ರಾಯಚೂರು:ಕೃಷ್ಣಾ ನದಿಗೆ ಸ್ನಾನಕ್ಕೆ ತೆರಳಿದ ಇಬ್ಬರು ನೀರು ಪಾಲಾಗಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ತಾಲೂಕಿನ ಶಕ್ತಿನಗರದ ಬಳಿಯ ಕೃಷ್ಣಾ ಸೇತುವೆ ಬಳಿ ಶನಿವಾರ ಈ ದುರ್ಘಟನೆ ಸಂಭವಿಸಿದೆ.
ರಾಯಚೂರು ನಗರದ ಕೆಇಬಿ ಕಾಲೋನಿಯ ಗಣೇಶ್(40), ಉದಯಕುಮಾರ್ (38) ಮೃತ ವ್ಯಕ್ತಿಗಳೆಂದು ಗುರುತಿಸಲಾಗಿದೆ. ಇಬ್ಬರೂ ಜೆಸ್ಕಾಂನಲ್ಲಿ ಲೈನ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಇಬ್ಬರ ಮೃತದೇಹಳು ಪತ್ತೆಯಾಗಿವೆ.
ಜೆಸ್ಕಾಂನಲ್ಲಿ ಲೈನ್ ಮ್ಯಾನ್ ಕಾರ್ಯನಿರ್ವಹಿಸುವ ರವಿ, ಖಾಲೀಲ್ ಜೊತೆ ಮೃತರಾದ ಉದಯಕುಮಾರ್, ಗಣೇಶ್ ನದಿಗೆ ಸಂಕ್ರಾಂತಿ ಅಂಗವಾಗಿ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ಗಣೇಶ್ ಎನ್ನುವವರು ನದಿಯ ನೀರಿನಲ್ಲಿ ಸ್ನಾನ ಮಾಡುವಾಗ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತಿದ್ದರು. ಇದನ್ನ ಕಂಡ ಉದಯಕುಮಾರ್ ರಕ್ಷಣೆ ಮಾಡಲು ಹೋಗಿ ಅವರೂ ಕೂಡ ನೀರುಪಾಲಾಗಿದ್ದಾರೆ.
ಸಂಕ್ರಾಂತಿ ಹಿನ್ನೆಲೆ ನದಿಗೆ ಸ್ನಾನಕ್ಕೆಂದು ಹೋದ ಇಬ್ಬರು ನೀರುಪಾಲು ಇದನ್ನು ಕಂಡು ಇನ್ನುಳಿದ ಸ್ನೇಹಿತರು ಹತ್ತಿರದಲ್ಲೇ ಇದ್ದ ಮೀನುಗಾರರನ್ನು ಕರೆದಿದ್ದಾರೆ. ತಕ್ಷಣವೇ ಮೀನುಗಾರರು ಆಗಮಿಸಿ ರಕ್ಷಣಾ ಕಾರ್ಯಾಚರಣೆ ಮಾಡಿದರೂ ಅವರನ್ನು ಬದುಕಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಶಕ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
(ಇದನ್ನೂ ಓದಿ: ದಯವಿಟ್ಟು ಗಮನಿಸಿ... ಕೋವಿಡ್ ಟೆಸ್ಟಿಂಗ್ ವಿಧಾನ ಬದಲಿಸಿ: ಸಿಕ್ಕ ಸಿಕ್ಕವರಿಗೆಲ್ಲ ಟೆಸ್ಟಿಂಗ್ ಅಗತ್ಯವಿಲ್ಲ ಎಂದ ICMR)