ರಾಮನಗರ:ಕನ್ನಮಂಗಲ ಗ್ರಾಮದಲ್ಲಿ ಬಹಳಷ್ಟು ಸಮಸ್ಯೆಗಳಿದ್ದು, ಆದ್ಯತೆ ಮೇರೆಗೆ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ತಿಳಿಸಿದರು.
ಕನ್ನಮಂಗಲ ಗ್ರಾಮದಲ್ಲಿ ಆಯೋಜಿಸಲಾಗಿದ್ದ 'ಜಿಲ್ಲಾಧಿಕಾರಿಗಳ ನಡೆ, ಹಳ್ಳಿ ಕಡೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚರ್ಚೆಯಿಂದ ಪ್ರಯೋಜನವಿಲ್ಲ, ಜಿಲ್ಲಾಧಿಕಾರಿಗಳು ಬಂದರು ಹೋದರು ಎನ್ನುವ ರೀತಿಯಾಗಬಾರದು. ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಿ, ಅದರ ಆಧಾರದ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳುವ ಬಗ್ಗೆ ಆದೇಶಿಸಲಾಗುವುದು ಎಂದರು.
ಗ್ರಾಮದಲ್ಲಿ ಬಹಳಷ್ಟು ಜನರು ಪೌತಿ ಖಾತೆ ಸಮಸ್ಯೆಯನ್ನು ಪರಿಹರಿಸಿಕೊಡುವಂತೆ ಮನವಿ ಸಲ್ಲಿಸಿದರು. ದೊಡ್ಡಮಣ್ಣುಗುಡ್ಡೆ ಸರ್ವೆ ನಂ. 1ಕ್ಕೆ ಸಂಬಂಧಿಸಿದಂತೆ ರಾಜ್ಯ ಅರಣ್ಯ ಇಲಾಖೆಯಿಂದ ಯಾವುದೇ ವಿವಾದವಿಲ್ಲ. ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಸ್ಥಳ ಹಸ್ತಾಂತರ ಮಾಡಲು, ಕಡತವನ್ನು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಕಡತ ಬಂದ ನಂತರ ಡಿನೋಟಿಫಿಕೇಷನ್ ಮಾಡಿ, ಖಾತೆಗೆ ಹೆಸರು ಸೇರಿಸುವ ಕೆಲಸ ಮಾಡಲಾಗುವುದು ಎಂದರು.
ಕಂದಾಯ ಗ್ರಾಮ: ಗ್ರಾಮದಲ್ಲಿ 100 ಕುಟುಂಬವಿದ್ದು, 250ಕ್ಕೂ ಹೆಚ್ಚಿನ ಜನಸಂಖ್ಯೆಯಿದೆ. ಅರಣ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಪರಿಹಾರವಾದ ತಕ್ಷಣ ಕಂದಾಯ ಗ್ರಾಮವಾಗಿ ಪರಿವರ್ತಿಸಲಾಗುವುದು. ಗ್ರಾಮದಲ್ಲಿ, ಶಾಲೆ, ಡೈರಿ, ಸಮುದಾಯ ಭವನ ಮತ್ತಿತರ ಅವಶ್ಯಕತೆಯ ಬಗ್ಗೆ ಚರ್ಚೆ ನಡೆಸಿ, ಯೋಜನೆ ಸಿದ್ದಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.