ಕರ್ನಾಟಕ

karnataka

ETV Bharat / state

ಬಿಜೆಪಿಯವರು ಬ್ರಿಟೀಷರಿದ್ದಂತೆ, ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ: ಶಾಸಕ ಎಚ್.ಸಿ.ಬಾಲಕೃಷ್ಣ

Congress MLA H.C.Balakrishna criticizes BJP: ಬಿಜೆಪಿಯವರು ಬ್ರಿಟೀಷರಿದ್ದಂತೆ, ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ- ಶಾಸಕ ಎಚ್.ಸಿ. ಬಾಲಕೃಷ್ಣ.

By ETV Bharat Karnataka Team

Published : Nov 27, 2023, 12:05 PM IST

MLA HC Balakrishna controversial statement
ಶಾಸಕ ಎಚ್.ಸಿ. ಬಾಲಕೃಷ್ಣ ವಿವಾದಾತ್ಮಕ ಹೇಳಿಕೆ

ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿದರು.

ರಾಮನಗರ:''ಬಿಜೆಪಿಯವರು ಬ್ರಿಟೀಷರು ಇದ್ದಂಗೆ. ದೇಶದಲ್ಲಿ ಅಮಾಯಕ ಸೈನಿಕರನ್ನು ಬಲಿ ಕೊಟ್ಟಂತಹ ಕೀರ್ತಿ ಮೋದಿ ಸರಕಾರಕ್ಕೆ ಸಲ್ಲುತ್ತದೆ. ಇಳಿ ವಯಸ್ಸಿನಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಕುಮಾರಣ್ಣ ಕೋಮುವಾದಿಯಾಗಿ ಮಾಡಿಬಿಟ್ಟರು'' ಎಂದು ಕಾಂಗ್ರೆಸ್ ಶಾಸಕ ಎಚ್.ಸಿ.ಬಾಲಕೃಷ್ಣ ಟೀಕಿಸಿದರು.

ಮಾಗಡಿ ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿಂದು ಮಾತನಾಡಿದ ಅವರು, ''ಬಿಜೆಪಿಯವರು ಯಾರು ಪ್ರಬಲವಾಗಿರುತ್ತಾರೋ ಅವರ ಮಧ್ಯೆ ಗುಂಪು ಮಾಡಿ, ಎತ್ತಿಕಟ್ಟಿ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಆಗಿರುವ ಬಿಎಸ್‍ಪಿ ರೀತಿಯೇ, ಕರ್ನಾಟಕದಲ್ಲೂ ಜೆಡಿಎಸ್ ಪಕ್ಷವನ್ನು ಬಿಜೆಪಿಯವರು ಮಾಡದಿದ್ದರೆ, ನಾನು ನನ್ನ ಹೆಸರು ಬದಲಾಯಿಸುತ್ತೇನೆ'' ಎಂದು ಸವಾಲು ಹಾಕಿದರು. ''ಈಗಲೇ ಜೆಡಿಎಸ್ ಪಕ್ಷದವರು ಎಚ್ಚೆತ್ತುಕೊಳ್ಳದಿದ್ದರೆ ಅವರ ಅಸ್ತಿತ್ವವನ್ನು ಸಂಪೂರ್ಣ ಮುಗಿಸುವ ಕೀರ್ತಿ ಮುಂದಿನ ದಿನಗಳಲ್ಲಿ ಬಿಜೆಪಿಯವರಿಗೆ ಸಲ್ಲುತ್ತದೆ'' ಎಂದರು.

''ಮಾಯಾವತಿ ಮುಂದಿನ ಪ್ರಧಾನಿ ಎಂಬಂತೆ ಹೊರಹೊಮ್ಮಿದ್ದ ಅವರನ್ನೇ ಉತ್ತರ ಪ್ರದೇಶದಲ್ಲಿ ಹೆಸರಿಲ್ಲದಂತೆ ಬಿಜೆಪಿಯವರು ಮಾಡಿದ್ದಾರೆ ಎಂದರೆ, ಇನ್ನೂ ಕರ್ನಾಟಕದ ಕುಮಾರಣ್ಣ ಯಾವ ಲೆಕ್ಕ?. ಕುಮಾರಣ್ಣನಿಗೆ ನಾವೇ ಕಾಣುತ್ತೇವೆ. ನಮ್ಮನ್ನು ನೋಡಿದ ತಕ್ಷಣ ಬಿಜೆಪಿಯವರನ್ನು ತಬ್ಬಿಕೊಳ್ಳುತ್ತಾರೆ. ಅನೇಕ ವರ್ಷಗಳಿಂದ ನಾವು ಜಾತ್ಯಾತೀತ ಎಂದು ಹೇಳಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಕುಮಾರಣ್ಣ ಕೋಮುವಾದಿಯಾಗಿ ಮಾಡಿಬಿಟ್ಟರು'' ಎಂದು ಹೇಳಿದರು.

''ಈ ಹಿಂದೆ, ಪುಲ್ವಾಮ ದಾಳಿಯಾಗದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನೆಗೆ ಕಳುಹಿಸುತ್ತಿದ್ದರು. ದೇಶದಲ್ಲಿ ಅಮಾಯಕ ಸೈನಿಕರನ್ನು ಬಲಿ ಕೊಟ್ಟಿರುವ ಕೀರ್ತಿ ಮೋದಿ ಸರ್ಕಾರಕ್ಕೆ ಸಲ್ಲುತ್ತದೆ'' ಎಂದು ದೂರಿದರು. ''ದೇಶದಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್. ಅದಕ್ಕೆ ಉದಾಹರಣೆ ಮಹಾರಾಷ್ಟ್ರದ ಸುಶೀಲ್ ಕುಮಾರ್ ಶಿಂಧೆ. ಬಿಜೆಪಿಯವರು ದಲಿತರನ್ನು ಮುಖ್ಯಮಂತ್ರಿ ಮಾಡುವುದು ಬೇಡ, ಮುಖ್ಯಮಂತ್ರಿಯಾಗಿದ್ದ ಮಾಯಾವತಿ ಅವರನ್ನು ಬಿಜೆಪಿಗೆ ಸೇರಿಸಿಕೊಂಡು ಸಂಪೂರ್ಣವಾಗಿ ನೆಲಕಚ್ಚಿಸಿದ್ದಾರೆ. ಇದರಿಂದ ಅವರು ಮೇಲಕ್ಕೇಳಲು ಸಾಧ್ಯವಾಗುತ್ತಿಲ್ಲ. ಅಂಥ ಸ್ಥಿತಿಗೆ ಬಿಜೆಪಿಯವರು ತಲುಪಿದ್ದಾರೆ'' ಎಂದು ಲೇವಡಿ ಮಾಡಿದರು.

ಇದನ್ನೂ ಓದಿ:ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆ ಇಲ್ಲ, ಜನವರಿಯಲ್ಲಿ ಯುವನಿಧಿ ಜಾರಿ: ತೆಲಂಗಾಣದಲ್ಲಿ ಸಿದ್ದರಾಮಯ್ಯ ಹೇಳಿಕೆ

ABOUT THE AUTHOR

...view details