ರಾಮನಗರ: ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ, ಕಾದು ನೋಡೋಣ ಮುಂದೆ ಏನಾಗುತ್ತದೆ ಅಂತ. ಆದ್ರೆ, ಸದ್ಯಕ್ಕೆ ನಾವು ಮೇಕೆದಾಟು ಪಾದಯಾತ್ರೆ ಬಗ್ಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರೇ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ.
ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇದೇ 9 ರಿಂದ 19 ರ ವರೆಗೆ ಕೋವಿಡ್ ನಿಯಮ ಜಾರಿ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಕೊರೊನಾ, ಬಿಜೆಪಿ ಕರ್ಫ್ಯೂ, ಬಿಜೆಪಿ ಲಾಕ್ಡೌನ್ ಪ್ರಾರಂಭವಾಗಿದೆ ಎಂದು ಲೇವಡಿ ಮಾಡಿದರು.
ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಡಿ.ಕೆ.ಬ್ರದರ್ಸ್ ಹೊರಟ್ಟಿದ್ದಾರೆ ಎಂಬ ಸಿಪಿವೈ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಖಂಡಿತ ಅವರಷ್ಟು ನನಗೆ ರಾಜಕೀಯ ಗೊತ್ತಿಲ್ಲ. ಸಿಪಿವೈ ಕನಕಪುರದಲ್ಲೂ ಸ್ಪರ್ಧೆಗೆ ಸಿದ್ಧ ಎಂದು ಕೂಡ ಹೇಳಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಯಾರು ಎಲ್ಲಿ ಬೇಕಾದರೂ ನಿಲ್ಲಬಹುದೆಂದು ಸಂವಿಧಾನ ಹೇಳುತ್ತದೆ. ಯಾರು ಎಲ್ಲಿ ಬೇಕಾದ್ರು ನಿಲ್ಲಬಹುದು. ಅವರು ಮಂತ್ರಿಯಾಗಲಿ ಎಂದು ಆಶಿಸುತ್ತೇನೆ. ಜಿಲ್ಲೆಗೆ ಒಳ್ಳೆಯದಾಗಲಿ ಎಂಬುದು ನಮ್ಮ ಆಶಯ ಕೂಡ ಎಂದರು.