ಕರ್ನಾಟಕ

karnataka

By

Published : Jul 13, 2020, 6:04 PM IST

ETV Bharat / state

ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಾಚಿಕೆ-ಮಾನ-ಮಾರ್ಯಾದೆ ಇಲ್ಲ : ಸಂಸದ ಡಿಕೆಸು

ರೋಗಿಗಳಲ್ಲಿನ ಆತಂಕ ನಿವಾರಣೆಗೆ ಜಿಲ್ಲಾ ಪಂಚಾಯತ್‌ ವತಿಯಿಂದ ಪ್ರತಿ ಗ್ರಾಪಂನಲ್ಲಿಯೂ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಎಲ್ಲಾ ತಾಲೂಕು ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಸರ್ಕಾರದ ಮನವಿ ಕೇಳಲಾಗಿದೆ..

DK Suresh
ಸಂಸದ ಡಿ.ಕೆ.ಸುರೇಶ್

ರಾಮನಗರ :ಆಶಾ ಕಾರ್ಯಕರ್ತೆಯರ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತಾದ್ರೂ ಕಾಳಜಿ ಇದ್ರೆ ಆಶಾ ಕಾರ್ಯಕರ್ತೆಯರಿಗೆ ಕನಿಷ್ಟ ವೇತನ ನಿಗದಿಪಡಿಸಲಿ. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಾಚಿಕೆ, ಮಾನ, ಮಾರ್ಯಾದೆ ಇಲ್ಲ. ಲಜ್ಜೆಗೆಟ್ಟ ಸರ್ಕಾರ. ಅವರ ಕೈಯಲ್ಲಿ 24 ಗಂಟೆ ದುಡಿಸಿಕೊಂಡು, ನಾಲ್ಕು ತಿಂಗಳಿಗೆ ನಾಲ್ಕು ಸಾವಿರ ನೀಡಿದ್ರೆ ಹೇಗೆ? ಕೇಂದ್ರ ಸರ್ಕಾರವೇ ಮಾಡಿದ್ದ ವೇತ‌ನ ಕಾಯ್ದೆ ಎಲ್ಲಿದೆ.? ಸರ್ಕಾರಕ್ಕೆ ನೈತಿಕತೆ ಇದ್ದರೆ ಕೂಡಲೇ ವೇತನ ಹೆಚ್ಚಿಸಬೇಕು ಎಂದು ಸಂಸದ ಡಿ ಕೆ ಸುರೇಶ್ ವಾಗ್ದಾಳಿ‌ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರನ್ನ ಪಿಂಕ್ ವಾರಿಯರ್ಸ್ ಅಂತಾರೆ. ಆದರೆ, ಅವರಿಗೆ ಸಂಬಳ ನೀಡದೆ ಅನ್ಯಾಯ ಮಾಡಲಾಗುತ್ತಿದೆ. ಕೂಡಲೇ ಸರ್ಕಾರ ಆರು ಇಲ್ಲವೆ ಎಂಟು ಸಾವಿರ ವೇತನ ಹೆಚ್ಚಿಸಬೇಕು. ಅವರನ್ನು‌‌, ನೊಡಿದ್ರೆ ಅಯ್ಯೋ ಅನ್ನಿಸುತ್ತದೆ. ಕೇಂದ್ರ ಸರ್ಕಾರ ಕನಿಷ್ಟ ವೇತನ ಕಾಯ್ದೆ ಜಾರಿಗೆ ತಂದಿದೆ. ಆದರೆ, ಅವರೇ ಪಾಲಿಸುತ್ತಿಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊರೊನಾ ಚಿಕಿತ್ಸೆಗೆ ಸಕಲ ಸಿದ್ಧತೆ:ಜಿಲ್ಲೆಯಲ್ಲಿ ಕೊರೊನಾ ಚಿಕಿತ್ಸೆ ಬಗ್ಗೆ ಸಾಕಷ್ಟು ಕ್ರಮ ಕೈಗೊಂಡಿದ್ದು, ರಾಜರಾಜೇಶ್ವರಿ ಮೆಡಿಕಲ್ ಕಾಲೇಜು 600 ಹಾಸಿಗೆ ನೀಡಲು ಮುಂದಾಗಿದ್ದಾರೆ. ಇಡೀ ಆಸ್ಪತ್ರೆಯನ್ನೇ ಜಿಲ್ಲೆಗೆ ನೀಡಲು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಸರ್ಕಾರ ಇದಕ್ಕೆ ಒಪ್ಪಿಗೆ ನೀಡಬೇಕು. ಇದರೊಂದಿಗೆ ದಯಾನಂದ ಸಾಗರ್ ಆಸ್ಪತ್ರೆಯಲ್ಲಿ 60 ಹಾಸಿಗೆಗಳಿವೆ, ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಲ್ಲಿ 200 ಹಾಸಿಗೆ ಇದೆ‌. ಮುಂದಿನ ದಿನಗಳಲ್ಲಿ ಎಲ್ಲಾ ತಾಲೂಕುಗಳ ಹಾಸ್ಟೆಲ್ ಹಾಗೂ ಕ್ವಾರಂಟೈನ್ ಸೆಂಟರ್​ನಲ್ಲಿಯೇ ಚಿಕಿತ್ಸೆ ನೀಡಲು ಸಿದ್ಧತೆ ನಡೆಯುತ್ತಿದೆ. ಮೂಲ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ಜಿಲ್ಲಾಧಿಕಾರಿಗಳು ವ್ಯವಸ್ಥೆ ಮಾಡುತ್ತಿದ್ದಾರೆ.

ರೋಗಿಗಳಲ್ಲಿನ ಆತಂಕ ನಿವಾರಣೆಗೆ ಜಿಲ್ಲಾ ಪಂಚಾಯತ್‌ ವತಿಯಿಂದ ಪ್ರತಿ ಗ್ರಾಪಂನಲ್ಲಿಯೂ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಎಲ್ಲಾ ತಾಲೂಕು ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಸರ್ಕಾರದ ಮನವಿ ಕೇಳಲಾಗಿದೆ. ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ. ಜಿಲ್ಲೆಯಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತಿದೆ ಎಂದರು. ಸಾರ್ವಜನಿಕರು ಕೂಡ ರೋಗ ಲಕ್ಷಣಗಳು ಕಂಡು ಬಂದ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕಿದೆ‌. ಇಲ್ಲವೇ ಇಡೀ ಕುಟುಂಬಕ್ಕೆ ಸೋಂಕು ಹರಡುವ ಸಾಧ್ಯತೆ ಇದೆ. ವೈದ್ಯರ ಮಾರ್ಗಸೂಚಿಗಳನ್ನು ಪಾಲಿಸಿ, ಅನವಶ್ಯಕ ಓಡಾಟ ತಪ್ಪಿಸಿ. ಕೆಲಸ ಇದ್ದರಷ್ಟೇ ಬೇರೆಯವರೊಂದಿಗೆ ಮಾತನಾಡಿ ಎಂದು ಮನವಿ ಮಾಡಿದರು.

ಸಾರ್ವಜನಿಕರಲ್ಲಿ ಆತ್ಮವಿಶ್ವಾಸವಿರಲಿ :ಸಾರ್ವಜನಿಕರಿಗೆ ಭರವಸೆ ಮೂಡಿಸುವ ಸಲುವಾಗಿ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದೇನೆ. ಕೊರೊನಾ ವಾರಿಯರ್ಸ್​ಗೆ ಆತ್ಮಬಲ ತುಂಬುವ ಕೆಲಸ ಮಾಡಲಾಗುವುದು. ಎಲ್ಲರೂ ನಮ್ಮವರೆ, ನಾವೆಲ್ಲಾ ಭಾರತೀಯರು ಎಂದರು.

ಲಾಕ್​ಡೌನ್​ಗೆ ಮನವಿ :ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಮಾಗಡಿ ಹಾಗೂ ರಾಮನಗರದಲ್ಲಿ ಪ್ರಕರಣ ಹೆಚ್ಚಾಗಿದೆ. ಬೆಳಗ್ಗೆ 7ರಿಂದ 12 ಗಂಟೆ ಬಳಿಕ ಒಂದು ವಾರಗಳ ಕಾಲ ಲಾಕ್​ಡೌನ್ ಮಾಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದೇನೆ. ಸ್ಥಳೀಯವಾಗಿ ವ್ಯವಸ್ಥೆ ಮಾಡಿಕೊಳ್ಳಬೇಕು, ಕೈಗಾರಿಕೆಗಳು ನಡೆಯಲು ಅಭ್ಯಂತರ ಇಲ್ಲ.

ಬಾಷ್ ಕಂಪನಿ ಮೇಲೆ ಸಾಕಷ್ಟು ಆರೋಪ ಇದೆ. ಕೂಡಲೇ ಎಚ್ಚರಿಕೆ ವಹಿಸಲಾಗುವುದು ಎಂದರು. ಅಲ್ಲದೆ ಗಾರ್ಮೆಂಟ್ಸ್ ಫ್ಯಾಕ್ಟರಿಗಳಲ್ಲಿ ಸಾಮಾಜಿಕ ಅಂತರ ಇರಲಿ. ಸ್ಯಾನಿಟೈಸರ್ ಕೂಡ ಸಿಗುತ್ತಿಲ್ಲ ಎನ್ನುವ ಪ್ರಶ್ನೆಗೆ ಗಾರ್ಮೆಂಟ್ಸ್‌ಗಳಿಗೆ ಸಿಇಒ ಅವರು ಭೇಟಿ‌ ನೀಡಲಿದ್ದಾರೆ. ದೂರುಗಳಿದ್ದರೆ ಅವರ ಗಮನಕ್ಕೆ ತನ್ನಿ ಎಂದರು. ಸರ್ಕಾರ ನಮ್ಮ ಮಾತು ಕೇಳುವುದಿಲ್ಲ. ‌ನಾವೇನು ಹೇಳಿದರೂ ಏನು ಸುಖ. ಸದ್ಯಕ್ಕೆ ಏಳು ದಿನ ಲಾಕ್​ಡೌನ್ ಮಾಡಿದ್ದೇ ಪುಣ್ಯ ಎಂದು ಸರ್ಕಾರದ ನಡೆಗೆ ವ್ಯಂಗ್ಯ ವಾಡಿದರು.

ABOUT THE AUTHOR

...view details