ರಾಮನಗರ : ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಣ್ವ ಜಲಾಶಯ ಭರ್ತಿಯಾಗಿದ್ದು, ಈ ಹಿನ್ನೆಲೆ ಕಣ್ವ ಜಲಾಶಯಕ್ಕೆ ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಬಾಗಿನ ಅರ್ಪಿಸಿದ್ದಾರೆ. ಜಿಲ್ಲೆಯ ಚನ್ನಪಟ್ಟಣದ ಕಣ್ವ ಜಲಾಶಯಕ್ಕೆ ಊರಿನ ಮಹಿಳೆಯರ ಕೈಯಲ್ಲಿ ಬಾಗಿನ ಅರ್ಪಿಸಿದ್ದು, ಈ ಸಂದರ್ಭದಲ್ಲಿ ಗ್ರಾಮಸ್ಥರು ಮತ್ತು ಅವರ ಬೆಂಬಲಿಗರು ಉಪಸ್ಥಿತರಿದ್ದರು.
ಚನ್ನಪಟ್ಟಣದ ನೀರಾವರಿ ಅಭಿವೃದ್ಧಿಗೆ ನನ್ನ ಕೊಡುಗೆ: ಕ್ಷೇತ್ರದ ನೀರಾವರಿ ಅಭಿವೃದ್ಧಿಯಲ್ಲಿ ನನ್ನ ಶ್ರಮವಿದೆ. ಕಳೆದ 20 ವರ್ಷಗಳಿಂದ ನಾನು ಕ್ಷೇತ್ರದಲ್ಲಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಕಣ್ವ ಏತನೀರಾವರಿ ಜಾರಿಗೆ ತರಬೇಕಾದರೆ ಬಹಳಷ್ಟು ಸಾಹಸ ಮಾಡಿದ್ದೇನೆ. ಇವತ್ತು ನಮ್ಮ ತಾಲೂಕು ಸಂಪೂರ್ಣ ನೀರಾವರಿ ಕ್ಷೇತ್ರವಾಗಿದೆ. ಆದ್ದರಿಂದ ಇವತ್ತು ಕ್ಷೇತ್ರದಲ್ಲಿ ರೈತರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.
ಬಾಗಿನ ಅರ್ಪಣೆ ಕಾರ್ಯಕ್ರಮ : ಕಣ್ವ ಜಲಾಶಯ ಕಳೆದ ಕೆಲ ತಿಂಗಳ ಹಿಂದೆ ತುಂಬಿತ್ತು. ಆದರೆ ಕ್ಷೇತ್ರದ ಶಾಸಕ ಕುಮಾರಸ್ವಾಮಿ ಬಾಗಿನ ಅರ್ಪಣೆ ಮಾಡಲಿಲ್ಲ. ಈ ಬಾರಿಯೂ ಸಹ ಬರಲಿಲ್ಲ. ಹಾಗಾಗಿ ನಾನೇ ಬಂದು ಬಾಗಿನ ಅರ್ಪಣೆ ಮಾಡಿದ್ದೇನೆ. ಇನ್ನು ತಾಲೂಕಿನಲ್ಲಿ ಅತಿಯಾದ ಮಳೆಯಿಂದಾಗಿ ಅವಾಂತರ ಸಹ ಸೃಷ್ಟಿಯಾಗಿದೆ. ಅದನ್ನು ಸಹ ಗಮನಿಸಿ ಸೂಕ್ತ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.