ಕರ್ನಾಟಕ

karnataka

By

Published : Apr 18, 2021, 3:51 PM IST

ETV Bharat / state

ರಾಮನಗರದಲ್ಲಿ ಕೊರೊನಾ ಜಾಗೃತಿ - ನಿಯಮ ಉಲ್ಲಂಘನೆಯಾಗದಂತೆ ಕ್ರಮ: ಡಿಸಿ

ಸರ್ಕಾರದ ಆದೇಶದಲ್ಲಿ ನಿಗದಿಪಡಿಸಿರುವ ಜನಸಂಖ್ಯೆಯ ಗರಿಷ್ಠ ಮಿತಿಯನ್ನು ಮೀರದಂತೆ ಕ್ರಮ ವಹಿಸಬೇಕಾಗಿರುವುದರಿಂದ ಮತ್ತು ಸೋಂಕು ಹರಡದಂತೆ ತಡೆಯುವ ಸಲುವಾಗಿ ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಮದುವೆ ಮತ್ತು ಸಾರ್ವಜನಿಕ ಸಮಾರಂಭ, ಆಚರಣೆ, ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮುನ್ನ ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿ ಅವರ ಪೂರ್ವಾನುಮತಿಯನ್ನು ಪಡೆದು ಆಯೋಜಕರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.

corona awareness program in ramanagara
ರಾಮನಗರದಲ್ಲಿ ಕೊರೊನಾ ಜಾಗೃತಿ - ನಿಯಮ ಉಲ್ಲಂಘನೆಯಾಗದಂತೆ ಕ್ರಮ: ಡಿಸಿ

ರಾಮನಗರ: ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಜಿಲ್ಲೆಯಲ್ಲಿ ಈ ಮಾರ್ಗಸೂಚಿ ಪಾಲನೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಕೆ. ತಿಳಿಸಿದ್ದಾರೆ.

ರಾಮನಗರದಲ್ಲಿ ಕೊರೊನಾ ಜಾಗೃತಿ

ಜಿಲ್ಲೆಯಲ್ಲಿ ಮದುವೆ, ಸಾರ್ವಜನಿಕ ಸಮಾರಂಭ, ಆಚರಣೆ, ಮನರಂಜನಾ ಕಾರ್ಯಕ್ರಮಗಳ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಸಂಭವವಿರುತ್ತದೆ. ಇದರಿಂದ ಸೋಂಕು ವ್ಯಾಪಕವಾಗಿ ಹರಡುವ ಸಾಧ್ಯತೆಗಳು ಹೆಚ್ಚು. ಸರ್ಕಾರದ ಆದೇಶದಲ್ಲಿ ನಿಗದಿಪಡಿಸಿರುವ ಜನಸಂಖ್ಯೆಯ ಗರಿಷ್ಠ ಮಿತಿಯನ್ನು ಮೀರದಂತೆ ಕ್ರಮ ವಹಿಸಬೇಕಾಗಿರುವುದರಿಂದ ಮತ್ತು ಸೋಂಕು ಹರಡದಂತೆ ತಡೆಯುವ ಸಲುವಾಗಿ ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಮದುವೆ ಮತ್ತು ಸಾರ್ವಜನಿಕ ಸಮಾರಂಭ, ಆಚರಣೆ, ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮುನ್ನ ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿ ಅವರ ಪೂರ್ವಾನುಮತಿಯನ್ನು ಪಡೆದು ಆಯೋಜಕರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.

ಸರ್ಕಾರದ ಆದೇಶದಲ್ಲಿ ನಿಗದಿಪಡಿಸಿರುವಷ್ಟು ಜನರಿಗೆ ಮಾತ್ರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಂಬಂಧಪಟ್ಟ ತಹಶೀಲ್ದಾರ್ ಅವರು ಪಾಸ್​ಗಳನ್ನು ವಿತರಿಸಲು ಕ್ರಮ ವಹಿಸಲಾಗುವುದು. ಮದುವೆ ಮತ್ತು ಸಾರ್ವಜನಿಕ ಸಮಾರಂಭ, ಆಚರಣೆ, ಮನರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಸಮುದಾಯದ ಭವನ, ಕಲ್ಯಾಣ ಮಂಟಪ, ಸಭಾಂಗಣ ಸ್ಥಳಗಳ ಮಾಲೀಕರಿಂದ ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ, ಜಿಲ್ಲಾಡಳಿತ ವತಿಯಿಂದ ಹೊರಡಿಸಿರುವ ಆದೇಶಗಳನ್ವಯ ಕ್ರಮ ವಹಿಸುವ ಬಗ್ಗೆ ದೃಢೀಕರಣ ಪತ್ರವನ್ನು ಪಡೆಯಲಾಗುವುದು. ಆದೇಶದಲ್ಲಿ ಸೂಚಿಸಿರುವ ಜನರ ಸಂಖ್ಯೆಯ ಮಿತಿಯನ್ನು ಮೀರದಂತೆ ಸಾರ್ವಜನಿಕರಿಗೆ ಅವಕಾಶ ನೀಡಲು ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು‌ ಸೂಚಿಸಿದ್ದಾರೆ.

ಕೋವಿಡ್ ನಿಯಂತ್ರಣ ಕ್ರಮಗಳು:

ಹೊಸ ಮಾರ್ಗಸೂಚಿ ಪ್ರಕಾರ ತೆರೆದ ಪ್ರದೇಶದಲ್ಲಿ ಮದುವೆ ನಡೆಯುತ್ತಿದ್ದರೆ 200 ಜನರಿಗೆ ಹಾಗೂ ಕಲ್ಯಾಣ ಮಂಟಪ, ಸಭಾಂಗಣ, ಹಾಲ್ ಹಾಗೂ ಮುಚ್ಚಿದ ಯಾವುದೇ ಪ್ರದೇಶದಲ್ಲಿ ನಡೆಯುವ ಮದುವೆ ಸಮಾರಂಭಕ್ಕೆ 100 ಜನರಿಗೆ ಮಿತಿಗೊಳಿಸಬೇಕು. ಜನ್ಮದಿನ ಹಾಗೂ ಇತರೆ ಆಚರಣೆ ಸಂದರ್ಭದಲ್ಲಿ ತೆರೆದ ಪ್ರದೇಶದಲ್ಲಿ 50 ಹಾಗೂ ಸಭಾಂಗಣ, ಹಾಲ್ ಹಾಗೂ ಇತರೆ ಮುಚ್ಚಿದ ಪ್ರದೇಶದಲ್ಲಿ 25 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು.

ಧಾರ್ಮಿಕ ಆಚರಣೆ-ಸಮಾರಂಭ ನಿಷೇಧ:

ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಧಾರ್ಮಿಕ ಆಚರಣೆ ಹಾಗೂ ಸಮಾರಂಭಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಕೆ ತಿಳಿಸಿದ್ದಾರೆ.

ಇದನ್ನೂ ಓದಿ:ಸೀಟಿ ಹೊಡೆದು ಕೊರೊನಾ ಜಾಗೃತಿ ಮೂಡಿಸಿದ ಡಿಸಿ.. ಇಂದಿನಿಂದ ಸುರಕ್ಷಾ ಪಡೆಯ 65 ಮಂದಿ ಕಾರ್ಯಾಚರಣೆ

ಈ ಸುತ್ತೋಲೆಯಲ್ಲಿನ ಮಾರ್ಗಸೂಚಿಗಳನ್ನು ಉಲ್ಲಂಘಿಸಿದಲ್ಲಿ ಸಂಬಂಧಪಟ್ಟವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 51ರಿಂದ 60ರ ಜತೆಗೆ ಭಾರತೀಯ ದಂಡ ಸಂಹಿತೆಯ ಕಲಂ 188ರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details