ಕರ್ನಾಟಕ

karnataka

ETV Bharat / state

ಸೋಲಾರ್ ಶಕ್ತಿ ಬಗ್ಗೆ ಜಾಗೃತಿ: ಸೆಲ್ಕೋದಿಂದ ಸೌರಶಕ್ತಿ ಆಧಾರಿತ ಉತ್ಪನ್ನ ವಿತರಣೆ

ಸೆಲ್ಕೋ ಕಂಪನಿಯು ನೆಕ್ಸ್ಟ್‌ ಎಜುಕೇಷನ್‌ ಎನ್ನುವ ತಂತ್ರಾಂಶ ರೂಪಿಸಿದ್ದು, ಇದರಲ್ಲಿ ಪೂರ್ವ ಪ್ರಾಥಮಿಕ ಶಾಲೆಯಿಂದ ದ್ವಿತೀಯ ಪಿಯುವರೆಗಿನ ಪಠ್ಯವನ್ನು ಸ್ಮಾರ್ಟ್‌ ಕ್ಲಾಸ್‌ ರೂಪದಲ್ಲಿ ನೀಡಲಾಗಿದೆ.

By

Published : Jun 30, 2022, 9:13 AM IST

Updated : Jun 30, 2022, 12:49 PM IST

Solar sewing machine
ಸೌರಚಾಲಿತ ಹೊಲಿಗೆ ಯಂತ್ರ

ರಾಮನಗರ :ರಾಮನಗರ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಸೆಲ್ಕೋ ಸೋಲಾರ್‌ ಕಂಪನಿಯು ಸೆಲ್ಕೋ ಫೌಂಡೇಶನ್‌ ಸಹಯೋಗದಲ್ಲಿ ಬಡ ಹಾಗೂ ಮಧ್ಯಮ ವರ್ಗದ ರೈತರು, ಶ್ರಮಿಕರಿಗೆ ಅನುಕೂಲವಾಗುವ 50 ಕ್ಕೂ ಹೆಚ್ಚು ಮಾದರಿಯ ಸೌರಶಕ್ತಿ ಆಧಾರಿತ ಉತ್ಪನ್ನಗಳನ್ನು ವಿತರಿಸಿದೆ‌. ರಾಮನಗರ ಜಿಲ್ಲೆಯಲ್ಲಿ ಇದರ ಫಲಾನುಭವಿಗಳನ್ನು ಕಂಪನಿಯು ಇಂಧನ ಆಧಾರಿತ ಸಾಮಾಜಿಕ ಅಭಿವೃದ್ಧಿ ಹೆಸರಿನಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಚನ್ನಪಟ್ಟಣ ತಾಲೂಕಿನ ಎಚ್‌. ಬ್ಯಾಡರಹಳ್ಳಿಯಲ್ಲಿ ದೇವರಾಜಾಚಾರ್ ಅವರ ಮನೆಯಲ್ಲಿನ ಸೌರಚಾಲಿತ ಕುಲುಮೆ, ಸುಳ್ಳೇರಿ ಗ್ರಾಮದ ಮಹಿಳೆಯರಿಗೆ ನೀಡಲಾದ ಸೌರಚಾಲಿತ ಹೊಲಿಗೆ ಯಂತ್ರ, ಸೋಗಾಲಪಾಳ್ಯದ ಭಾಗ್ಯಮ್ಮ ಅವರ ಮನೆಯಲ್ಲಿನ ಸೌರಚಾಲಿತ ಹಾಲು ಕರೆಯುವ ಯಂತ್ರ, ಕನಕಪುರ ತಾಲೂಕಿನ ಕ್ವಾಟಳ್ಳಿಯ ಅಣ್ಣಯ್ಯಾಚಾರ್‌ ಅವರ ಮನೆಯಲ್ಲಿನ ಸೌರಚಾಲಿತ ಕುಲುಮೆ, ರಾಮನಗರ ತಾಲೂಕಿನ ಅಚ್ಚಲು ಗ್ರಾಮದಲ್ಲಿನ ರೇಣುಕಮ್ಮ ಅವರಿಗೆ ನೀಡಲಾದ ಸೌರಶಕ್ತಿ ಆಧಾರಿತ ಜೆರಾಕ್ಸ್ ಯಂತ್ರಗಳ ಕಾರ್ಯವೈಖರಿ ವೀಕ್ಷಿಸಲಾಯಿತು.

ಸೆಲ್ಕೋದಿಂದ ಸೌರಶಕ್ತಿ ಆಧಾರಿತ ಉತ್ಪನ್ನ ವಿತರಣೆ

ಗಮನ ಸೆಳೆಯುತ್ತಿದೆ ಸ್ಮಾರ್ಟ್ ಕ್ಲಾಸ್ ಕಲಿಕೆ ಮಾದರಿ:ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚಕ್ಕೆರೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸೌರಶಕ್ತಿ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ ಕ್ಲಾಸ್‌ ಕಲಿಕೆ ಮಾದರಿ ಗಮನ ಸೆಳೆಯುತ್ತಿದೆ. ಸೆಲ್ಕೋ ಕಂಪನಿಯು ನೆಕ್ಸ್ಟ್‌ ಎಜುಕೇಷನ್‌ ಎನ್ನುವ ತಂತ್ರಾಂಶ ರೂಪಿಸಿದ್ದು, ಇದರಲ್ಲಿ ಪೂರ್ವ ಪ್ರಾಥಮಿಕ ಶಾಲೆಯಿಂದ ದ್ವಿತೀಯ ಪಿಯುವರೆಗಿನ ಪಠ್ಯವನ್ನು ಸ್ಮಾರ್ಟ್‌ ಕ್ಲಾಸ್‌ ರೂಪದಲ್ಲಿ ನೀಡಲಾಗಿದೆ.

ಸೌರಚಾಲಿತ ಕುಲುಮೆ

ಸರ್ಕಾರಿ ಶಾಲೆಯಲ್ಲಿನ ತರಗತಿಗಳೂ ಸ್ಮಾರ್ಟ್‌ ಆಗಿವೆ. ಸೌರಶಕ್ತಿ ಆಧಾರಿತ ಕಲಿಕೆ ಇದಾಗಿದ್ದು, ವಿದ್ಯುತ್‌ನ ಅಗತ್ಯವೂ ಇಲ್ಲ. ಈ ಹೊಸ ಕ್ಲಾಸ್ ಬಂದ ಮೇಲೆ ಇನ್ನಷ್ಟು ಸ್ಮಾರ್ಟ್‌ ಆಗಿದ್ದು, ಕಲಿಕೆ ಸುಲಭವಾಗಿದೆ ಎಂದು ಶಾಲೆಯ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಈ ಸ್ಮಾರ್ಟ್‌ ಕ್ಲಾಸ್‌ಗೆ ಒಟ್ಟು 1.75 ಲಕ್ಷ ರೂ. ವ್ಯಯಿಸಿದ್ದು, ಇದರಲ್ಲಿ ಶೇ. 50ರಷ್ಟನ್ನು ಶಾಲೆ ಹಾಗೂ ಉಳಿದಿದ್ದನ್ನು ಸೆಲ್ಕೋ ಸಂಸ್ಥೆಯೇ ಭರಿಸಿದೆ. 5 ವರ್ಷ ಕಾಲ ಉಚಿತ ನಿರ್ವಹಣೆ ಇರಲಿದೆ.

ಆಧುನಿಕ ಸ್ಪರ್ಶ :ರಾಮನಗರ ಜಿಲ್ಲೆಯ ಬೇವೂರು ಗ್ರಾಮದಲ್ಲಿನ ಕುಂಬಾರಿಕೆ ಕಲೆ ಈಗ ಆಧುನಿಕ ಸ್ಪರ್ಶ ಪಡೆದಿದೆ. ಮಡಿಕೆ – ಕುಡಿಕೆ ತಯಾರಾಗುವ ತಿರುಗು ಮಣೆಗೆ ಸೌರ ವಿದ್ಯುತ್‌ ಸಂಪರ್ಕ ದೊರೆತಿದ್ದು, ಇದರಿಂದ ಉತ್ಪಾದನೆ ದುಪ್ಪಟ್ಟಾಗಿ ಆದಾಯವೂ ಹೆಚ್ಚಿದೆ. ಚನ್ನಪಟ್ಟಣ ತಾಲೂಕಿನ ಈ ಗ್ರಾಮ ಕುಡಿಕೆ ಬೇವೂರು ಎಂತಲೇ ಪ್ರಸಿದ್ಧಿ.

ಕುಂಬಾರಿಕೆ

ಇಲ್ಲಿ ತಯಾರಾಗುವ ಮಡಿಕೆಯಾಕಾರದ ಪುಟ್ಟ ಕುಡಿಕೆಗಳಿಗೆ ಜಿಲ್ಲೆ – ಹೊರ ಜಿಲ್ಲೆಯಲ್ಲೂ ಬೇಡಿಕೆ ಇದೆ. ಸುಮಾರು 30 ಕುಟುಂಬಗಳು ಈ ಕಸುಬಿನಲ್ಲಿ ತೊಡಗಿಸಿಕೊಂಡಿವೆ. ತಲೆತಲಾಂತರದಿಂದ ಈ ವೃತ್ತಿ ಮಾಡುತ್ತಾ ಬಂದಿರುವ ಕುಟುಂಬಗಳಿಗೆ ಸೆಲ್ಕೋ ಸೋಲಾರ್‌ ಲೈಟ್‌ ಕಂಪನಿ ಸೋಲಾರ್‌ ಚಾಲಿತ ಮಡಿಕೆ ಮಾಡುವ ಚಕ್ರವನ್ನು ಒದಗಿಸಿದೆ. ಸೌರಶಕ್ತಿಯನ್ನೇ ಬಳಸಿಕೊಂಡು ಈ ಮಣೆ ತಿರುಗುತ್ತಿದ್ದು, ಇದರಿಂದ ಶ್ರಮಿಕರ ಸಮಯದ ಉಳಿತಾಯದ ಜೊತೆಗೆ ಉತ್ಪಾದನೆಯೂ ಹೆಚ್ಚಿದೆ.

ಬೇವೂರಿನ ಏಳು ಮನೆಗಳಲ್ಲಿ ಈಗಾಗಲೇ ಈ ಯಂತ್ರಗಳನ್ನು ಸ್ಥಾಪಿಸಲಾಗಿದ್ದು, ವಿದ್ಯುತ್‌ನ ಸಹಾಯವಿಲ್ಲದೆಯೇ ಸೌರಶಕ್ತಿಯಿಂದಲೇ ಇವು ತಿರುಗುತ್ತಿವೆ. ದಿನಕ್ಕೆ 7–8 ಗಂಟೆ ಉಪಯೋಗಿಸಬಹುದಾಗಿದೆ. ಬ್ಯಾಟರಿ, ಇನ್‌ವರ್ಟರ್ ಸೇರಿದಂತೆ ಇದಕ್ಕೆ 70 ಸಾವಿರ ರೂ. ವೆಚ್ಚ ತಗುಲಿದ್ದು, ಇದರಲ್ಲಿನ ಒಂದು ಪಾಲನ್ನು ಸೆಲ್ಕೋ ಹಾಗೂ ಉಳಿದಿದ್ದನ್ನು ಫಲಾನುಭವಿಗಳು ಭರಿಸಿದ್ದಾರೆ.

ಸೌರಚಾಲಿತ ಹಾಲು ಕರೆಯುವ ಯಂತ್ರ

ಈ ಮೊದಲು ಕೈಯಿಂದ ಮಣೆ ತಿರುಗಿಸಿ ಕುಡಿಕೆ ಮಾಡಲು ಸಮಯ ಹಿಡಿಯುತ್ತಿತ್ತು. ದಿನಕ್ಕೆ ಹೆಚ್ಚೆಂದರೆ 700 ಕುಡಿಕೆ ಮಾಡುತ್ತಿದ್ದೆವು. ಸೌರಮಣೆ ಬಂದ ಮೇಲೆ ಉತ್ಪಾದನೆಯು ದಿನಕ್ಕೆ 1,500 ಕ್ಕೆ ಏರಿದೆ. ಅದರಂತೆ ನಮ್ಮ ಆದಾಯವು ಕೂಡ ಹೆಚ್ಚಾಗಿದೆ.

ಸೌರಶಕ್ತಿಯಿಂದ ಶುದ್ಧ ನೀರು ಘಟಕ :ರಾಮನಗರ ತಾಲೂಕಿನ ಚೌಡೇಶ್ವರಿಪುರದಲ್ಲಿ ಸೆಲ್ಕೋದಿಂದ ಸೌರಶಕ್ತಿಯಿಂದಲೇ ಕಾರ್ಯ ನಿರ್ವಹಿಸುವ 500 ಲೀಟರ್ ಸಾಮರ್ಥ್ಯದ ಶುದ್ಧ ನೀರು ಘಟಕ ಸ್ಥಾಪಿಸಲಾಗಿದೆ. ನೂರು ಕುಟುಂಬಗಳ ಪುಟ್ಟ ಗ್ರಾಮಕ್ಕೆ ಬೇಕಾಗುವಷ್ಟು ಶುದ್ಧ ನೀರನ್ನು ಈ ಘಟಕವೇ ಪೂರೈಸುತ್ತಿದೆ. ವಿದ್ಯುತ್‌ ಕಡಿತಗೊಂಡರೂ ಇಲ್ಲಿ ನೀರು ಪೂರೈಕೆ ನಿಲ್ಲುವುದಿಲ್ಲ. ಈ ಘಟಕ ನಿರ್ಮಾಣಕ್ಕಾಗಿ ಸೆಲ್ಕೋ ಒಟ್ಟು 8.5 ಲಕ್ಷ ರೂ. ವ್ಯಯಿಸಿದೆ.

ಸಂಪೂರ್ಣ ಸೌರಚಾಲಿತ ಎನ್ನುವುದು ಇದರ ವಿಶೇಷ. ಇದರಿಂದ ವಿದ್ಯುತ್‌ ಬಿಲ್‌ ತಪ್ಪಿದೆ. ನೀರಿನ ಬಿಲ್‌ನಿಂದ ಸಂಗ್ರಹವಾಗುವ ಹಣವು ಯಂತ್ರ ನಿರ್ವಹಣೆ ಜೊತೆಗೆ ಒಬ್ಬ ಮಹಿಳೆಗೆ ಉದ್ಯೋಗವನ್ನೂ ನೀಡಿದೆ. ಈಗ ಇರುವ ಘಟಕಗಳನ್ನೂ ಸೌರಶಕ್ತಿಗೆ ಬದಲಿಸಿಕೊಳ್ಳಲು 3.5 ಲಕ್ಷ ರೂ. ಸಾಕು. ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇಂತಹ 40 ಶುದ್ಧ ಗಂಗಾ ಘಟಕಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ.

ಇದನ್ನೂ ಓದಿ :ಸೋಲಾರ್​ ಕಾರು ತಯಾರಿಸಿದ ಕಾಶ್ಮೀರಿ ಗಣಿತ ಶಾಸ್ತ್ರಜ್ಞ

Last Updated : Jun 30, 2022, 12:49 PM IST

ABOUT THE AUTHOR

...view details