ಕರ್ನಾಟಕ

karnataka

ETV Bharat / state

ರಾಮನಗರದಲ್ಲಿ 570 ಹಾಸಿಗೆಗಳ ಕೋವಿಡ್ ಕೇರ್​ ಸೆಂಟರ್​ ಸಿದ್ಧ.. ಡಿಸಿಎಂ ಅಶ್ವತ್ಥ್ ನಾರಾಯಣ - Ramanagara Covid Care Center

ಜಿಲ್ಲಾಧಿಕಾರಿಗಳು ನೀಡಿದ ಮಾಹಿತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿಗಳು, ಆರಂಭಿಸುವ ಪ್ರತಿಯೊಂದು ಕೋವಿಡ್-19 ಕೇರ್ ಸೆಂಟರ್ ಸುಸಜ್ಜಿವಾಗಿರಬೇಕು. ಯಾವುದೇ ಲೋಪ ಬರಬಾರದು. ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಆಮ್ಲಜನಕವನ್ನು ಅಳೆಯುವ ಆಕ್ಸಿಮೀಟರ್ ಇರಬೇಕು..

ಡಿಸಿಎಂ ಅಶ್ವತ್ಥನಾರಾಯಣ
ಡಿಸಿಎಂ ಅಶ್ವತ್ಥನಾರಾಯಣ

By

Published : Jul 10, 2020, 10:26 PM IST

ರಾಮನಗರ : ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಕೋವಿಡ್-19 ಕೇರ್ ಸೆಂಟರ್‌ಗಳನ್ನು ಪ್ರಾರಂಭಿಸುವ ದಿಸೆಯಲ್ಲಿ ಜಿಲ್ಲಾಡಳಿತ ಕಾರ್ಯನ್ಮುಖವಾಗಿದೆ. ಮೊದಲ ಹಂತದಲ್ಲಿ 570 ಹಾಸಿಗೆಗಳ ಸೆಂಟರ್‌ನ ಸಿದ್ಧಪಡಿಸಲಾಗಿದೆ ಎಂದು ಡಿಸಿಎಂ ಡಾ. ಸಿ ಎನ್ ಅಶ್ವತ್ಥ್‌ ನಾರಾಯಣ ತಿಳಿಸಿದರು.

ಜಿಲ್ಲಾಡಳಿತದೊಂದಿಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ಜಿಲ್ಲೆಯಲ್ಲಿನ ಕೋವಿಡ್ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ಅವರು ಪ್ರತಿ ತಾಲೂಕಿನಲ್ಲಿ 500 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್‌ನ ಸ್ಥಾಪಿಸಲು ಸೂಚಿಸಲಾಗಿತ್ತು. ಅದರಂತೆ ಪ್ರಾರಂಭದಲ್ಲಿ 570 ಹಾಸಿಗೆಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಈ ಸಾಮರ್ಥ್ಯವನ್ನು ಪ್ರತಿ ತಾಲೂಕಿನಲ್ಲಿ 500ಕ್ಕೂ ಹೆಚ್ಚು ಹಾಸಿಗೆಗಳ ಸಾಮರ್ಥ್ಯಕ್ಕೆ ವಿಸ್ತರಿಸುವ ನೀಲ ನಕ್ಷೆಯನ್ನು ಜಿಲ್ಲಾಡಳಿತ ಸಿದ್ಧಪಡಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.

ವಿಡಿಯೋ ಕಾನ್ಫರೆನ್ಸ್

500 ಹಾಸಿಗೆಗಳ ಆಸ್ಪತ್ರೆಯನ್ನು ಹಾಸ್ಟೆಲ್ ಇಲ್ಲವೆ ಕಲ್ಯಾಣ ಮಂಟಪಗಳಲ್ಲಿ ಸ್ಥಾಪಿಸುವ ಬಗ್ಗೆ ಪ್ರತಿ ತಾಲೂಕಿನಲ್ಲೂ ಸ್ಥಳಗಳನ್ನು ಗೊತ್ತುಪಡಿಸಿಕೊಳ್ಳಲಾಗಿದೆ. ಯಾವ ತಾಲೂಕಿನಲ್ಲಿ ಯಾವ ಯಾವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅದನ್ನು ವಹಿಸಬೇಕು ಎನ್ನುವ ಬಗ್ಗೆ ಕ್ರಿಯಾ ಯೋಜನೆಯನ್ನು ಮಾಡಿಟ್ಟುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಉಪಮುಖ್ಯಮಂತ್ರಿಗಳಿಗೆ ತಿಳಿಸಿದರು.

ಸುಸಜ್ಜಿತವಾಗಿಸಲು ಸೂಚನೆ :ಜಿಲ್ಲಾಧಿಕಾರಿಗಳು ನೀಡಿದ ಮಾಹಿತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿಗಳು, ಆರಂಭಿಸುವ ಪ್ರತಿಯೊಂದು ಕೋವಿಡ್-19 ಕೇರ್ ಸೆಂಟರ್ ಸುಸಜ್ಜಿವಾಗಿರಬೇಕು. ಯಾವುದೇ ಲೋಪ ಬರಬಾರದು. ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಆಮ್ಲಜನಕವನ್ನು ಅಳೆಯುವ ಆಕ್ಸಿಮೀಟರ್ ಇರಬೇಕು. ಪ್ರತಿ ರೋಗಿಗೂ ಅಗತ್ಯ ಪರಿಕರಗಳಿಂದ ಕೂಡಿರುವ ‘ಕಿಟ್’ ಸಿದ್ಧಪಡಿಸಿ ಇಟ್ಟುಕೊಳ್ಳುವಂತೆ ಉಪಮುಖ್ಯಮಂತ್ರಿಗಳು ತಿಳಿಸಿದರು.

ಆ್ಯಂಬುಲೆನ್ಸ್ ಸಿದ್ಧವಾಗಿರಬೇಕು: ಪ್ರತಿ ತಾಲೂಕು ಸೆಂಟರ್‌ಗಳಿಗೂ ಎರಡು ಇಲ್ಲ ಮೂರು ಆ್ಯಂಬುಲೆನ್ಸ್​ಗಳಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ಯಾವುದೇ ರೋಗಿಯಲ್ಲಿ ಆಮ್ಲಜನಕದ ಇಳಿಕೆ ಕಂಡು ಬಂದ ಕೂಡಲೇ ಅವರಿಗೆ ತೊಂದರೆಯಾಗದಂತೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರಕ್ಕೆ ಇಲ್ಲವೆ ಒಪ್ಪಂದ ಮಾಡಿಕೊಂಡಿರುವ ಆಸ್ಪತ್ರೆಗಳಿಗೆ ಸಾಗಿಸುವ ವ್ಯವಸ್ಥೆಯಾಗಬೇಕು. ಇದರಲ್ಲಿ ಯಾವುದೇ ರೀತಿಯಲ್ಲೂ ಲೋಪವಾಗಬಾರದು ಎಂದು ಅಶ್ವತ್ಥ್‌ ನಾರಾಯಣ ಸೂಚಿಸಿದರು.

ಟ್ರೂನಾಟ್ ಪರೀಕ್ಷಾ ಯಂತ್ರ : ರಾಮನಗರ ಜಿಲ್ಲಾ ಕೇಂದ್ರದಲ್ಲಿ ಕೋವಿಡ್-19 ಮಾದರಿಗಳನ್ನು ಪರೀಕ್ಷಿಸುವ ಲ್ಯಾಬ್ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಒಂದೆರಡು ಗಂಟೆಗಳಲ್ಲಿ ವರದಿಯನ್ನು ನೀಡುವಂತಹ ಟ್ರೂನಾಟ್ ಪರೀಕ್ಷಾ ಯಂತ್ರಗಳನ್ನು ಅಳವಡಿಸಿಕೊಂಡು ಟ್ಯಾಬ್ ಅನ್ನು ಇನ್ನಷ್ಟು ಉತ್ತಮಗೊಳಿಸುವಂತೆ ಹೇಳಿದರು. ಟ್ಯಾಬ್‌ಗೆ ಅಗತ್ಯವಿರುವ ನಾಲ್ಕು ಟ್ರೂನಾಟ್ ಪರೀಕ್ಷಾ ಯಂತ್ರಗಳನ್ನು ಮುಂಬೈನಿಂದ ತರಿಸಿಕೊಳ್ಳಲಾಗುತ್ತಿದೆ. ಇನ್ನು 7 ದಿನಗಳ ಒಳಗಾಗಿ ಈ ಯಂತ್ರಗಳನ್ನು ಅಳವಡಿಸಿ ಪರೀಕ್ಷೆಯನ್ನು ಪ್ರಾರಂಭಿಸಲಾಗುವುದು ಎಂದು ಉಪಮುಖ್ಯಮಂತ್ರಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಮಾಹಿತಿ ನೀಡಿದರು.

ಆಮ್ಲಜನಕ ಪೂರೈಕೆ: ಪ್ರತಿ ತಾಲ್ಲೂಕು ಕೇಂದ್ರಗಳಿಗೆ ಒಂದರಂತೆ ಒಟ್ಟು 5 ಹೈ ಫ್ಲೋ ಆಕ್ಸಿಜನ್ ಪೂರೈಸುವ ಯಂತ್ರಗಳನ್ನು ಖರೀದಿಸಿ ಅವುಗಳನ್ನು ಅಳವಡಿಸಲು ಕ್ರಮ ಕೈಗೊಳ್ಳುವಂತೆ ಉಪಮುಖ್ಯಮಂತ್ರಿಗಳು ತಿಳಿಸಿದರು.

ಕಟ್ಟುನಿಟ್ಟಿನ ಕ್ವಾರಂಟೈನ್: ಜಿಲ್ಲೆಯಲ್ಲಿ ಕಳೆದ ಸೋಮವಾರದಿಂದ ಪ್ರತಿದಿನ 15 ರಿಂದ 30ರ ಒಳಗೆ ಪ್ರಕರಣಗಳು ದಾಖಲಾಗುತ್ತಿದೆ. ಈ ಪೈಕಿ ಬಹುತೇಕ ಪ್ರಕರಣಗಳು ಪ್ರಾಥಮಿಕ ಇಲ್ಲವೆ ದ್ವಿತೀಯ ಸಂಪರ್ಕ ಹೊಂದಿರುವರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಇದರ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಕ್ವಾರಂಟೈನ್ ಅನ್ನು ಕಡ್ಡಾಯವಾಗಿ ಜಾರಿಗೆ ತನ್ನಿ. ಅನಗತ್ಯವಾಗಿ ಓಡಾಡಿದರೆ ಕ್ರಮ ಜರುಗಿಸಿ. ಸಾಂಸ್ಥಿತಿಕ ಕ್ವಾರಂಟೈನ್‌ನಲ್ಲಿ ಇರುವವರಿಗೆ ಯಾವುದೇ ರೀತಿ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಉಪಮುಖ್ಯಮಂತ್ರಿಗಳು ಸೂಚನೆ ನೀಡಿದರು.

ಆ್ಯಂಬುಲೆನ್ಸ್​ಗೆ ಜಿಪಿಎಸ್:ಜಿಲ್ಲೆಗಾಗಿ ಪಡೆದುಕೊಳ್ಳುವ ಎಲ್ಲಾ ಆ್ಯಂಬುಲೆನ್ಸ್​ಗಳಿಗೆ ಜಿಪಿಎಸ್‌ನ ಅಳವಡಿಸಿ ಅವುಗಳ ಜಾಡನ್ನು ಜಿಲ್ಲೆಯಲ್ಲಿರುವ ವಾರ್ ರೂಂನ ಮೂಲಕ ಗಮನಿಸಬೇಕು. ಅವುಗಳ ಓಡಾಟದ ಬಗ್ಗೆ ನೈಜ ಸಮಯದಲ್ಲಿ ಮಾಹಿತಿ ಪಡೆದುಕೊಳ್ಳುವಂತೆ ವ್ಯವಸ್ಥೆ ಮಾಡಿಕೊಳ್ಳಲು ಉಸ್ತುವಾರಿ ಸಚಿವರು ಸಲಹೆ ನೀಡಿದರು.

ABOUT THE AUTHOR

...view details