ಕರ್ನಾಟಕ

karnataka

ETV Bharat / state

ಯೋಗೇಶ್ವರ್​ಗೆ​ ಶಾರ್ಪ್​ ಶೂಟರ್​ ಬಿರುದು.. ಜಾಲತಾಣಗಳಲ್ಲಿ ಡಿಕೆಶಿ ಬೆಂಬಲಿಗರು ಗರಂ

ಕಾಂಗ್ರೆಸ್ ಟ್ರಬಲ್ ಶೂಟರ್ ಎಂದೇ ಖ್ಯಾತಿಗೊಂಡಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಬಿಜೆಪಿಯ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅಭಿಮಾನಿಗಳ ನಡುವೆ ಜಾಲತಾಣಗಳಲ್ಲಿ ಶೂಟರ್ ಪಟ್ಟಕ್ಕೆ ಸಮರ ಆರಂಭವಾಗಿದೆ.

By

Published : Aug 8, 2019, 4:02 AM IST

ಡಿಕೆಶಿ, ಸಿಪಿವೈ

ರಾಮನಗರ: ಕಾಂಗ್ರೆಸ್-ಜೆಡಿಎಸ್‌ನ ಭದ್ರ ಕೋಟೆಯಾಗಿದ್ದ ರಾಮನಗರ ಜಿಲ್ಲೆ ಬಿಜೆಪಿ ಸರ್ಕಾರದ ಬಳಿಕ ಮೌನಕ್ಕೆ ಜಾರಿದೆ. ಈ ನಡುವೆ ಮಾಜಿ ಸಚಿವರ ನಡುವೆ ಶೀಥಲ ಸಮರ ಮುಂದುವರಿದಿದ್ದು, ಅವರ ಬೆಂಬಲಿಗರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ದಿನದಿಂದ ದಿನಕ್ಕೆ ವಾಕ್ ಸಮರ ಹೆಚ್ಚುತ್ತಿದೆ.

‘ಶೂಟರ್’ ಪಟ್ಟಕ್ಕೆ ಅಭಿಮಾನಿಗಳು ಕಾಮೆಂಟ್ಸ್ ಸಮರ ನಡೆಸುತ್ತಿದ್ದಾರೆ. ಕಾಂಗ್ರೆಸ್ ಟ್ರಬಲ್ ಶೂಟರ್ ಎಂದೇ ಖ್ಯಾತಿಗೊಂಡಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಬಿಜೆಪಿಯ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅಭಿಮಾನಿಗಳ ನಡುವೆ ಜಾಲತಾಣಗಳಲ್ಲಿ ಶೂಟರ್ ಪಟ್ಟಕ್ಕೆ ಸಮರ ಆರಂಭವಾಗಿದ್ದು, ಬಿಜೆಪಿ ಸರ್ಕಾರ ರಚನೆ ಬಳಿಕ ಡಿ.ಕೆ ಶಿವಕುಮಾರ್ ಕೇವಲ ಟ್ರಬಲ್ ಶೂಟರ್ ಆಗಿದ್ದರೆ, ಸಿ.ಪಿ.ಯೋಗೇಶ್ವರ್ ಶಾರ್ಪ್ ಶೂಟರ್ ಎಂಬ ಹೊಸ ಬಿರುದುಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಮಾಜಿ ಸಚಿವರಾದ ಸಿ.ಪಿ ಯೋಗೇಶ್ವರ್ ಹಾಗೂ ಡಿ.ಕೆ ಶಿವಕುಮಾರ್ ಹಿಂದಿನಿಂದಲೂ ರಾಜಕೀಯ ಬದ್ದ ವೈರಿಗಳು. ಒಮ್ಮೆ ಮಾತ್ರವೇ ಒಗ್ಗಟ್ಟಿನ ಮಂತ್ರ ಜಪಿಸಿದ್ದರು. ಈ ಹಿಂದೆ ನಡೆದ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿಯೂ ಈ ಇಬ್ಬರು ನಾಯಕರು ನೇರವಾಗಿ ಅಖಾಡಕ್ಕಿಳಿದಿದ್ದರು. ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಸಿ.ಪಿ ಯೋಗೇಶ್ವರ್ ಅರಣ್ಯ ಸಚಿವರಾಗುವ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಈ ವೇಳೆ ಡಿ.ಕೆ ಬ್ರದರ್ಸ್ ವಿರುದ್ಧ ಅರಣ್ಯ ನಿಯಮ ಉಲ್ಲಂಘನೆ ಸಂಬಂಧ ಪ್ರಕರಣ ಸಹ ದಾಖಲಿಸಿದ್ದರು. ಅಲ್ಲದೇ ಈ ಇಬ್ಬರು ನಾಯಕರುಗಳ ಅಭಿಮಾನಿಗಳು ಸಹ ಅಷ್ಟೆ ವಿರೋಧಿಗಳು ಎಂಬುದು ಅನೇಕ ಪ್ರಕರಣಗಳಿಂದಲ್ಲೂ ದೃಢ ಪಟ್ಟಿದೆ.

ಸದ್ಯಕ್ಕೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಂಡಿದ್ದು, ಬಿಜೆಪಿಯು ತನ್ನ ಸಂಪುಟ ರಚನೆಗೆ ಮುಂದಾಗಿದೆ. ಇಂತಹ ಸಮಯದಲ್ಲಿ ಇಬ್ಬರು ನಾಯಕರ ಬೆಂಬಲಿಗರು, ಶೂಟರ್ ಪಟ್ಟಕ್ಕೆ ಗಲಾಟೆ ನಡೆಸುತ್ತಿದ್ದಾರೆ ಎಂಬುದು ವಿಶೇಷ. ಸಮ್ಮಿಶ್ರ ಸರ್ಕಾರ ಉಳಿಸಲು ಸಾಧ್ಯವಾಗದ ಡಿ.ಕೆ ಶಿವಕುಮಾರ್ ಟ್ರಬಲ್ ಶೂಟರ್ ಅಲ್ಲ, ಕೇವಲ ಖಾಲಿ ಬಿಲ್ಡಪ್ ಶೂಟರ್ ಎಂದು ಸಿಪಿವೈ ಬೆಂಬಲಿಗರು ಕಾಲೆಳೆದಿದ್ದಾರೆ. ಬಿಜೆಪಿ ಸರ್ಕಾರ ರಚನೆಗೆ ಸದ್ದಿಲ್ಲದೇ, ಆಪರೇಷನ್ ನಡೆಸಿದ ಸಿ.ಪಿ ಯೋಗೇಶ್ವರ್ ಶಾರ್ಪ್ ಶೂಟರ್ ಎಂಬ ಪೋಸ್ಟರ್‌ಗಳು ಎಲ್ಲೆಡೆ ಹರಿದಾಡುತ್ತಿವೆ. ಇದಕ್ಕೆ ಕಾಂಗ್ರೆಸ್ ನಾಯಕರು ಮಾತ್ರವಲ್ಲದೇ, ಡಿ.ಕೆ.ಶಿ ಅವರ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಜಾಲತಾಣಗಳಲ್ಲಿ ಸದ್ಯಕ್ಕೆ ಶೂಟರ್ ಪಟ್ಟ ಸಾಕಷ್ಟು ವೈರಲ್ ಆಗಿದ್ದು, ಸಿಪಿವೈ ನಟಿಸಿದ್ದ ಸೈನಿಕ ಸಿನಿಮಾದ ಪೋಸ್ಟರ್‌ಗಳು ಚರ್ಚೆಗೆ ಗ್ರಾಸವಾಗಿದೆ. ಇಲ್ಲಿ ಸಿಪಿವೈ ಗನ್ ಹಿಡಿದು ನಿಂತಿರುವುದು ವಿಶೇಷ. ಕಾಂಗ್ರೆಸ್‌ನ ಟ್ರಬಲ್ ಶೂಟರ್ ಎಂಬ ಪಟ್ಟ ಡಿಕೆಶಿಗೆ ಖಾಯಂ ಆಗಿತ್ತು. ಬಿಜೆಪಿ ಸರ್ಕಾರ ರಚನೆ ಬಳಿಕ ಕಟ್ಟಾ ಸುಬ್ರಮಣ್ಯ ನಾಯ್ಡು ಸಹ ಇದನ್ನು ವ್ಯಂಗ್ಯ ಮಾಡಿದ್ದರು. ಕಾಂಗ್ರೆಸ್‌ನ ಬಳಿ ಒಬ್ಬ ಟ್ರಬಲ್ ಶೂಟರ್ ಇದ್ದರೆ, ನಮ್ಮ ಬಳಿ ನೂರು ಟ್ರಬಲ್ ಕಿಲ್ಲರ್ಸ್‌ ಇದ್ದಾರೆ ಎಂದಿದ್ದರು.

ಇದೀಗ ಶಾರ್ಪ್ ಶೂಟರ್ ಎಂಬ ಪಟ್ಟಕ್ಕೆ ಬಿಜೆಪಿಯ ಸಿ.ಪಿ ಯೋಗೇಶ್ವರ್ ಜಾಲತಾಣಗಳ ಮೂಲಕ ಆಯ್ಕೆಯಾಗಿದ್ದಾರೆ ಎಂದೇಳಬಹುದು. ಸಮಸ್ಯೆಗಳನ್ನು ಬಗೆಹರಿಸುವ ಡಿ.ಕೆ ಶಿವಕುಮಾರ್ ಟ್ರಬಲ್ ಶೂಟರ್ ಆಗಿದ್ದರೆ, ಇಟ್ಟ ಗುರಿಯನ್ನು ಬದಲಿಸಿದೇ ಗುರಿ ಇಟ್ಟು ಹೊಡೆಯುವ ಸಿ.ಪಿ ಯೋಗೇಶ್ವರ್ ಶಾರ್ಪ್ ಶೂಟರ್ ಎನ್ನಬಹುದು. ಮತ್ತೊಂದೆಡೆ ಏನೇ ಆದರೂ, ಶಾರ್ಪ್ ಶೂಟರ್ ಹಾಗೂ ಟ್ರಬಲ್ ಶೂಟರ್‌ಗಳು ಇಬ್ಬರು ಸಹ ರಾಮನಗರ ಜಿಲ್ಲೆಯಲ್ಲಿಯೇ ಇರುವುದು ಮತದಾರರ ಸೌಭಾಗ್ಯ ಎಂದೂ ಕೂಡ ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿದೆ.

ABOUT THE AUTHOR

...view details