ರಾಮನಗರ :ಪ್ರತಿನಿತ್ಯ ಚನ್ನಪಟ್ಟಣಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಸಿ.ಎಂ. ಇಬ್ರಾಹಿಂ ಜೊತೆ ಜೆಡಿಎಸ್ ಅಧಿಕಾರಕ್ಕೆ ತರಲು ಹೊರಟಿದ್ದೇನೆ. ಸ್ವತಂತ್ರವಾದ ಪ್ರಾದೇಶಿಕ ಪಕ್ಷ ತರಲು ಪಣತೊಟ್ಟಿದ್ದೇವೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಜಿಲ್ಲೆ ಚನ್ನಪಟ್ಟಣದಲ್ಲಿ ಜೆಡಿಎಸ್ ಕಚೇರಿ ಉದ್ಘಾಟನೆ ಬಳಿಕ ಅವರು ಮಾತನಾಡುತ್ತಿದ್ದರು. ಜನರಿಗೆ ಸಣ್ಣಪುಟ್ಟ ಸಮಸ್ಯೆ ಆದಾಗ ವೈಯಕ್ತಿಕವಾಗಿ ರಕ್ಷಣೆ ಮಾಡುತ್ತೇವೆ. ರಾಜ್ಯದಲ್ಲಿ ಜನಪರ ಸರ್ಕಾರ ತರಲು ಕಾರ್ಯಕರ್ತರು ಸೂಚನೆ ಕೊಟ್ಟಿದ್ದಾರೆ. ನವೆಂಬರ್ 1ರಿಂದ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಆರಂಭವಾಗುತ್ತಿದೆ. ಈ ಕಾರ್ಯಕ್ರಮ ಮಾರ್ಚ್ 15ನೇ ತಾರೀಖಿನವರೆಗೂ ನಡೆಯುತ್ತದೆ ಎಂದು ಮಾಹಿತಿ ನೀಡಿದರು.
ಅಭಿವೃದ್ಧಿ ಕೆಲಸ ಮಾಡಿರುವ ಕಿರು ಹೊತ್ತಿಗೆಯನ್ನು ಪ್ರತಿ ಮನೆಗೆ ತಲುಪಿಸುತ್ತೇವೆ. ನಾನು ಕಲ್ಲು ಹಾಕಿಸಿಕೊಳ್ಳುವಂತಹ ಕೆಲಸ ಮಾಡಿಕೊಂಡಿಲ್ಲ. ಸಣ್ಣ ಸಣ್ಣ ಕೆಲಸಗಳಿಗೂ ಕಲ್ಲಿನ ಮೇಲೆ ನನ್ನ ಹೆಸರು ಹಾಕಿಸಿಕೊಳ್ಳುವವನಲ್ಲ. ಚನ್ನಪಟ್ಟಣ ಕ್ಷೇತ್ರವಷ್ಟೇ ಅಲ್ಲ, ರಾಜ್ಯದ ಜನರ ಹೃದಯದಲ್ಲಿ ಹೆಸರು ಇರಬೇಕು. ಅಂತಹ ಕೆಲಸ ಮಾಡುವ ಮನೋಭಾವನೆ ನನಗಿದೆ. ನನ್ನ ಕೆಲಸಗಳು ಯಾವುದೋ ಕಲ್ಲಿನ ಮೇಲೆ ಇರಬೇಕು ಅಂತ ಇಚ್ಛಿಸುವುದಿಲ್ಲ ಎಂದರು.
ನಾನು ಟೂರಿಂಗ್ ಟಾಕೀಸ್ ಅಲ್ಲ :ನಾನು ಈ ಬಾರಿ ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ. ನನಗೆ ರಾಜ್ಯದ ಎಲ್ಲೆಡೆಯಿಂದ ಸ್ಫರ್ಧೆ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ನಾನು ಟೂರಿಂಗ್ ಟ್ಯಾಕಿಸ್ ಅಲ್ಲ ಅಂತ ಹೇಳಿದ್ದೇನೆ. ಈ ಬಾರಿ ರಾಮನಗರದಿಂದ ಮಾತ್ರ ಸ್ಪರ್ಧೆ ಮಾಡುತ್ತೇನೆ ಎಂದು ತಮ್ಮ ಕ್ಷೇತ್ರದ ಬಗ್ಗೆ ಹೇಳಿದರು.