ರಾಮನಗರ: ನಾನು ಕನಕಪುರದ ಮೊಮ್ಮಗ, ಇಲ್ಲಿ ಯಾರಿಗೂ ಹೆದರುವ ಮಾತಿಲ್ಲ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಕಾಳಿ ಮಠದ ಋಷಿಕುಮಾರ ಸ್ವಾಮೀಜಿ ಟಾಂಗ್ ಕೊಟ್ಟಿದ್ದಾರೆ.
ಕನಕಪುರದ ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣವಾಗುತ್ತಿರುವುದನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೀವು ಕೆಂಪೇಗೌಡರ ಮಗ ಎಂದು ಹೇಳಿಕೊಳ್ಳುತ್ತೀರಿ ಅಲ್ವಾ, ನಾನು ಕಾಳೇಗೌಡರ ಮಗ, ಹೆದರಿಸಬೇಡಿ, ಇಲ್ಲಿ ಹೆದರುವವರು ಯಾರೂ ಇಲ್ಲ. ಕರ್ನಾಟಕ ನಿಮ್ಮದಲ್ಲ ಎಂದು ಡಿಕೆಶಿ ವಿರುದ್ಧ ಹರಿಹಾಯ್ದರು.
ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣವಾಗುತ್ತಿರುವುದರ ಕುರಿತು ಮಾತನಾಡಿದ ಸ್ವಾಮೀಜಿ ಕರ್ನಾಟಕ ನಮ್ಮದು, ಬೆಟ್ಟಗಳನ್ನ ಕರಗಿಸಿದವರು ಅದೇ ಬೆಟ್ಟದ ಮೇಲೆ ಇನ್ನೊಂದನ್ನು ಇಡಲು ಹೋಗಬೇಡಿ. ನಾನು ಕನಕಪುರದ ಮೊಮ್ಮಗನೇ ಹೆದರಿಕೊಳ್ಳೋಕೆ ನಾನು ಮೊದಲಿನ ಕಾಳಿ ಸ್ವಾಮೀಜಿ ಅಲ್ಲ ಎಂದು ಟಾಂಗ್ ಕೊಟ್ಟರು.
ಈ ಹಿಂದೆ ಮಾತನಾಡಿದ್ದ ಡಿಕೆಶಿ, ಕನಕಪುರಕ್ಕೂ ಕಾಳಿ ಸ್ವಾಮೀಜಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದರು ಎಂದು ಆರೋಪಿಸಿದ ಕಾಳಿ ಸ್ವಾಮೀಜಿ, ನಾನು ಮೊದಲಿನಂತಿಲ್ಲ ನನ್ನ ಜೊತೆ ಸೇನೆಗಳೆಲ್ಲಾ ಇವೆ ಎಂದು ಗರಂ ಆಗಿ ಪ್ರತಿಕ್ರಿಯಿಸಿದರು.
ಕಪಾಲ ಬೆಟ್ಟದಲ್ಲಿ ನಡೆಯುತ್ತಿರುವ ಕಾಮಗಾರಿ ನಿಲ್ಲಿಸಿ, ಪರಿಕರಗಳನ್ನು ಅಲ್ಲಿಂದ ಶಿಫ್ಟ್ ಮಾಡದಿದ್ದರೆ ಇದೇ 20ರಂದು ಕೋತಿ ಆಂಜನೇಯ ಸ್ವಾಮಿ ದೇವಾಲಯದಿಂದ ಮುನೇಶ್ವರ ಬೆಟ್ಟದವರೆಗೆ ಪಾದಯಾತ್ರೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಉತ್ತರ ಕರ್ನಾಟಕದ ಹತ್ತಾರು ಸ್ವಾಮೀಜಿಗಳು ಹಿಂದೂಪರ ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದ ಅವರು ಆಕಸ್ಮಾತ್ ಪಾದಯಾತ್ರೆ ವೇಳೆ ಏನಾದರೂ ಅವಘಡ ಸಂಭವಿಸಿದರೆ ಇದಕ್ಕೆ ಸರ್ಕಾರ, ಜಿಲ್ಲಾಡಳಿತವೇ ನೇರ ಹೊಣೆ ಎಂದು ಎಚ್ಚರಿಸಿದರು.