ಕರ್ನಾಟಕ

karnataka

ಆಗಸ್ಟ್​ 20 ರಿಂದ ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು:ಅನೂಪ್.ಎ.ಶೆಟ್ಟಿ

ಆಗಸ್ಟ್​ 20ರ ನಂತರ ಜಿಲ್ಲೆಯಾದ್ಯಂತ ಬೈಕ್ ಸವಾರರು ಮಾತ್ರವಲ್ಲ, ಹಿಂಬದಿ ಸವಾರರು ಕೂಡ ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್.ಎ.ಶೆಟ್ಟಿ ಸೂಚನೆ ನೀಡಿದ್ದಾರೆ.

By

Published : Aug 19, 2019, 3:39 AM IST

Published : Aug 19, 2019, 3:39 AM IST

ಆಗಸ್ಟ್​ 20 ರಿಂದ ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು: ಅನೂಪ್.ಎ.ಶೆಟ್ಟಿ

ರಾಮನಗರ:ಸಂಚಾರ ನಿಯಮಗಳ ಸಮರ್ಪಕ ಅನುಷ್ಠಾನಗೊಳಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು, ಅದರಂತೆ ಆಗಸ್ಟ್​ 20ರ ನಂತರ ಜಿಲ್ಲೆಯಾದ್ಯಂತ ಬೈಕ್ ಸವಾರರು ಮಾತ್ರವಲ್ಲ, ಹಿಂಬದಿ ಸವಾರರು ಕೂಡ ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್.ಎ.ಶೆಟ್ಟಿ ಸೂಚನೆ ನೀಡಿದ್ದಾರೆ.

ಹೆಲ್ಮೆಟ್​ ತಪಾಸಣೆ ಮಾಡುತ್ತಿರುವ ಪೊಲೀಸರು

ಈ ಹಿಂದೆ ಕೂಡ ನಿಯಮ ಜಾರಿಯಲ್ಲಿದ್ದರೂ ಅನುಷ್ಠಾನಕ್ಕೆ ಬಂದಿರಲಿಲ್ಲ. ಇದೀಗ ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಅನೂಪ್.ಎ. ಶೆಟ್ಟಿಯವರೇ ಅಖಾಡಕ್ಕಿಳಿದು ಖಡಕ್ ಸೂಚನೆ ನೀಡಿರುವ ಬೆನ್ನಲ್ಲೇ ಈವರೆಗೂ ಸಂಚಾರಿ ನಿಯಮಗಳನ್ನ ಗಾಳಿಗೆ ತೂರಿದ್ದ ವಾಹನ ಸವಾರರಿಗೆ ಚಾಟಿ ಬೀಸಲು ಮುಂದಾಗಿದ್ದಾರೆ. ರಸ್ತೆ ಅಪಘಾತದಿಂದ ಮೃತ ಪಡುವವರ ಸಂಖ್ಯೆ ಇಳಿಮುಖಗೊಳಿಸುವ ಸಲುವಾಗಿ ಈ ನಿಯಮವನ್ನು ಕಡ್ಡಾಯಗೊಳಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿಯೂ ಕಾರ್ಯಾಚರಣೆ ನಡೆಸಿ ಹೆಲ್ಮೆಟ್ ಜಾಗೃತಿ ಮೂಡಿಸಲು ಪೊಲೀಸರು ಮುಂದಾಗಿದ್ದಾರೆ.

ಕಳೆದ 3 ವರ್ಷಗಳ ಹಿಂದೆ ಹೆಲ್ಮೆಟ್ ಬಳಕೆ ಕಡ್ಡಾಯಗೊಳಿಸಿ ನ್ಯಾಯಾಲಯ ಆದೇಶ ಹೊರಡಿಸಿತ್ತಾದರೂ ಅನುಷ್ಠಾನ ಮಾತ್ರ ಅಸಮರ್ಪಕವಾಗಿತ್ತು. ಇದರ ಬೆನ್ನಲ್ಲೆ ಹೆಲ್ಮೆಟ್ ಬಳಸದೆ ಅಪಘಾತಕ್ಕೀಡಾಗುವ ವಾಹನ ಸವಾರರಿಗೆ ವಿಮಾ ಸೌಲಭ್ಯ ನೀಡದಿರಲು ವಿಮಾ ಕಂಪನಿಗಳು ನಿರ್ಧರಿಸಿದ್ದವು. ಈ ಎಲ್ಲದರ ಪರಿಣಾಮವಾಗಿ ಪೊಲೀಸ್ ಇಲಾಖೆಯು ಆಪರೇಷನ್ ಹೆಲ್ಮೆಟ್ ಕಾರ್ಯಾಚರಣೆಗಿಳಿದಿದ್ದು, ಸಂಚಾರಿ ನಿಯಮಗಳನ್ನು ಇನ್ನಷ್ಟು ಬಿಗಿ ಮಾಡಲು ಮುಂದಾಗಿದೆ.

ಐಎಸ್‌ಐ ಮಾರ್ಕ್‌ವುಳ್ಳ ಗುಣಮಟ್ಟಣದ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವ ಸವಾರರಿಗೆ ಮೊದಲ ಬಾರಿಗೆ ಕಾಯ್ದೆ ಬಗ್ಗೆ ತಿಳಿ ಹೇಳಲಾಗುವುದು. ಬೀಟ್ ಪೊಲೀಸರ ಮೂಲಕವು ಅರಿವು ಮೂಡಿಸಲಾಗುವುದು. 2ನೇ ಬಾರಿಗೆ ದಂಡ ವಿಧಿಸುವ ಪೊಲೀಸ್ ಇಲಾಖೆ, ಮೂರನೇ ಬಾರಿಗೆ ದಂಡದೊಂದಿಗೆ ಚಾಲಕನ ಡಿಎಲ್ ಅಮಾನತುಗೊಳಿಸಲು ಆರ್‌ಟಿಒ ಇಲಾಖೆಗೆ ಶಿಫಾರಸ್ಸು ಮಾಡಲಿದೆ.

ರಸ್ತೆ ಅಪಘಾತದಲ್ಲಿ ಹೆಲ್ಮೆಟ್ ಧರಿಸದೇ ಮೃತಪಟ್ಟ ವಾಹನ ಸವಾರರ ಸಂಖ್ಯೆ ಕಳೆದ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ಶೇ.40 ರಷ್ಟು ಏರಿಕೆಗೊಂಡಿದ್ದು, 2013ರಿಂದ ಈವರೆಗೂ 300ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲೂ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಭವಿಸುವ ಅಪಘಾತಗಳ ಪ್ರಮಾಣಕ್ಕೆ ಲೆಕ್ಕವೇ ಇಲ್ಲದಂತಾಗಿದೆ. ಹೀಗಾಗಿ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿ ಪೊಲೀಸ್ ಇಲಾಖೆ ಆದೇಶಿಸಿದೆ.

ಹಣಕ್ಕೂ ಲೆಕ್ಕ :
ವ್ಯಾಪಕ ಭ್ರಷ್ಟಚಾರದ ಆರೋಪ ಹಿನ್ನೆಲೆ, ಪೊಲೀಸ್ ಇಲಾಖೆಗೆ ಹೊಸ ಕಾಯ್ದೆ ರೂಪುಗೊಳಿಸಲು ಎಸ್ಪಿ ಆದೇಶ ಹೊರಡಿಸಿದ್ದಾರೆ. ಪ್ರತಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯು ತಮ್ಮ ಜೇಬಿನಲ್ಲಿರುವ ಹಣವನ್ನು ಠಾಣೆಯಲ್ಲಿ ಲೆಕ್ಕಕೊಟ್ಟು ಸಂಚಾರಿ ನಿಯಮಗಳ ಬಗ್ಗೆ ರಸ್ತೆಗಿಳಿಯಬೇಕು. ಸಂಜೆ ಮನೆಗೆ ಹೋಗುವಾಗ ಒಂದು ಪೈಸೆಯು ಈ ಲೆಕ್ಕದಲ್ಲಿ ಹೆಚ್ಚಾಗುವಂತಿಲ್ಲ. ಪರಿಶೀಲನೆ ವೇಳೆ ಹಣದಲ್ಲಿ ವ್ಯತ್ಯಾಸ ಕಂಡು ಬಂದರೆ, ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಎಸ್ಪಿ ಮುಂದಾಗಿದ್ದಾರೆ. ಇದಲ್ಲದೇ, ಅಕ್ರಮ ಮರಳುಗಾರಿಕೆ, ಕ್ರಷರ್ ತಡೆಯುವುದಕ್ಕೂ ಯೋಜನೆಗಳನ್ನು ರೂಪಿಸಿದ್ದು, ವರ್ಗಾವಣೆಯಾಗುವವರು ಈಗಲೇ ಮತ್ತೊಂದು ಇಲಾಖೆಗೆ ಹೋಗಿಬಿಡಿ. ಇಲ್ಲವೇ ಕಾನೂನಿನ ಚೌಕಟ್ಟಿನೊಳಗೆ ಕೆಲಸ ಮಾಡಿ ಎಂದು ಎಸ್ಪಿ ಡಾ.ಅನೂಪ್ ಎ.ಶೆಟ್ಟಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.

ಒಂದಷ್ಟು ಮೈನರ್ ಆಪರೇಷನ್..!

ಪೊಲೀಸ್ ಇಲಾಖೆಯನ್ನು ಇನ್ನಷ್ಟು ಬಿಗಿಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು ಒಂದಷ್ಟು ನಿಯಮಗಳನ್ನು ರೂಪಿಸಿದ್ದಾರೆ. ಹಳೆಯ ಪ್ರಕರಣಗಳಿಗೆ ಶೀಘ್ರವೇ ಮುಕ್ತಿ ನೀಡಬೇಕು. ಹೊಸ ಪ್ರಕರಣಗಳ ಸಂಖ್ಯೆ ಏರಿಕೆ ಮಾಡುವ ಬದಲು ಸ್ಥಳದಲ್ಲೇ ಪರಿಹಾರ ಸೂಚಿಸುವುದು. ಸಂಚಾರಿ ನಿಯಮಗಳ ಅನುಷ್ಠಾನ. ಭ್ರಷ್ಟಚಾರ ತಡೆಗೆ ಪೊಲೀಸರ ಬಳಿಯಲ್ಲಿನ ಪೈಸೆ ಪೈಸೆಗೂ ಲೆಕ್ಕ. ಹೀಗೆ ಅನೇಕ ಸುಧಾರಣೆಗಳನ್ನು ತರಲು ಪೊಲೀಸ್ ಇಲಾಖೆ ಮುಂದಾಗಿದೆ.

ABOUT THE AUTHOR

...view details