ಕಳ ಯೋಗಕ್ಷೇಮ ವಿಚಾರಿಸುತ್ತಾರೆ. ಇಲ್ಲಿಯ ಮಕ್ಕಳಿಗೆ ನಾವು ಅನಾಥರೆಂಬ ಭಾವನೆ ಬರದ ಹಾಗೆ ಸಾಕುತ್ತಿದ್ದಾರೆ. ಇಲ್ಲಿಯ ಒಂದೊಂದು ಮಕ್ಕಳು ಕೂಡ ಹಲವು ಕನಸು, ಗುರಿಯನ್ನ ಇಟ್ಟುಕೊಂಡಿದ್ದಾರೆ.

ಒಟ್ಟಾರೆ‌ ಅನಾಥ ಮಕ್ಕಳಿಗೆ ಈ ಮಾತೃ ಭೂಮಿ ಸೇವಾಶ್ರಮ ಆಶ್ರಯ ತಾಣವಾಗಿದ್ದು, ಮಹೇಶ್ ಅವರ ನಿಸ್ವಾರ್ಥ ಸೇವೆ ಹೀಗೆಯೇ ಮುಂದುವರೆಯಲಿ ಎಂಬುದೇ ನಮ್ಮ ಆಶಯ.

ABOUT THE AUTHOR

...view details